ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ಒಡಲಲ್ಲಿ ಮೀನಿಗೂ ಬರ

ಸಾಗರ, ಸಮುದ್ರತೀರ ಹಾಗೂ ಒಳನಾಡಿನ ವಿವೇಕರಹಿತ ನಿರ್ವಹಣೆಯ ಪರಿಣಾಮ
Last Updated 6 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ವರುಣದೇವನ ಕೃಪೆಯಿರುವ ಕರಾವಳಿಯಲ್ಲಿ ಅಂತ ರ್ಜಲವು ಬತ್ತಿ, ಕುಡಿಯುವ ನೀರಿಗೂ ಕೊರತೆಯಾಗತೊಡಗಿ ದಶಕವೇ ಸಂದಿದೆ. ಇದೀಗ, ಸಮುದ್ರದಲ್ಲೇ ಮೀನಿಗೆ ಬರ ಬರುತ್ತಿದೆ! ಕಡಲತಡಿಯ ಆರ್ಥಿಕತೆಯ ಆಧಾರವಾದ ನೈಸರ್ಗಿಕ ನೆಲೆಗಟ್ಟೇ ಕುಸಿಯುತ್ತಿರುವ ದ್ಯೋತಕವಿದು. ವಾತಾವರಣದ ಅಗಾಧ ತೇವಾಂಶ ದಿಂದಾಗಿ ಸದಾ ಹಸಿರಾಗಿ ತೋರುವ ಕರಾವಳಿ ಹಾಗೂ ನೀಲಸಾಗರವನ್ನು ಆಳವಾಗಿ ಗಮನಿಸಿದರೆ, ತೋರು ವುದು ಇಲ್ಲಿನ ಗಂಭೀರ ಪರಿಸರ ಬಿಕ್ಕಟ್ಟುಗಳು ಹಾಗೂ ಜನಜೀವನದ ಸಂಕಟಗಳು ಮಾತ್ರ.

ಸಾಗರತೀರದ ಉದ್ದಕ್ಕೂ ಪಾರಂಪರಿಕ ಮೀನುಗಾರಿಕಾ ಸಮುದಾಯಗಳಿವೆ. ಇವರ ನಾಡದೋಣಿ ಬಲೆಗಳಿಗೆ, ಕಳೆದ ದಶಕದ ಆರಂಭದವರೆಗೂ ಬಂಗುಡೆ, ಸೌಂದಾಳೆ, ಮೋರಿ, ಕಾಂಡೆ, ಬೋಂಕೆ, ತಾರ್ಲೆ, ತೊಟ್ಟೆ, ಭೂತಾಯಿ, ಗಾಳಿಯಂಥ ಮೀನುಗಳು ಸಾಕಷ್ಟು ಸಿಗುತ್ತಿದ್ದವು. ಕಡಲಿನ ಈ ಜೀವವೈವಿಧ್ಯವೇ ಅನಾದಿಯಿಂದ ಮೀನುಗಾರರ ಬದುಕನ್ನೂ, ಕೋಟ್ಯಂ ತರ ಜನರ ಪ್ರೋಟೀನ್ ಅಗತ್ಯವನ್ನೂ ಪೋಷಿಸಿದ್ದು. ಆದರೆ ಇತ್ತೀಚಿನ ವರ್ಷಗಳಲ್ಲಿ, ನೂರಾರು ನಾಡದೋಣಿಗಳ ಸಾಮರ್ಥ್ಯದ ವಾಣಿಜ್ಯಿಕ ಯಾಂತ್ರೀಕೃತ ದೋಣಿಗಳು ದಾಳಿಯಿಟ್ಟಿವೆ. ಭಾರಿ ಅಶ್ವಶಕ್ತಿಯ ಇಂಥ ದೋಣಿಗಳು, ಸಣ್ಣರಂಧ್ರಗಳ ಬಲೆ ಬೀಸಿ ಅಗಾಧ ಮೀನುರಾಶಿಯನ್ನು ಒಮ್ಮೆಲೇ ಸಂಗ್ರಹಿಸುತ್ತಿವೆ. ರಾತ್ರಿ ವೇಳೆ ಪ್ರಖರವಾದ ಬೆಳಕು ಚೆಲ್ಲಿ, ಮೀನುಗಳನ್ನು ಆಕರ್ಷಿಸಿ ಬಲೆಗೆ ಬೀಳಿಸುವ ತಂತ್ರವೂ ಸಾಗಿದೆ.

‘ಕರ್ನಾಟಕ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾನೂನು’ (1986) ಅನ್ವಯ ಇವಕ್ಕೆಲ್ಲ ನಿಷೇಧವಿದೆ ಮತ್ತು ತೀರದಿಂದ ಹತ್ತು ಕಿ.ಮೀ. ದೂರದವರೆಗೆ ಪಾರಂಪರಿಕ ನಾಡದೋಣಿಗಳಿಗೆ ಮಾತ್ರ ಅನುಮತಿ ಇದೆ. ಆದರೆ, ಈ ರಕ್ಷಣಾಸೂತ್ರಗಳ ಬಲೆಯನ್ನೆಲ್ಲ ಪ್ರತಿದಿನವೂ ಹರಿಯುತ್ತಿರುವ ಯಾಂತ್ರೀಕೃತ ಮತ್ಸ್ಯೋದ್ಯಮವು ಮೀನು ಉದ್ಯಮದ ಶೇ 85ಕ್ಕೂ ಹೆಚ್ಚಿನ ಪಾಲನ್ನು ಆಕ್ರಮಿಸಿದೆ. ನಾಡಿನ ಮುನ್ನೂರಿಪ್ಪತ್ತು ಕಿ.ಮೀ. ಸಮುದ್ರತೀರದ ಸುಮಾರು ಮುನ್ನೂರು ಮೀನುಗಾರಿಕಾ ಹಳ್ಳಿಗಳ ಮೂರು ಲಕ್ಷಕ್ಕೂ ಹೆಚ್ಚಿನ ಮೀನುಗಾರರ ಬದುಕು, ಬೆರಳೆಣಿಕೆಯ ಯಾಂತ್ರೀಕೃತ ದೋಣಿಗಳಿಂದ ಅಪಾಯಕ್ಕೆ ತಳ್ಳಲ್ಪಡುತ್ತಿರುವ ಪರಿಯಿದು.

ಇದರ ಪರಿಣಾಮವೇ, ಸಾಗರದ ಮತ್ಸ್ಯಕ್ಷಾಮ! ಕಾರವಾರದ ಮೀನುಗಾರರಿಗೆ ಇತ್ತೀಚೆಗೆ ಸಿಗುತ್ತಿರುವ, ತಿನ್ನಲು ಯೋಗ್ಯವಲ್ಲದ ಕಪ್ಪು ಕಾರ್ಗಿಲ್ ಮೀನು ಈ ಅಪಾಯಕಾರಿ ಬೆಳವಣಿಗೆಯ ಸಂದೇಶವೆನ್ನುತ್ತಾರೆ ಸಾಗರ ವಿಜ್ಞಾನಿಗಳು. ಈಗಾಗಲೇ ಎಪ್ಪತ್ತಕ್ಕೂ ಹೆಚ್ಚಿನ ಮೀನು ಪ್ರಭೇದಗಳು ವಿನಾಶದಂಚಿಗೆ ತಲುಪಿರುವುದನ್ನೂ ಅಧ್ಯಯನಗಳು ದಾಖಲಿಸಿವೆ.

ಸಮುದ್ರದಂಡೆಯೆಂದರೆ ಏನು? ಒಂದಷ್ಟು ದೂರ ಮರಳುದಿನ್ನೆಯ ‘ಬೀಚ್’, ಇನ್ನಷ್ಟು ವಿಸ್ತಾರಕ್ಕೆ ಬಾಸಲ್ಟ್ ಕಲ್ಲುಗಳ ದಿಬ್ಬಗಳು. ಅಲ್ಲಲ್ಲಿ, ಸಮುದ್ರದ ಜಲಚರಗಳಿಗೆ ಬೇಕಾದ ಪೋಷಕಾಂಶ ಹೊತ್ತು ತರುವ, ಒಳನಾಡಿನಿಂದ ಬರುವ ಸಿಹಿನೀರಿನ ನದಿ-ತೊರೆಗಳು. ಇನ್ನುಳಿದಂತೆ, ಉಪ್ಪು-ಸಿಹಿ ಜಲಮಿಶ್ರಿತ ಜೌಗುಗಳು, ಅಳಿವೆ-ಕೋಡಿಗಳು ಹಾಗೂ ಕಾಂಡ್ಲಾ ಕಾಡುಗಳು. ಸಾಗರತೀರದ ಈ ಸಂಕೀರ್ಣ ಜೈವಿಕ ಪರಿಸರವೇ ಏಡಿ, ಸೀಗಡಿ, ಆಮೆಯಂಥ ನೂರಾರು ಪ್ರಭೇದಗಳ ವಂಶಾಭಿವೃದ್ಧಿಯ ತಾಣ. ಅಸಂಖ್ಯ ಉಭಯವಾಸಿ ಜೀವವೈವಿಧ್ಯದ ಆವಾಸ ಸ್ಥಾನ. ಅಂತರ್ಜಲ ಹೆಚ್ಚಿಸುತ್ತ, ಬೃಹತ್ ತೆರೆ-ಮಾರುತಗಳಿಂದ ಒಳನಾಡನ್ನು ಕಾಪಾಡುತ್ತಿರುವ ರಕ್ಷಾಕವಚವಿದು.

ಆದರೆ, ಆಗುತ್ತಿರುವುದೇನು? ಸಮುದ್ರತೀರವಿರು ವುದೇ ಪ್ರವಾಸಕ್ಕೆ ಎಂಬಂತೆ ಭೂಪರಿವರ್ತನೆಯಾಗುತ್ತಿದೆ. ಕಡಲತೀರದ ಮರಳನ್ನು ಮೊಗೆದು, ಕಲ್ಲನ್ನು ಒಡೆದು, ಕಾಂಡ್ಲಾ ಕಾಡನ್ನು ಕಡಿದು ನಿರ್ಮಾಣವಾಗುತ್ತಿರುವುದೆಲ್ಲ ವಾಣಿಜ್ಯಿಕ ಮೋಜುತಾಣಗಳು. ವಾತಾ ವರಣದ ಇಂಗಾಲವನ್ನು ಹೀರಿಕೊಳ್ಳಬಲ್ಲ ಕಾಂಡ್ಲಾ ಕಾಡುಗಳು, ಭತ್ತದ ಗದ್ದೆಗಳು, ತರಕಾರಿ ಹಾಡಿಗಳು ಹಾಗೂ ಜೌಗುಗಳಲ್ಲೆಲ್ಲ ಮಣ್ಣು ತುಂಬಿಸುವ ರಿಯಲ್ ಎಸ್ಟೇಟ್ ಉದ್ಯಮವಂತೂ ಭರದಿಂದ ಸಾಗಿದೆ. ಹೊಳೆದಂಡೆಗಳು ಮರಳು ಗಣಿಗಾರಿಕೆ ಹಾಗೂ ಅತಿಕ್ರಮಣಕ್ಕೆ ಬಲಿಯಾಗುತ್ತಿವೆ. ದಶಕಗಳ ಹಿಂದೆ ಗುಡ್ಡಗಳನ್ನೆಲ್ಲ ಕತ್ತರಿಸಿ, ನದಿ-ತೊರೆಗಳನ್ನೆಲ್ಲ ಛೇದಿಸಿ, ಗದ್ದೆತೋಟಗಳನ್ನು ತುಂಡರಿಸಿ ಸಾಗಿದ್ದ ಕೊಂಕಣ ರೈಲಿನ ಪರಿಸರಗಾಯಗಳಿಂದ ಈಗಷ್ಟೇ ಸಮುದಾಯಗಳು ಚೇತ ರಿಸಿಕೊಳ್ಳುತ್ತಿವೆ. ಇದೀಗ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ನೂರಾರು ಅಡಿ ಎತ್ತರದ ಗುಡ್ಡಗಳನ್ನೂ ಲಂಬಕೋನದಲ್ಲಿ ಕತ್ತರಿಸುತ್ತಿರುವುದರಿಂದ, ಮಳೆಗಾಲ ದಲ್ಲಿ ಭೂಕುಸಿತವಾಗುತ್ತಿದೆ. ಕಾರವಾರದಿಂದ ಮಂಗಳೂರಿನವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲೊಮ್ಮೆ ಸಾಗಿದರೆ, ಈ ಅಧ್ವಾನಗಳ ಆಯಾಮಗಳನ್ನೆಲ್ಲ ನೋಡಬಹುದು.

ಕರಾವಳಿಯ ಒಳನಾಡಿನ ಪರಿಸ್ಥಿತಿಯೂ ಭಿನ್ನ ವಾಗಿಲ್ಲ. ಗದ್ದೆ, ತೋಟ, ಹಾಡಿಗಳೆಲ್ಲ ನಿವೇಶನಗಳಾಗುತ್ತಿವೆ. ಕಾಡು, ನದಿತಪ್ಪಲು, ಕುಮ್ಕಿ, ಗುಡ್ಡಗಳೆಲ್ಲ ಅತಿಕ್ರಮಣವಾಗಿ, ಅಕೇಶಿಯಾ ಅಥವಾ ರಬ್ಬರ್ ನೆಡುತೋಪುಗಳಾಗುತ್ತಿವೆ. ಮೂಲತಃ ಮರಳು ಹಾಗೂ ಬಾಸಲ್ಟ್ ಕಲ್ಲುಮಿಶ್ರಿತ ಸಡಿಲಮಣ್ಣಿನಿಂದಾದ ಪಶ್ಚಿಮ ಘಟ್ಟದಂಚಿನ ಇಲ್ಲಿನ ಗುಡ್ಡಗಾಡುಗಳು, ಕಾಡಿನ ಹಸಿರು ಹೊದಿಕೆ ಮಾಯವಾದಂತೆಲ್ಲ ಕುಸಿಯುತ್ತಿವೆ. ಸುಬ್ರಮಣ್ಯ, ಚಾರ್ಮಾಡಿ, ಗೇರುಸೊಪ್ಪೆ, ಕುಮಟಾ, ಅಂಕೋಲಾದಲ್ಲಾದ ಇತ್ತೀಚಿನ ಭೂಕುಸಿತಗಳು ಇದಕ್ಕೆ ಸಾಕ್ಷಿಯೆಂದು ಭೂಗರ್ಭ ತಜ್ಞರು ಎಚ್ಚರಿಸುತ್ತಿದ್ದಾರೆ.

ಇವನ್ನೆಲ್ಲ ನಿಯಂತ್ರಿಸಬೇಕಾದ ಆಡಳಿತ ವ್ಯವಸ್ಥೆಗೇನಾಗಿದೆ? ಸುಸ್ಥಿರ ಮೀನುಗಾರಿಕೆಯ ಸೂತ್ರಗಳನ್ನು ಅನುಷ್ಠಾನ ಮಾಡಬೇಕಿದ್ದ ಮೀನುಗಾರಿಕೆ ಇಲಾಖೆಯು ಮೀನು ವ್ಯಾಪಾರ ಹಿಗ್ಗಿಸುವುದರಲ್ಲೇ ತಲ್ಲೀನವಾಗಿದೆ. ಕಡಲತಡಿಯ ಪರಿಸರ ಸೂಕ್ಷ್ಮಪ್ರದೇಶಗಳನ್ನೆಲ್ಲ ಗುರು ತಿಸಿ, ಪ್ರದೇಶವಾರು ನೆಲಬಳಕೆ ನೀತಿ ರೂಪಿಸಿ, ದೀರ್ಘ ಕಾಲೀನ ಸಂರಕ್ಷಣಾ ವಿಧಾನಗಳನ್ನು ಅಳವಡಿಸಬೇಕಾದ ಪರಿಸರ ಇಲಾಖೆಯ ‘ಕರಾವಳಿ ನಿಯಂತ್ರಣ ವಲಯ ಅಧಿನಿಯಮ (2011)’ ಮಾರ್ಗಸೂತ್ರಗಳನ್ನೆಲ್ಲ, ಉದಾರೀಕರಣ- ಖಾಸಗೀಕರಣದ ಸೂತ್ರಧಾರರು ಗಾಳಿಗೆ ತೂರುತ್ತಿದ್ದಾರೆ. ಕಾಡು, ಗೋಮಾಳ, ಕುಮ್ಕಿ ಪ್ರದೇಶಗಳಲ್ಲಾಗುತ್ತಿರುವಂತೆ, ಮರಳು ಗಣಿಗಾರಿಕೆಗಾಗಿ ನದಿ ತೀರಗಳೂ ಯಾಂತ್ರೀಕೃತ ಮತ್ಸ್ಯೋದ್ಯಮಕ್ಕೋಸ್ಕರ ಸಮುದ್ರವೂ ಖಾಸಗಿ ಸೊತ್ತಾಗಿ ಹಂಚಿಕೆ ಆಗುತ್ತಿದೆ!

ಸಮುದ್ರಕೊರೆತ, ಮೇಲ್ಮಣ್ಣು ನಾಶ, ಜಲಮಾಲಿನ್ಯ ಗಳಿಂದ ಕರಾವಳಿಯನ್ನು ರಕ್ಷಿಸಲೇನೋ ಹಲವಾರು ಜೈವಿಕ ವಿಧಾನಗಳಿವೆ. ಅಂಥವುಗಳ ಆಧಾರದಲ್ಲಿ ‘ಕರಾವಳಿ ಹಸಿರುಕವಚ’ ಎಂಬ ಯೋಜನೆಯೊಂದನ್ನು ಪಶ್ಚಿಮಘಟ್ಟ ಕಾರ್ಯಪಡೆಯ ಸಲಹೆ ಮೇರೆಗೆ ರಾಜ್ಯ ಸರ್ಕಾರವು ಕಳೆದ ದಶಕದಲ್ಲೊಮ್ಮೆ ಜಾರಿಗೆ ತಂದಿತ್ತು. ಆದರೆ, ಅನುದಾನ ಹಾಗೂ ಟೆಂಡರ್ ಚೌಕಟ್ಟಿಗೆ ಒಗ್ಗದ ಈ ಸರಳ ಯೋಜನೆಯು ಅಧಿಕಾರಶಾಹಿಯ ಕಪಿಮುಷ್ಟಿಯೊಳಗೇ ಕರಗಿಹೋಯಿತು!

ಕರಾವಳಿ ಪರಿಸರ ನಿರ್ವಹಣೆಗಾಗಿ ಈಗಿರುವ ಏಕೈಕ ಸರ್ಕಾರಿ ಕಾರ್ಯಕ್ರಮವೆಂದರೆ, ಕಡಲಕೊರೆತ ತಡೆಗಟ್ಟಲು ಕಲ್ಲು ಹಾಕುವುದು! ಕಡಲಕೊರೆತ ತಡೆಗೆ ಪರಿಸರಸ್ನೇಹಿ ತಂತ್ರಗಳೂ ಇವೆ. ಆದರೆ ಲೋಕೋಪಯೋಗಿ ಮತ್ತು ಬಂದರು ಇಲಾಖೆ ಮಾತ್ರ ಅವನ್ನೆಲ್ಲ ಪರಿಗಣಿಸದೆ ಸಮುದ್ರದಂಡೆಗೆ ಕಲ್ಲು ಸುರಿಯುವುದರಲ್ಲೇ ಮಗ್ನವಾಗಿದೆ. ಬರ-ನೆರೆಯೇ ಇರಲಿ, ಸರ್ಕಾರ ಬದಲಾಗಲಿ, ನಿಲ್ಲದ ಯೋಜನೆಯಿದು. ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ₹ 911 ಕೋಟಿ ಅನುದಾನದೊಂದಿಗೆ ಈಗಲೂ ಸಮುದ್ರದಂಡೆಗೆ ಕಲ್ಲುಗಳು ಬೀಳುತ್ತಿವೆ!‌

ದುರಾಸೆಯ ಮತ್ಸ್ಯೋದ್ಯಮ, ಕಾಂಡ್ಲಾ-ಅಳಿವೆಗಳ ನಾಶ, ಜಲಮಾಲಿನ್ಯ, ಒಳನಾಡಿನಿಂದ ಲವಣಾಂಶ ಹೊತ್ತು ತರುವ ನದಿತೊರೆಗಳು ಬತ್ತುತ್ತಿರುವುದು– ಇವೆಲ್ಲವುಗಳ ಪ್ರತಿಫಲವೇ ಈಗಿನ ಮತ್ಸ್ಯಕ್ಷಾಮ. ಇಲ್ಲಿನ ವೈಶಿಷ್ಟ್ಯಪೂರ್ಣ ನೈಸರ್ಗಿಕ ನೆಲೆಗಟ್ಟನ್ನು ಸಂರಕ್ಷಿಸ
ಬೇಕೆಂಬ ವಿವೇಕ ಮಾತ್ರ ಭವಿಷ್ಯವನ್ನು ಕಾಪಾಡೀತು.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT