ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಸ್ವರೂಪ ಮತ್ತು ಮನಸ್ಥಿತಿ

ಹೊಸ ಸಾಧ್ಯತೆಗಳು ಹೊಳೆಯಬೇಕಾದರೆ ಮುಕ್ತ ಸಂವಾದ ನಡೆಯಬೇಕು
Last Updated 30 ಡಿಸೆಂಬರ್ 2019, 13:24 IST
ಅಕ್ಷರ ಗಾತ್ರ

ಪ್ರತಿದಿನ ಒಂದಿಲ್ಲೊಂದು ಹೋರಾಟ ಅಥವಾ ಹೋರಾಟದ ಕುರಿತು ವಿಶ್ಲೇಷಣೆಗಳು ಇರುತ್ತವೆ. ಆದರೆ ಹೋರಾಟ ಕೂಡ ನಿಂತ ನೀರಿನಂತೆ ಇರಲು ಸಾಧ್ಯವಿಲ್ಲ. ಕಾಲದ ಬದಲಾವಣೆಯೊಂದಿಗೆ ಅದೂ ಬದಲಾಗಬೇಕಾಗುತ್ತದೆ. ಉದಾಹರಣೆಗೆ, ರಸ್ತೆತಡೆಯನ್ನು ಪರಿಗಣಿಸಿ. ಬೇಡಿಕೆ ಈಡೇರಿಸಬೇಕಾದವರು ರಸ್ತೆಯಲ್ಲೇ ಸಂಚರಿಸಬೇಕಾಗಿದ್ದ ಕಾಲದಲ್ಲಿ ರಸ್ತೆತಡೆಯ ಉದ್ದೇಶ ಈಡೇರುವ ಅವಕಾಶವಿತ್ತು. ಆದರೆ ಬೇಡಿಕೆ ಈಡೇರಿಸಬೇಕಾದವರು ವಿಮಾನದಲ್ಲಿ ಸಂಚರಿಸುತ್ತಿರುವ ಕಾಲದಲ್ಲಿ, ರಸ್ತೆತಡೆಯು ಜನರಿಗೆ ಕಿರುಕುಳವನ್ನಷ್ಟೇ ಉಂಟುಮಾಡಬಲ್ಲದು. ಅದು ಉದ್ದೇಶ ಈಡೇರಿಸಲಾರದು. ಬದಲು ಜನರಲ್ಲಿ ಅಹಿತಕರ ಭಾವನೆ ಸೃಷ್ಟಿಯಾಗಲು ಕಾರಣವಾಗುತ್ತದೆ.

ಹೋರಾಟಗಳಿಗೂ ಆರ್ಥಿಕತೆಗೂ ರಾಜಕೀಯಕ್ಕೂ ಸಂಬಂಧವಿದೆ. ಕೃಷಿಯೊಂದೇ ಪ್ರಧಾನ ಆರ್ಥಿಕತೆಯಾಗಿದ್ದಾಗ ಹೋರಾಟಗಳು ಸ್ಥಳೀಯವಾಗಿದ್ದವು. ಸಾಮಾನ್ಯ ವಾಗಿ ಅವು ದೈಹಿಕ ಹೋರಾಟವಾಗಿಯೇ ಇರುತ್ತಿದ್ದವು. ನಂತರದ ಹಂತದಲ್ಲಿ ಉತ್ಪಾದಕ ಕೈಗಾರಿಕೆಗಳನ್ನು ಆಧರಿಸಿದ ಬಂಡವಾಳಶಾಹಿ ಯುಗ ಪ್ರಾರಂಭವಾಯಿತು. ಅದು ಆರ್ಥಿಕತೆ ಮತ್ತು ರಾಜಕೀಯದ ವ್ಯಾಪ್ತಿಯನ್ನು ಹಿಗ್ಗಿಸಿತು. ವ್ಯಾಪ್ತಿ ದೊಡ್ಡದಾದಾಗ ಹೋರಾಟ ಕೂಡ ದೊಡ್ಡ ಪ್ರಮಾಣದಲ್ಲೇ ಗಮನ ಸೆಳೆಯಬೇಕಾಗುತ್ತದೆ. ಆಗ ದೈಹಿಕ ಸಂಘರ್ಷ ಸಾಧ್ಯವಾಗುವುದಿಲ್ಲ. ಕೈಗಾರಿಕಾ ಆರ್ಥಿಕತೆಯು ಶಿಕ್ಷಣದ ಸ್ವರೂಪವನ್ನೂ ಬದಲಾಯಿಸಿತು.

ಶಿಕ್ಷಣದ ಸ್ವರೂಪ ಬದಲಾದಾಗ ಆಲೋಚನಾ ಕ್ರಮದಲ್ಲಿ ಬದಲಾವಣೆ ಆಗುತ್ತದೆ. ಆಗ ಹೋರಾಟ ಹೆಚ್ಚು ಮಾನವೀಯ ಹಾಗೂ ಪ್ರಜಾಸತ್ತಾತ್ಮಕ ಆಗತೊಡಗಿತು. ಸಮಗ್ರ ಕ್ರಾಂತಿಯ ಪರಿಕಲ್ಪನೆಯ ಮಾರ್ಕ್ಸ್‌ವಾದವನ್ನು ಹೊರತುಪಡಿಸಿದರೆ, ಹೋರಾಟದ ಸಿದ್ಧಾಂತಗಳು ಹಳೆಯ ಮಾದರಿಯ ದೈಹಿಕ ಆಕ್ರಮಣದ ಕ್ರಮವನ್ನು ಕೈಬಿಟ್ಟವು. ಸಂವಿಧಾನದ ಚೌಕಟ್ಟಿನಲ್ಲಿ ಹಾಗೂ ಒಂದಷ್ಟರಮಟ್ಟಿಗೆ ಗಾಂಧಿ ಹೋರಾಟದ ಮಾದರಿಯ ನೈತಿಕ ಹೋರಾಟದ ಪರಿಕಲ್ಪನೆಗಳು ರೂಪುಗೊಂಡವು. ಕೃಷಿ ರಂಗವೂ ಈ ಪದ್ಧತಿಗೆ ಹೊಂದಿಕೊಳ್ಳತೊಡಗಿತು. ಈಗಿನ ಬಹುತೇಕ ಹೋರಾಟಗಳು ಇದನ್ನೇ ಪ್ರತಿಪಾದಿಸುತ್ತವೆ.

ಆದರೆ ಭಾರತದಂತಹ, ವಸಾಹತುಶಾಹಿ ಆಡಳಿತಕ್ಕೆ ಒಳಗಾಗಿದ್ದ ದೇಶಗಳಲ್ಲಿ ಹೋರಾಟಗಳು ಪಕ್ವ ಸ್ಥಿತಿ ತಲುಪಿಲ್ಲ. ಸಾಂವಿಧಾನಿಕ ಹೋರಾಟಗಳಲ್ಲಿ ಪ್ರತಿಭಟನೆ ಇರುತ್ತದೆಯೇ ಹೊರತು ಹಾನಿ ಇರುವುದಿಲ್ಲ. ಆದರೆ ವಸಾಹತುಶಾಹಿ ಆಡಳಿತಕ್ಕೆ ಒಳಗಾದ ದೇಶಗಳಲ್ಲಿ ಹಾನಿ ಕೂಡ ಪ್ರತಿಭಟನಾ ಪ್ರಜ್ಞೆಯ ಭಾಗವಾಗಿರುತ್ತದೆ. ಭಾರತದಲ್ಲಿ ಇಂದು, ಪ್ರತಿಭಟನೆಗಳ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಸಹಜ ಎಂಬ ಧೋರಣೆ ವ್ಯಕ್ತವಾಗುತ್ತಿದೆ. ಈ ಧೋರಣೆಯ ಹಿಂದೆ ಇರುವುದು ಸ್ವಾತಂತ್ರ್ಯ ಹೋರಾಟ ಕಾಲದ ಮಾನಸಿಕತೆ.

ಸ್ವಾತಂತ್ರ್ಯ ಹೋರಾಟದ ಪ್ರಾರಂಭದಲ್ಲಿ, ದಾದಾಭಾಯಿ ನವರೋಜಿ ಅವರ ‘ಸೋರಿಕೆಯ ಸಿದ್ಧಾಂತ’ವು ಬ್ರಿಟಿಷ್ ಸರ್ಕಾರ ನಮ್ಮ ಸಂಪತ್ತನ್ನು ಲೂಟಿ ಹೊಡೆಯುತ್ತಿದೆ ಎಂಬುದನ್ನು ಪ್ರತಿಪಾದಿಸಿತು. ಹಾಗಿದ್ದರೆ ಪ್ರತಿಭಟನೆಯ ಸ್ವರೂಪವೇನು? ಸರ್ಕಾರದ ಕೈಗೆ ಸಂಪತ್ತು ಸಿಗದಂತೆ ಮಾಡುವುದು. ಅಂದರೆ ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಉಂಟುಮಾಡಿ, ಸರ್ಕಾರದ ವರ ಮಾನಕ್ಕೆ ಧಕ್ಕೆ ತಂದು ಸರ್ಕಾರವು ಸುಸ್ತಾಗುವಂತೆ ಮಾಡುವ ವಿಧಾನ. ಗಾಂಧೀಜಿ ನಾಯಕತ್ವದ ಹೊರಗಿದ್ದ ಸ್ವಾತಂತ್ರ್ಯ ಹೋರಾಟಗಳು ಇದನ್ನೇ ಮಾಡಿದವು. ಗಾಂಧೀಜಿ, ಸಾರ್ವಜನಿಕ ಆಸ್ತಿಯ ಹಾನಿಯನ್ನು ವಿರೋಧಿಸಿದರು‌. ಆದರೆ ಅವರೂ ಕರ ನಿರಾಕರಣೆ– ಅಂದರೆ ಸರ್ಕಾರದ ವರಮಾನ ಕಡಿಮೆಯಾಗಬೇಕು ಎನ್ನುವ ಚಳವಳಿ‌– ಮಾಡಿದರು.

ಈ ಪ್ರಜ್ಞೆಯು ಸ್ವಾತಂತ್ರ್ಯಾನಂತರವೂ ಬೆಳೆದುಬಂತು. ಹೋರಾಟ ನಡೆದಾಗ ಬಸ್ಸಿಗೆ ಬೆಂಕಿ ಹಚ್ಚುವುದು, ಕಲ್ಲೆಸೆಯುವುದು, ಟೈರ್‌ ಹೊತ್ತಿಸುವುದು... ಇವೆಲ್ಲ ತೀರಾ ಸಹಜ ಎನ್ನುವಂತೆ ನಡೆಯುತ್ತಿವೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಹೋದ ಪ್ರಕರಣ ಇತ್ತೀಚೆಗೂ ನಡೆದಿದೆ. ಗಾಂಧಿಯವರು ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡದ್ದು ಚೌರಿಚೌರಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದನ್ನು ಕಂಡು, ನೊಂದು. ಗಾಂಧಿಯವರ ದೂರದೃಷ್ಟಿ ಅರ್ಥವಾಗುವುದು ಇಲ್ಲಿಯೇ. ಇಂಥ ಕೃತ್ಯವನ್ನು ತಾನು ಸಮ್ಮತಿಸಿದರೆ ಭವಿಷ್ಯವೂ ಇದನ್ನೇ ಮುಂದುವರಿಸಲಿದೆ ಎಂದು ಗಾಂಧೀಜಿ ಊಹಿಸಿದಂತಿದೆ. ಅವರ ಆ ನಿಲುವಿಗೆ ಆಗಲೂ ಬೆಂಬಲ ಸಿಗಲಿಲ್ಲ. ಆದ್ದರಿಂದಲೇ ಇಂದಿಗೂ ಅಂತಹ ಪದ್ಧತಿ ಉಳಿದಿದೆ.

ವಸಾಹತುಶಾಹಿ ವ್ಯವಸ್ಥೆಯ ವಿರುದ್ಧದ ಹೋರಾಟದ ಮನಃಸ್ಥಿತಿಯಿಂದ ನಾವಿನ್ನೂ ಹೊರಬಂದಿಲ್ಲ. ಹಾಗಾಗಿ, ಹಾನಿ ಮಾಡುವುದನ್ನು ಒಡೆತನದ ವಿರುದ್ಧದ ಪ್ರತಿಭಟನೆ ಎಂದುಕೊಳ್ಳುತ್ತಿದ್ದೇವೆಯೇ ಹೊರತು ನಮ್ಮ ಸಂಪತ್ತನ್ನು ನಾವೇ ನಾಶ ಮಾಡುವ ಕ್ರಿಯೆ ಎಂದು ಭಾವಿಸಿದಂತಿಲ್ಲ.

ವಸಾಹತುಶಾಹಿ ಆಡಳಿತಕ್ಕೆ ಒಳಗಾಗದ ದೇಶಗಳಲ್ಲಿ ನಡೆಯುವ ಸಾಂವಿಧಾನಿಕ ಹೋರಾಟಗಳು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದಿಲ್ಲ. ಮೊದಲು ಈ ಹಂತಕ್ಕೆ ನಮ್ಮನ್ನು ನಾವು ತಂದುಕೊಳ್ಳದೆ ಮುಂದಿನ ಹಂತಕ್ಕೆ ಹೋಗುವುದು ಕಷ್ಟ. ಏಕೆಂದರೆ, ಆರ್ಥಿಕತೆಯು ಉತ್ಪಾದಕ ಕೈಗಾರಿಕಾ ರೂಪದಿಂದ ಸೇವಾ ಕೈಗಾರಿಕೆ ಮತ್ತು ಸೇವಾ ಮಾರುಕಟ್ಟೆಯ ರೂಪಕ್ಕೆ ಜಿಗಿದಿದೆ. ಅದರ ಪರಿಣಾಮವು ಹೋರಾಟಗಾರರ ಮೇಲೆಯೂ ಆಗಿರುತ್ತದೆ. ಆದ್ದರಿಂದಲೇ ಹೋರಾಟವನ್ನು ಅಂತ ರಂಗದ ತುಡಿತಕ್ಕಿಂತ ಹೆಚ್ಚಾಗಿ ಬಾಹ್ಯ ಅಂಶಗಳು ನಿರ್ಧರಿಸುವ ಸಾಧ್ಯತೆ ಇದೆ. ಕಾರ್ಮಿಕ ಸಂಘಟನೆಗಳು ಬಹಳಷ್ಟು ಕಾರ್ಮಿಕರಿಗೆ ನ್ಯಾಯ ಕೊಡಿಸಿವೆ. ಈಗ ಕಾರ್ಮಿಕ ಸಂಘಟನೆಗಳಿಗೆ ನಿಜಾರ್ಥದಲ್ಲಿ ಮಹತ್ವ ಇಲ್ಲ. ಏಕೆಂದರೆ ಒಡೆತನಗಳು, ಸ್ಪಂದಿಸುವ ವಿಧಾನ ಬದಲಿಸಿವೆ. ಟ್ರೇಡ್ ಯೂನಿಯನ್ ಮೂಲಕ ಹೋದರೆ ಕೆಲಸ ಆಗುವುದೇ ಇಲ್ಲ. ಬದಲಿಗೆ ಆಯಾ ವೃತ್ತಿಯವರು ಮಾತ್ರವೇ ಸಂಘಟನೆ ಮಾಡಿಕೊಂಡು ಹೋದರೆ ಬೇಗ ಕೆಲಸ ಆಗುತ್ತದೆ!

ಅರವಿಂದ ಚೊಕ್ಕಾಡಿ
ಅರವಿಂದ ಚೊಕ್ಕಾಡಿ

ವಿಶಾಲ ವ್ಯಾಪ್ತಿಯ ಹೋರಾಟಗಳು ಉಳಿದಿಲ್ಲ. ವಿಶಾಲ ವ್ಯಾಪ್ತಿಯದೆಂದು ಭಾವಿಸಬಹುದಾದ ಹೋರಾಟ ಅಲ್ಲೊ ಇಲ್ಲೊ ನಡೆದರೂ ಹೋರಾಟಕ್ಕೆ ಕಾರಣವಾಗುವ ಸಂಗತಿಗಳು ಹೋರಾಟಗಾರರ ಅವಶ್ಯಕತೆಗಳಾಗಿರದೆ ಅಸಹನೆಗಳಾಗಿರುತ್ತವೆ. ಅಸಹನೆಯೂ ಹೋರಾಟವೂ ಒಂದೇ ಅಲ್ಲ. ಅಸಹನೆಗೆ ಗುರಿ ಇರುವುದಿಲ್ಲ. ಹಾನಿ ಮಾಡಬೇಕೆನ್ನುವ ಒಳಗುದಿ ಮಾತ್ರ ಜಾಸ್ತಿ ಇರುತ್ತದೆ. ಹಾನಿ ಮಾಡಿದಷ್ಟೂ ಹೋರಾಟ ದುರ್ಬಲವಾಗುತ್ತದೆ. ಗಾಂಧಿಯವರ ಅಹಿಂಸೆಗಿದ್ದ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ಗಾಂಧಿಯವರನ್ನು ದಮನಿಸಲು ಆಗಲೇ ಇಲ್ಲ. ಏಕೆಂದರೆ ಅವರು ಯಾವ ಹಾನಿಯನ್ನೂ ಮಾಡಲಿಲ್ಲ. ಆದ್ದರಿಂದ ಹೋರಾಟದ ಈಗಿನ ಸ್ವರೂಪವೇ ಹಾನಿಯ ಸಹಜತೆಯನ್ನು ನಿರಾಕರಿಸಿದ ವಸಾಹತು ಶಾಹಿತ್ವಕ್ಕೆ ಒಳಗಾಗದ ದೇಶಗಳ ಹೋರಾಟಗಳ ಶೈಲಿಗೆ ಮೊದಲು ಬರಬೇಕಾಗಿದೆ. ಬೌದ್ಧಿಕ ಶಕ್ತಿಯೇ ಮುಂದಿನ ದಿನಗಳ ಹೋರಾಟಗಳಲ್ಲಿ ಮಹತ್ವದ್ದಾಗುತ್ತದೆಯೇ ಹೊರತು ಜನಸಂಘಟನೆಯಲ್ಲ. ಜನಸಂಘಟನೆ ಚಿಕ್ಕದಾದಷ್ಟೂ ಒಳ್ಳೆಯದು. ಸಂಘಟನೆ ಚಿಕ್ಕದಿದ್ದರೆ ಶಿಸ್ತನ್ನು ಕಾಪಾಡಿಕೊಳ್ಳುವುದು ಸುಲಭ.

ಹೊಸ ಸಾಧ್ಯತೆಗಳು ಹೊಳೆಯಬೇಕಾದರೆ ಮುಕ್ತ ಸಂವಾದಗಳು ಹೆಚ್ಚಬೇಕು. ಭಾರತದ ರಾಷ್ಟ್ರೀಯ ಕಾಂಗ್ರೆಸ್, ಇಪ್ಪತ್ತು ವರ್ಷಗಳ ದೀರ್ಘ ಸಂವಾದವನ್ನು ಹುಟ್ಟು ಹಾಕಿದ ನಂತರ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಾಧ್ಯಮಗಳು, ಚಿಂತಕರು, ಲೇಖಕರು ಎಲ್ಲರೂ ಒಂದೊಂದು ಬಣವಾಗಿ ತಮ್ಮೊಳಗಿನ ಅಸಹನೆಯನ್ನು ಹೇಳಿಕೊಳ್ಳುತ್ತಿದ್ದಾರೆಯೇ ಹೊರತು ಸಂವಾದ ನಡೆಸುತ್ತಿಲ್ಲ.

ತನ್ನದಲ್ಲದ ಅಭಿಪ್ರಾಯ ಹೇಳಿದವರನ್ನು ಲೇವಡಿ ಮಾಡುವ, ಹಂಗಿಸುವ, ನಿಂದಿಸುವ; ಆ ಮೂಲಕ ವಿರೋಧಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ರೂಪದಲ್ಲಿ ಚರ್ಚೆಗಳು ಆಗುತ್ತಿವೆ. ಭಿನ್ನಾಭಿಪ್ರಾಯಕ್ಕೆ ಮಾನ್ಯತೆ ಕೊಡದ ಸಂವಾದಕರು ಸಂವಾದವನ್ನೇ ಸಾಯಿಸುತ್ತಾರೆ‌. ಅದು ಹೋರಾಟವನ್ನು ದೈಹಿಕ ಹೋರಾಟದ ಕಡೆಗೆ ಕೊಂಡೊಯ್ಯುವ ಅಪಾಯವಿದೆ. ಆದ್ದರಿಂದ ‘ನೀನು ಯಾರ ಕಡೆ’ ಎನ್ನುವುದಕ್ಕಿಂತ, ‘ನೀನು ಏನನ್ನು ಹೇಳುತ್ತಿದ್ದಿ’ ಎನ್ನುವುದು ಮುಖ್ಯವಾಗಬೇಕಾಗಿದೆ‌. ಬಹುಶಃ ಮುಂದಿನ ದಿನಗಳಲ್ಲಿ, ಸಂವಾದಕರಿಗೆ ತಮ್ಮ ಪ್ರತಿಪಾದನೆಗಳು ಸೋಲುತ್ತಿವೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾದಾಗ ಇದೂ ಸಾಧ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT