ಹುಮನಾಬಾದ್: ‘ಅಧರ್ಮದಿಂದ ಅಶಾಂತಿ, ಧರ್ಮ ಮಾರ್ಗದಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಕಾಣಲು ಸಾಧ್ಯ’ ಎಂದು ಮಹಾರಾಷ್ಟ್ರ ಔಸಾದ ಗುರುಬಾಬಾ ಮಹಾರಾಜರು ಹೇಳಿದರು.
ತಾಲ್ಲೂಕಿನ ಚಂದನಹಳ್ಳಿ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ಮತ್ತು ಹನುಮಾನ ದೇವಸ್ಥಾನ ಕಳಸಾರೋಹಣ ನೆರವೇರಿಸಿ ಮಾತನಾಡಿದರು.
‘ ಪಾಲಕರು ಮಕ್ಕಳಿಗೆ ಕೇವಲ ಶಿಕ್ಷಣ ಕೊಡಿಸಿದರೆ ಸಾಲದು. ಉತ್ತಮ ಚಾರಿತ್ರ್ಯವಂತರನ್ನಾಗಿ ಮಾಡಬೇಕು. ಚಂದನಹಳ್ಳಿ ಗ್ರಾಮ ಹಿಂದಿನಿಂದಲೂ ಸಂಸ್ಕಾರವಂತರಿಗೆ ಜನ್ಮ ನೀಡಿದ ಪವಿತ್ರ ತಾಣ. ದೇಶದ ಉಳಿವಿಗಾಗಿ ಪ್ರಾಣ ತ್ಯಾಗಮಾಡಿದ ಹುತಾತ್ಮರಿಗೆ ಜನ್ಮನೀಡಿದ ಪವಿತ್ರ ಇತಿಹಾಸ ಹೊಂದಿರುವ ಈ ಗ್ರಾಮದಲ್ಲಿ ಒಂದು ವಾರ ಪ್ರವಚನ ನೀಡಲು ಅವಕಾಶ ಸಿಕ್ಕಿರುವುದು ಸಮಾಧಾನ ತಂದಿದೆ’ ಎಂದರು.
ಏ.21ಕ್ಕೆ ಕೆರೂರಿನ ಕೇಶವ ಮಹಾರಾಜ, ಏ.22ರಂದು ಕೋಟಮಾಳ್ ಸಂಸ್ಥಾನದ ಲಿಂಬಾಜಿರಾವ್ ಸಿಂಧೆ, ಏ.23ರಂದು ಬಿಜಲಗಾಂವ್ ಗ್ರಾಮದ ಶಿವಾಜಿ ಮಹಾರಾಜ, ಏ.24ಕ್ಕೆ ಕೇಸರಜವಳಗಾ ಗ್ರಾಮದ ಕೃಷ್ಣಾ ಮಹಾರಾಜ, ಏ.25ರಂದು ಉದಗೀರದ ಬನ್ ಗುರೂಜಿ, ಏ.26ಕ್ಕೆ ಭಾಲ್ಕಿಯ ನರಸಿಂಗರಾವ್ ತೋರ್ಣೆಕರ್ ಪ್ರವಚನ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಉತ್ಸವ ಸಮಿತಿ ಪ್ರಮುಖರಾದ ರಾಜೇಂದ್ರ ಬಿರಾದಾರ್, ದೇವಿದಾಸರಾವ ನಿರಗುಡೆ, ನೇತಾಜಿ ಪಾಟೀಲ, ಬಾಲಾಜಿರಾವ್ ಕಾಳೆ, ದಯಾನಂದ ಮಾನಕಾರೆ, ಜೀತು ಕಾಳೆ, ಗೋರಖನಾಥ ಪಾಟೀಲ, ಉಮೇಶ ಮೇತ್ರೆ, ಮಧುಕರ ಸಂಗ್ಮೆ, ಪುಂಡ್ಲಿಕ್ ಭಂಡಾರಿ ಇದ್ದರು.
ಇದಕ್ಕೂ ಮುನ್ನ ಗ್ರಾಮದ ಮುಖ್ಯ ಬೀದಿಗಳಲ್ಲಿ ಮಾತೆಯರು ತುಂಬಿದ ಕಳಸಹೊತ್ತು ಶೋಭಾಯಾತ್ರೆ ನಡೆಸಿದರು. ಈ ವೇಳೆಯಲ್ಲಿ ಭಜನೆ, ಗುಂಪು ನೃತ್ಯ ನಡೆದವು. ಬಳಿಕ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.