ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ನರಕ: ಬಡ್ಡಿಕೋರರಿಗೆ ನಾಕ

ಮಧ್ಯಸ್ಥಿಕೆ ಕೇಂದ್ರಗಳಾಗಿವೆ ಪೊಲೀಸ್ ಠಾಣೆಗಳು * ಭೂಗತ ಶಕ್ತಿಗಳ ಬೆಂಗಾವಲು * ಅಮಾಯಕರ ರಕ್ತ ಹೀರುತ್ತಿರುವ ಮೀಟರ್ ಬಡ್ಡಿ ಮಾಫಿಯಾ
Last Updated 16 ಫೆಬ್ರುವರಿ 2019, 20:24 IST
ಅಕ್ಷರ ಗಾತ್ರ

ಆ ಅನಾಥ ವೃದ್ಧೆಗೆ ತರಕಾರಿ ವ್ಯಾಪಾರವೇ ಆಸರೆ. ನಸುಕಿನಲ್ಲಿ ಮಾರುಕಟ್ಟೆಗೆ ಬಂದು ಫೈನಾನ್ಸಿಯರ್‌ ಬಳಿ ‘ಸಾಲ’ ಪಡೆದು ತರಕಾರಿ ಖರೀದಿಸಿ ಮಾರುವುದು ಅವರ ಕಾಯಕ. ದುಡಿದ ಹಣವನ್ನೆಲ್ಲ ಸಂಜೆ ವೇಳೆಗೆ ‘ಮೀಟರ್‌ ಬಡ್ಡಿ’ಗಾಗಿ ಫೈನಾನ್ಸಿಯರ್‌ಗೆ ಕೊಟ್ಟರೆ, ಉಳಿಯುವುದು ಬಿಡಿಗಾಸು ಮಾತ್ರ. ಅದರಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟ.

ಮಾರುಕಟ್ಟೆಯಲ್ಲಿ ಸಣ್ಣದೊಂದು ತರಕಾರಿ ಅಂಗಡಿ ಇಟ್ಟುಕೊಂಡಿರುವ ಆ ವ್ಯಕ್ತಿ, ವ್ಯಾಪಾರ ವೃದ್ಧಿಗಾಗಿ ಮಹಿಳಾ ಫೈನಾನ್ಶಿಯರ್‌ ಕಡೆಯಿಂದ ₹1 ಲಕ್ಷ ಸಾಲ ಪಡೆದಿದ್ದ. ಆಕೆಯಂತೂ ದಿನಕ್ಕೆ ₹1 ಸಾವಿರ ಬಡ್ಡಿ (₹1 ಲಕ್ಷಕ್ಕೆ) ಪಡೆಯುತ್ತಿದ್ದಳು. ಬಡ್ಡಿ ಸಮೇತ ಸಾಲ ತೀರಿಸಿದರೂ ‘ಮೀಟರ್ ಬಡ್ಡಿ’ ಕೊಡು ಎಂದು ಕಿರುಕುಳ ನೀಡಿ ಗಯ್ಯಾಳಿಯಂತೆ ರಸ್ತೆಯಲ್ಲೇ ಮಾನ ಕಳೆದಿದ್ದಳು. ಆಕೆಯ ಸಹವಾಸ ಮಾಡಿದ್ದಕ್ಕಾಗಿ ಅಂಗಡಿಯನ್ನೇ ಮಾರುವ ಸ್ಥಿತಿಗೆ ಬಂದು ತಲುಪಿದ್ದಾನೆ ಆ ವ್ಯಾಪಾರಿ.

ಇಂಥ ದೃಷ್ಟಾಂತಗಳು ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ನಗರಗಳ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿಬಿಟ್ಟಿವೆ. ದಿನದ ದುಡಿಮೆ ನಂಬಿ ಜೀವನ ನಡೆಸುತ್ತಿರುವ ವ್ಯಾಪಾರಿಗಳಿಗೆ ‘ಹಣಕಾಸಿನ ನೆರವು’ ನೀಡುವ ಸೋಗಿನಲ್ಲಿ ಹುಟ್ಟಿಕೊಂಡಿರುವ ಕುಳಗಳು, ‘ಮೀಟರ್‌ ಬಡ್ಡಿ’ಯಿಂದ ಸಾಮ್ರಾಜ್ಯ ಕಟ್ಟಿಕೊಂಡು ಮೇರೆಯುತ್ತಿದ್ದಾರೆ. ಅಕ್ಕ–ಪಕ್ಕದಲ್ಲಿ ರೌಡಿಗಳ ಪಡೆ ಕಟ್ಟಿಕೊಂಡು ಮಾರುಕಟ್ಟೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿರುವ ‘ಮೀಟರ್‌ ಬಡ್ಡಿ’ಯ ಕರಾಳ ಮುಖ ತೆರೆದಿಟ್ಟ ಅಜ್ಜಿ, ‘ನನ್ನವರು ಅಂತಾ ಯಾರೂ ಇಲ್ಲ. ಫೈನಾನ್ಶಿಯರ್ ಕಡೆ ಹಣ ತಂಗೊಂಡು ತರಕಾರಿ ಖರೀದಿ ಮಾಡ್ತೀನಿ. ದುಡಿದಿದ್ದೆಲ್ಲ ಅವನಿಗೆ ಕೊಟ್ಟು ಮನೆಗೆ ಹೋಗ್ತೀನಿ. ವ್ಯಾಪಾರ ಇಲ್ಲದ ವೇಳೆಯಲ್ಲಿ ಫೈನಾನ್ಶಿಯರ್ ಚಿತ್ರಹಿಂಸೆ ನೀಡುತ್ತಾನೆ’ ಎಂದರು.

ಮಾರುಕಟ್ಟೆಯಷ್ಟೆ ಅಲ್ಲದೇ, ಹೊರಗಡೆಯೂ ಮೀಟರ್ ಬಡ್ಡಿ ಹಾವಳಿ ಇದೆ. ಅದನ್ನು ಬಿಚ್ಚಿಟ್ಟ ಖಾಸಗಿ ಕಂಪನಿ ಉದ್ಯೋಗಿ, ‘ಪರಿಚಯಸ್ಥರ ಮಧ್ಯಸ್ಥಿಕೆಯಲ್ಲಿ 2014ರ ಮೇ 30ರಂದು ಶೇ 10ರ ಬಡ್ಡಿಯಲ್ಲಿ ₹60 ಲಕ್ಷ ಪಡೆದಿದ್ದೆ. ಖಾಲಿ ಇ– ಸ್ಟಾಂಪ್ ಪೇಪರ್‌, 15–20 ದಸ್ತಾವೇಜುಗಳು, ಮೂರು ಖಾಲಿ ಚೆಕ್‌ಗಳು ಹಾಗೂ ಆಸ್ತಿಯ ಮೂಲ ದಾಖಲೆಗಳನ್ನು ಭದ್ರತೆಗಾಗಿ ಕೊಟ್ಟಿದ್ದೆ. ಪ್ರತಿ ತಿಂಗಳು ಕಂತಿನಲ್ಲಿ ಸಾಲದ ಹಣ ಪಾವತಿಸಿದ್ದೆ’ ಎಂದು ಹೇಳಿದರು.

‘ಮಧ್ಯವರ್ತಿ ಮರಣವನ್ನಪ್ಪಿದ. ಅದಾದ ನಂತರ, ಸಾಲ ಕೊಟ್ಟವನ ಕಾಟ ವಿಪರೀತವಾಯಿತು. ಖಾಲಿ ಚೆಕ್ ಹಾಗೂ ಮೂಲ ದಾಖಲೆಗಳನ್ನು ತನ್ನ ಬಳಿಯೇ ಇಟ್ಟುಕೊಂಡಿರುವ ಆತ, ‘ಮೀಟರ್‌ ಬಡ್ಡಿ’ ಕೊಡುವಂತೆ ಪೀಡಿಸುತ್ತಿದ್ದಾನೆ. ಬಡ್ಡಿ ಕೊಡದಿದ್ದರೆ ಎಸ್‌.ಸಿ./ಎಸ್‌.ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ’ ಎಂದು ಅಳಲು ತೋಡಿಕೊಂಡರು.

ಬಟ್ಟೆ ವ್ಯಾಪಾರಿಯೊಬ್ಬರು, ‘ಬಡ್ಡಿ ಅಷ್ಟೇ ಕೊಡಿ ಎಂದು ಸಾಲ ಕೊಟ್ಟವ ಈಗ ಮೀಟರ್‌ ಬಡ್ಡಿ ಕೊಡಿ ಎನ್ನುತ್ತಿದ್ದಾನೆ. ಮಾರಕಾಸ್ತ್ರ ಹಾಗೂ ಪಿಸ್ತೂಲ್‌ ಹಿಡಿದುಕೊಂಡು ಮನೆಗೆ ನುಗ್ಗಿ ಜೀವ ಬೆದರಿಕೆವೊಡ್ಡುತ್ತಿದ್ದಾನೆ’ ಎಂದು ಕಣ್ಣೀರಿಟ್ಟರು.

ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು, ‘ಅನಾರೋಗ್ಯಕ್ಕೆ ತುತ್ತಾಗಿದ್ದ ಪತ್ನಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ 2008ರಲ್ಲಿ ₹4 ಲಕ್ಷ ಸಾಲ ಪಡೆದಿದ್ದೆ. ಸಾಲಕ್ಕೆ ಭದ್ರತೆ ಆಗಿ 4 ಖಾಲಿ ಚೆಕ್‌ಗಳು, 2 ನಿವೇಶನಗಳ ಮೂಲ ದಾಖಲಾತಿ ಕೊಟ್ಟಿದ್ದೆ. ನಿಗದಿತ ಸಮಯಕ್ಕೆ ಸಾಲ ತೀರಿಸಿದ್ದೇನೆ. ಅಷ್ಟಾದರೂ ಮೀಟರ್ ಬಡ್ಡಿ ಕೊಡು ಎಂದು ಪೀಡಿಸುತ್ತಲೇ ಈಗ ನನ್ನ ಮೇಲೆ ಚೆಕ್ ಬೌನ್ಸ್ ಮೊಕದ್ದಮೆ ಹೂಡಿದ್ದಾನೆ’ ಎಂದು ಅವರು ತಮ್ಮ ಗೋಳು ತೋಡಿಕೊಂಡರು.

ಮೀಟರ್ ಬಡ್ಡಿ ಎಂದರೆ. . .

ದಿನ, 10 ದಿನ, ತಿಂಗಳ ಲೆಕ್ಕದಲ್ಲಿ ಪಡೆದ ಸಾಲವನ್ನು ನಿಗದಿತ ದಿನದಂದು ಪಾವತಿ ಮಾಡದೇ ಇದ್ದರೆ ವೇಗಕ್ಕೆ ತಕ್ಕಂತೆ ಬೈಕಿನ ಮೀಟರ್‌ನ ಮುಳ್ಳು ಏರುವಂತೆ ಸಾಲದ ಮೊತ್ತವು ದ್ವಿಗುಣವಾಗುವುದೇ ಮೀಟರ್‌ ಬಡ್ಡಿಯ ಕರಾಮತ್ತು.

ಬ್ಯಾಂಕ್‌ಗಳಲ್ಲಿ ಸಾಲದ ವಾರ್ಷಿಕ ಬಡ್ಡಿ ಶೇ 12ರಷ್ಟಿರುತ್ತದೆ. ಸಾಲ ಹಾಗೂ ಬಡ್ಡಿಯ ಕಂತನ್ನು ಪಾವತಿಸದೇ ಇದ್ದರೆ, ಅವಧಿ ಮುಗಿಯುತ್ತಿದ್ದಂತೆ ಬಡ್ಡಿ ಮೊತ್ತ ಅಸಲಿಗೆ ಸೇರ್ಪಡೆಯಾಗಿ, ಸಾಲದ ಮೊತ್ತ ಏರಿಕೆಯಾಗುತ್ತದೆ. ಬಡ್ಡಿ ಮೊತ್ತ ಸೇರಿದ ಸಾಲದ ಮೊತ್ತಕ್ಕೆ ನೀಡುವ ಬಡ್ಡಿಯನ್ನು ಚಕ್ರ ಬಡ್ಡಿ ಎಂದು ಕರೆಯಲಾಗುತ್ತದೆ. ಮೀಟರ್ ಬಡ್ಡಿ ಎಂಬುದು ಸುಲಿಗೆಯ ಮತ್ತೊಂದು ರೂಪ.

ಒಂದು ದಿನಕ್ಕೆ ₹10 ಸಾವಿರ ಸಾಲ ಬೇಕಾದರೆ ಬೆಳಿಗ್ಗೆ 5 ಗಂಟೆಗೆ ಪಡೆದಾಗ ಸಿಗುವುದು ₹9 ಸಾವಿರ. ರಾತ್ರಿ ₹10 ಸಾವಿರ ವಾಪಸು ನೀಡಬೇಕು. ಮಾರನೇ ದಿನ ನೀಡದೇ ಇದ್ದರೆ ₹11 ಸಾವಿರ, ಅದರ ಮಾರನೇ ದಿನ ಕೊಡದಿದ್ದರೆ ₹12 ಸಾವಿರ ನೀಡಬೇಕಾಗುತ್ತದೆ.

10 ದಿನಕ್ಕೆ ₹1 ಲಕ್ಷ ಸಾಲ ಬೇಕಾದರೆ ಸಿಗುವುದು ₹90ಸಾವಿರ ಮಾತ್ರ. 10ನೇ ದಿನ ₹1 ಲಕ್ಷ ಮರಳಿಸಬೇಕು. ಇಲ್ಲದಿದ್ದರೆ ಮಾರನೇ ದಿನದಿಂದ ಕ್ರಮವಾಗಿ ₹1.10 ಲಕ್ಷ, ₹1.20 ಲಕ್ಷ ಹೀಗೆ ಏರಿಕೆ ಯಾಗುತ್ತದೆ.

ತಿಂಗಳಿಗೆ ₹10 ಲಕ್ಷ ಸಾಲಬೇಕಾದರೆ ಸಿಗುವುದು ₹9 ಲಕ್ಷ ಮಾತ್ರ. ತಿಂಗಳು ಮುಗಿದಾಗ ₹10 ಲಕ್ಷ ವಾಪಸು ಕೊಡಬೇಕು. ಇಲ್ಲದಿದ್ದರೆ ಮಾರನೇ ದಿನದಿಂದ ದಿನವೊಂದಕ್ಕೆ ₹1 ಲಕ್ಷದಂತೆ ಏರಿಕೆಯಾಗುತ್ತದೆ. 10 ದಿನಗಳಲ್ಲಿ ತೀರಿಸಬೇಕಾದರೆ ಸಾಲದ ಮೊತ್ತ ₹20 ಲಕ್ಷ ಮುಟ್ಟಿರುತ್ತದೆ.

ಜೆಡಿಎಸ್‌ನ ‘ವೇಡಿ’ ಮಾರ್ಕೆಟ್ ಡಾನ್!

‘ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ವೇಡಿಯಪ್ಪ ಅಲಿಯಾಸ್ ಮಾರ್ಕೆಟ್ ವೇಡಿ, ಸದ್ಯ ಕೆ.ಆರ್.ಮಾರುಕಟ್ಟೆ ಮಾಫಿಯಾ ಡಾನ್. ಆತ ಪೊಲೀಸ್ ಠಾಣೆ ಇರುವ ಕಟ್ಟಡದಲ್ಲೇ ಕಚೇರಿ ಇಟ್ಟುಕೊಂಡು ಶೇ 10–15ರ ಬಡ್ಡಿ ದರದಲ್ಲಿ ದಂಧೆ ನಡೆಸುತ್ತಿದ್ದ. 2017ರಲ್ಲಿ ಪಶ್ಚಿಮ ವಿಭಾಗಕ್ಕೆ ಡಿಸಿಪಿಯಾಗಿ ಬಂದ ಎಂ.ಎನ್.ಅನುಚೇತ್ ಅವರು ಆ ಕಚೇರಿಯನ್ನು ಬಂದ್ ಮಾಡಿಸಿ, ಠಾಣೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು’ ಎಂದು ಪೊಲೀಸರು ಹೇಳುತ್ತಾರೆ.

‘ಆನೇಕಲ್ ಕೃಷ್ಣಪ್ಪ, ಲಯನ್ ಬಾಲಕೃಷ್ಣ, ಮಾರ್ಕೆಟ್ ವೇಲು, ಮಿರ‍್ಯಾಕಲ್ ಮಂಜ, ಮುತ್ತಪ್ಪರೈನ ಸಹಚರ ಉದಯ್‌ಶೆಟ್ಟಿ, ಶ್ರೀರಾಮಸೇನೆಯ ಬೆಂಗಳೂರು ಘಟಕದ ಅಧ್ಯಕ್ಷೆ ಯಶಸ್ವಿನಿ, ಬಿಜೆಪಿ ಮುಖಂಡ ಜೆ.ಪ್ರಕಾಶ್, ಮಾರ್ಕೆಟ್ ರತ್ನ, ಚಂದ್ರಾಲೇಔಟ್‌ನ ಜಯಮ್ಮ... ‌ಬಡ್ಡಿ ದಂಧೆ ನಡೆಸುತ್ತಿರುವವರಲ್ಲಿ ಪ್ರಮುಖರು’ ಎಂದು ಮಾಹಿತಿ ನೀಡಿದ್ದಾರೆ.

‘ರೌಡಿ’ ಟೈಟಲ್‌ಗೂ ಲಾಬಿ!

ರಾಜಧಾನಿಯಲ್ಲಿ ರೌಡಿಶೀಟರ್ ಹಾಕಿಸಿಕೊಳ್ಳುವುದಕ್ಕೂ ಲಾಬಿ ನಡೆಯುತ್ತದೆ. ದಂಧೆ ಶುರು ಮಾಡುವವರು ಬೇಕಂತಲೇ ರೌಡಿ ಪಟ್ಟಿಗೆ ಸೇರ್ಪಡೆಯಾಗುತ್ತಾರೆ. ಆ ಟೈಟಲ್ ಸಿಕ್ಕ ಕೂಡಲೇ ಕಚೇರಿ ತೆರೆದು ಫೈನಾನ್ಸ್ ವ್ಯವಹಾರ ಹಾಗೂ ‘ಸೆಟ್ಲಮೆಂಟ್‌’ಗಳನ್ನು ಶುರು ಮಾಡುತ್ತಾರೆ. ಕೊನೆಗೆ, ಹಣ ಕೊಡಲು ಆಗದವರನ್ನು ತಮ್ಮ ಕೆಲಸಗಳಿಗೆ ಬಳಸಿಕೊಂಡು ಕ್ರಿಮಿನಲ್‌ಗಳನ್ನೂ ಸೃಷ್ಟಿ ಮಾಡುತ್ತಿದ್ದಾರೆ ಎನ್ನುತ್ತಾರೆ ಪೊಲೀಸರು.

‘ರೌಡಿ’ ಹಣೆಪಟ್ಟಿ ಇರುವ ಕಾರಣಕ್ಕೆ ಬಡ್ಡಿಕೋರರ ವಿರುದ್ಧ ಯಾರೂ ದೂರು ಕೊಡುವುದಿಲ್ಲ. ತಮ್ಮ ಕುಟುಂಬದ ಮೇಲೆ ಹಲ್ಲೆ, ಅಪಹರಣ, ಕೊಲೆ, ಆತ್ಮಹತ್ಯೆಯಂತಹ ಘಟನೆಗಳು ನಡೆದಾಗ ಕಣ್ಣೀರು ಹಾಕಿಕೊಂಡು ಠಾಣೆಗೆ ಬರುತ್ತಾರೆ. ಅದೂ, ‘ಇನ್ನಾದರೂ ಅವರು ನಮ್ಮ ತಂಟೆಗೆ ಬರದಂತೆ ನೋಡಿಕೊಳ್ಳಿ’ ಎಂದು ಹೇಳಿ ಹೋಗಲಷ್ಟೇ.

ಚಿತ್ರ– ವಿಚಿತ್ರ ಮುಖಗಳು

ಸಾಲಗಾರರು ತಮ್ಮನ್ನು ನೋಡಿ ಹೆದರಬೇಕು ಎಂಬ ಕಾರಣಕ್ಕೆ ‘ಬಡ್ಡಿ ಕುಳ’ಗಳು, ಪುಂಡ–ಪೋಕರಿಗಳ ಗ್ಯಾಂಗ್‌ ಕಟ್ಟಿಕೊಂಡು ಓಡಾಡುತ್ತಿದ್ದಾರೆ.

ಗಾಯದ ಕಲೆಗಳಿರುವ ಮುಖ, ದೊಡ್ಡ ದೊಡ್ಡ ಕಣ್ಣುಗಳು, ಚಿತ್ರ– ವಿಚಿತ್ರ ಉಡುಪು ಹಾಗೂ ಹೇರ್ ಸ್ಟೈಲ್‌ನ ಹುಡುಗರು ಗ್ಯಾಂಗ್‌ನ ಸದಸ್ಯರು. ‘ಅಣ್ಣ... ಅಣ್ಣ...’ ಎನ್ನುತ್ತಲೇ ಬಡ್ಡಿಕುಳಗಳ ಹಿಂದೆ ಓಡಾಡುವ ಅವರೆಲ್ಲ, ಸಾಲಗಾರರ ಮನೆಗೆ ಬೆಳ್ಳಂಬೆಳಗ್ಗೆ ಲಗ್ಗೆ ಇಡುತ್ತಾರೆ. ಮಚ್ಚು– ಲಾಂಗು ತೋರಿಸಿ ಬಡ್ಡಿ ವಸೂಲಿ ಮಾಡುತ್ತಾರೆ. ಸಾಲ ಪ‍ಡೆದವರ ಮನೆಗಳಲ್ಲಿ ನಿತ್ಯವೂ ಇಂಥ ದೃಶ್ಯ ಕಣ್ಣಿಗೆ ಬೀಳುತ್ತದೆ. ಸಾಲ ಮಾಡಿದ ತಪ್ಪಿಗೆ ಸಾಲಗಾರ, ಹೇಳಿದ್ದಕ್ಕೆಲ್ಲ ತಲೆಯಾಡಿಸಿ ಬಡ್ಡಿ ತುಂಬುತ್ತಿದ್ದಾನೆ. ಕೆಲವರಷ್ಟೇ ಪೊಲೀಸರಿಗೆ ದೂರು ಕೊಟ್ಟು, ಬಡ್ಡಿಕುಳಗಳಿಗೆ ಜೈಲಿನ ದಾರಿ ತೋರಿಸಿದ್ದಾರೆ.

ಸಂಘ– ಸಂಸ್ಥೆಗಳಿಂದಲೂ ‘ಮೀಟರ್‌ ಬಡ್ಡಿ’

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ಬಡ್ಡಿ ಕುಳಗಳು’ ಸಂಘ–ಸಂಸ್ಥೆಗಳ ಮೂಲಕ ಮೀಟರ್‌ ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ.

‘ಕಷ್ಟದ ಕಾಲದಲ್ಲಿ ಸಾಲ ಕೊಡುವ ಸಂಘ–ಸಂಸ್ಥೆಗಳು, ಪ್ರತಿ ವಾರ ಅಥವಾ ತಿಂಗಳ ಕಂತಿನಲ್ಲಿ ಸಾಲ ಮರುಪಾವತಿ ಮಾಡಿಸಿಕೊಳ್ಳುತ್ತವೆ. ಬಡ್ಡಿ ಮತ್ತು ಮೀಟರ್‌ ಬಡ್ಡಿಯೂ ಅದರಲ್ಲಿರುತ್ತದೆ’ ಎಂದು ಸಿಟಿ ಮಾರುಕಟ್ಟೆಯ ಬಿಡಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಆಭರಣ ಹರಾಜು ತಪ್ಪಿಸಲು ‘ಗೃಹಲಕ್ಷ್ಮಿ’

ರೈತರು ಚಿನ್ನದ ಆಭರಣಗಳನ್ನು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಸಾಲ ಪಡೆಯುವುದು ಸಾಮಾನ್ಯ. ಪಡೆದ ಸಾಲದ ಮೇಲಿನ ಮೀಟರ್‌ ಬಡ್ಡಿ ಓಡುವ ಪರಿ ಹೇಗಿರುತ್ತದೆ ಎಂದರೆ ಸಾಲ ತೀರುವಳಿ ಸಾಧ್ಯವಾಗದೆ ಆ ಆಭರಣಗಳನ್ನೆಲ್ಲ ಕಳೆದುಕೊಳ್ಳಬೇಕಾಗುತ್ತದೆ. ಅದನ್ನು ತಪ್ಪಿಸಲೆಂದೇ ರಾಜ್ಯ ಸರ್ಕಾರ ಚಿನ್ನದ ಒಡವೆಗಳ ಮೇಲೆ ಶೇ 3ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ‘ಗೃಹಲಕ್ಷ್ಮಿ’ ಯೋಜನೆ ಆರಂಭಿಸಲು ನಿರ್ಧರಿಸಿದೆ. ನಗರ ಭಾಗದಲ್ಲಿ ಚಕ್ರಬಡ್ಡಿ ಸುಳಿಯಿಂದ ಬಡವರನ್ನು ಬಿಡಿಸಲು ‘ಬಡವರ ಬಂಧು’ ಯೋಜನೆಯಿದ್ದರೆ, ಗ್ರಾಮಾಂತರ ಭಾಗದಲ್ಲಿ ‘ಗೃಹಲಕ್ಷ್ಮಿ’ ಯೋಜನೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT