<p>ಗುಲಾಮಿ ಪದ್ಧತಿಯ ದಿನಗಳಲ್ಲಿ ಒಬ್ಬ ಮಾಲೀಕನ ಬಳಿ ಅನೇಕ ಗುಲಾಮರು ಇರುತ್ತಿದ್ದರು. ಲುಕ್ಮಾನ್ ಅವರಲ್ಲೊಬ್ಬನಾಗಿದ್ದ. ಲುಕ್ಮಾನ್ ಗುಲಾಮನಾಗಿದ್ದರೂ, ಅತ್ಯಂತ ಚತುರ ಮತ್ತು ಬುದ್ಧಿವಂತನಾಗಿದ್ದ. ಅವನ ಖ್ಯಾತಿ ದೂರ ದೂರದವರೆಗೂ ಹರಡಿತ್ತು.</p><p>ಈ ವಿಚಾರ ಮಾಲೀಕನ ಕಿವಿಗೂ ಬಿತ್ತು. ಒಂದು ದಿನ ಮಾಲೀಕನು ಲುಕ್ಮಾನ್ನನ್ನು ಕರೆಸಿ ಹೇಳಿದನು: ‘ನೀನು ತುಂಬಾ ಬುದ್ಧಿವಂತನೆಂದು ಕೇಳಿದ್ದೇನೆ. ನಿನ್ನ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಇಚ್ಛಿಸುತ್ತೇನೆ. ಈ ಪರೀಕ್ಷೆಯಲ್ಲಿ ನೀನು ಉತ್ತೀರ್ಣನಾದರೆ ನಿನ್ನನ್ನು ದಾಸತ್ವದಿಂದ ಮುಕ್ತಗೊಳಿಸುತ್ತೇನೆ. ಹೋಗಿ, ಸತ್ತ ಒಂದು ಮೇಕೆಯನ್ನು ಕತ್ತರಿಸಿ, ಅದರಲ್ಲಿನ ಉತ್ತಮವಾದ ಭಾಗವನ್ನು ನನಗೆ ತಂದುಕೊಡು’.</p><p>ಮಾಲೀಕನ ಆಜ್ಞೆಯಂತೆ ಲುಕ್ಮಾನ್ ಸತ್ತ ಮೇಕೆಯ ನಾಲಿಗೆಯನ್ನು ತೆಗೆದುಕೊಂಡು ಮಾಲೀಕನ ಮುಂದೆ ಇಟ್ಟನು.</p><p>‘ನಾಲಿಗೆಯನ್ನೇ ಯಾಕೆ ತಂದೆ?’ ಎಂದು ಮಾಲೀಕನು ಕೇಳಿದಾಗ, ಲುಕ್ಮಾನ್ ಉತ್ತರಿಸಿದನು: ‘ದೇಹದಲ್ಲಿ ನಾಲಿಗೆ ಒಳ್ಳೆಯದಾಗಿದ್ದರೆ, ಎಲ್ಲವೂ ಒಳ್ಳೆಯದೇ ಆಗಿರುತ್ತದೆ’.</p><p>ಅದಕ್ಕೆ ಮಾಲೀಕನು ಹೇಳಿದನು: ‘ಸರಿ, ಇದನ್ನು ತೆಗೆದುಕೊಂಡು ಹೋಗು. ಈಗ ಮೇಕೆಯಲ್ಲಿನ ಕೆಟ್ಟ ಭಾಗವನ್ನು ತಂದುಕೊಡು’.</p><p>ಲುಕ್ಮಾನ್ ಹೊರಗೆ ಹೋಗಿ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಅದೇ ನಾಲಿಗೆಯನ್ನು ತಂದು ಮಾಲೀಕನ ಮುಂದೆ ಇಟ್ಟನು.</p><p>ಮತ್ತೆ ಕಾರಣ ಕೇಳಿದಾಗ ಲುಕ್ಮಾನ್ ಹೇಳಿದನು: </p><p>‘ದೇಹದಲ್ಲಿ ನಾಲಿಗೆ ಒಳ್ಳೆಯದಾಗಿರದಿದ್ದರೆ, ಎಲ್ಲವೂ ಕೆಟ್ಟದೇ ಆಗುತ್ತದೆ.’</p><p>ಅವನು ಮುಂದುವರಿದು ಹೇಳಿದನು:</p><p>‘ಮಾಲೀಕರೇ, ವಾಣಿ ಎಲ್ಲರಿಗೂ ಜನ್ಮಸಿದ್ಧವಾಗಿ ದೊರಕುತ್ತದೆ. ಆದರೆ, ಮಾತನಾಡುವ ಕಲೆಯು ಕೆಲವೇ ಜನರಿಗೆ ಬರುತ್ತದೆ. ಏನು ಮಾತನಾಡಬೇಕು? ಹೇಗೆ ಮಾತನಾಡಬೇಕು? ಯಾವಾಗ ಮಾತನಾಡಬೇಕು?—ಈ ಒಂದು ಕಲೆ ಅತಿ ವಿರಳರಿಗೆ ಮಾತ್ರ ತಿಳಿದಿದೆ. ಒಂದೇ ಮಾತಿನಿಂದ ಪ್ರೀತಿ ಹರಿಯಬಹುದು; ಮತ್ತೊಂದು ಮಾತಿನಿಂದ ಜಗಳ ಉಂಟಾಗಬಹುದು. ಕಹಿ ಮಾತುಗಳು ಲೋಕದಲ್ಲಿ ಎಷ್ಟೋ ಕಲಹಗಳನ್ನು ಹುಟ್ಟಿಸಿವೆ. ಈ ನಾಲಿಗೆಯೇ ಲೋಕದಲ್ಲಿ ಭಾರಿ ವಿಪತ್ತನ್ನುಂಟುಮಾಡಿದೆ. ಮೂರು ಇಂಚಿನ ಈ ನಾಲಿಗೆ ಎಂಬ ಆಯುಧದಿಂದ, ಆರು ಅಡಿ ಎತ್ತರದ ವ್ಯಕ್ತಿಯನ್ನೂ ಕೊಲ್ಲಬಹುದು; ಹಾಗೆಯೇ ಸಾಯುತ್ತಿರುವವನಲ್ಲೂ ಜೀವ ತುಂಬಬಹುದು. ಎಲ್ಲ ಜೀವಿಗಳಲ್ಲಿ ವಾಣಿ ಎಂಬ ವರವು ಮಾನವನಿಗೆ ಮಾತ್ರ ಲಭಿಸಿದೆ. ಅದರ ಸದ್ವಿನಿಯೋಗದಿಂದ ಸ್ವರ್ಗವೇ ಭೂಮಿಗೆ ಇಳಿಯಬಹುದು; ದುರುಪಯೋಗದಿಂದ ಸ್ವರ್ಗವೂ ನರಕವಾಗಬಹುದು’.</p><p>ಲುಕ್ಮಾನನ ಬುದ್ಧಿವಂತಿಕೆ ಮತ್ತು ಚಾತುರ್ಯಭರಿತ ಮಾತುಗಳನ್ನು ಕೇಳಿ ಮಾಲೀಕನು ಬಹಳ ಸಂತೋಷಪಟ್ಟನು. ಆ ದಿನ ಅವನ ಗುಲಾಮನೇ ಅವನಿಗೆ ದೊಡ್ಡ ಪಾಠವನ್ನು ಕಲಿಸಿದ್ದ. ಆದ್ದರಿಂದ ಅವನು ಲುಕ್ಮಾನನನ್ನು ದಾಸತ್ವದಿಂದ ಮುಕ್ತಗೊಳಿಸಿದನು.</p><p>ಶರಣರು ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದರು. ಕಬೀರ ‘ಬೋಲಿ ಏಕ್ ಅನಮೋಲ್ ಹೈ, ಜೋ ಕೋಯಿ ಬೋಲೆ ಜಾನಿ, ಹಿಯೇ ತರಾಜು ತೌಲಿ ಕೆ,ತಬ್ ಮುಖ ಬಾಹರ ಆನಿ’ (ಮಾತು ಅಮೂಲ್ಯವಾದುದು, ಅಳೆದು-ತೂಗಿ ನೋಡಿ ಮಾತಾಡಬೇಕು) ಎಂದ. ಮಧುರ ವಾಣಿ ಒಂದು ವರ. ಅದನ್ನು ಸಿದ್ಧಿಸುವುದೇನು ಕಷ್ಟವಲ್ಲ. ನಿಮ್ಮ ವಾಣಿ ಹೇಗಿದೆ? ಅದು ತೀಕ್ಷ್ಣವಾಗಿದ್ದರೆ ಅಥವಾ ಸಾಮಾನ್ಯವಾಗಿದ್ದರೂ ಅದನ್ನು ಸಿಹಿಯಾಗಿಸುವ ಪ್ರಯತ್ನ ಮಾಡಿ. ನಿಮ್ಮ ವಾಣಿ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ; ಅದು ಸದಾ ಉತ್ತಮವಾಗಿರಲೇಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಲಾಮಿ ಪದ್ಧತಿಯ ದಿನಗಳಲ್ಲಿ ಒಬ್ಬ ಮಾಲೀಕನ ಬಳಿ ಅನೇಕ ಗುಲಾಮರು ಇರುತ್ತಿದ್ದರು. ಲುಕ್ಮಾನ್ ಅವರಲ್ಲೊಬ್ಬನಾಗಿದ್ದ. ಲುಕ್ಮಾನ್ ಗುಲಾಮನಾಗಿದ್ದರೂ, ಅತ್ಯಂತ ಚತುರ ಮತ್ತು ಬುದ್ಧಿವಂತನಾಗಿದ್ದ. ಅವನ ಖ್ಯಾತಿ ದೂರ ದೂರದವರೆಗೂ ಹರಡಿತ್ತು.</p><p>ಈ ವಿಚಾರ ಮಾಲೀಕನ ಕಿವಿಗೂ ಬಿತ್ತು. ಒಂದು ದಿನ ಮಾಲೀಕನು ಲುಕ್ಮಾನ್ನನ್ನು ಕರೆಸಿ ಹೇಳಿದನು: ‘ನೀನು ತುಂಬಾ ಬುದ್ಧಿವಂತನೆಂದು ಕೇಳಿದ್ದೇನೆ. ನಿನ್ನ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಇಚ್ಛಿಸುತ್ತೇನೆ. ಈ ಪರೀಕ್ಷೆಯಲ್ಲಿ ನೀನು ಉತ್ತೀರ್ಣನಾದರೆ ನಿನ್ನನ್ನು ದಾಸತ್ವದಿಂದ ಮುಕ್ತಗೊಳಿಸುತ್ತೇನೆ. ಹೋಗಿ, ಸತ್ತ ಒಂದು ಮೇಕೆಯನ್ನು ಕತ್ತರಿಸಿ, ಅದರಲ್ಲಿನ ಉತ್ತಮವಾದ ಭಾಗವನ್ನು ನನಗೆ ತಂದುಕೊಡು’.</p><p>ಮಾಲೀಕನ ಆಜ್ಞೆಯಂತೆ ಲುಕ್ಮಾನ್ ಸತ್ತ ಮೇಕೆಯ ನಾಲಿಗೆಯನ್ನು ತೆಗೆದುಕೊಂಡು ಮಾಲೀಕನ ಮುಂದೆ ಇಟ್ಟನು.</p><p>‘ನಾಲಿಗೆಯನ್ನೇ ಯಾಕೆ ತಂದೆ?’ ಎಂದು ಮಾಲೀಕನು ಕೇಳಿದಾಗ, ಲುಕ್ಮಾನ್ ಉತ್ತರಿಸಿದನು: ‘ದೇಹದಲ್ಲಿ ನಾಲಿಗೆ ಒಳ್ಳೆಯದಾಗಿದ್ದರೆ, ಎಲ್ಲವೂ ಒಳ್ಳೆಯದೇ ಆಗಿರುತ್ತದೆ’.</p><p>ಅದಕ್ಕೆ ಮಾಲೀಕನು ಹೇಳಿದನು: ‘ಸರಿ, ಇದನ್ನು ತೆಗೆದುಕೊಂಡು ಹೋಗು. ಈಗ ಮೇಕೆಯಲ್ಲಿನ ಕೆಟ್ಟ ಭಾಗವನ್ನು ತಂದುಕೊಡು’.</p><p>ಲುಕ್ಮಾನ್ ಹೊರಗೆ ಹೋಗಿ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಅದೇ ನಾಲಿಗೆಯನ್ನು ತಂದು ಮಾಲೀಕನ ಮುಂದೆ ಇಟ್ಟನು.</p><p>ಮತ್ತೆ ಕಾರಣ ಕೇಳಿದಾಗ ಲುಕ್ಮಾನ್ ಹೇಳಿದನು: </p><p>‘ದೇಹದಲ್ಲಿ ನಾಲಿಗೆ ಒಳ್ಳೆಯದಾಗಿರದಿದ್ದರೆ, ಎಲ್ಲವೂ ಕೆಟ್ಟದೇ ಆಗುತ್ತದೆ.’</p><p>ಅವನು ಮುಂದುವರಿದು ಹೇಳಿದನು:</p><p>‘ಮಾಲೀಕರೇ, ವಾಣಿ ಎಲ್ಲರಿಗೂ ಜನ್ಮಸಿದ್ಧವಾಗಿ ದೊರಕುತ್ತದೆ. ಆದರೆ, ಮಾತನಾಡುವ ಕಲೆಯು ಕೆಲವೇ ಜನರಿಗೆ ಬರುತ್ತದೆ. ಏನು ಮಾತನಾಡಬೇಕು? ಹೇಗೆ ಮಾತನಾಡಬೇಕು? ಯಾವಾಗ ಮಾತನಾಡಬೇಕು?—ಈ ಒಂದು ಕಲೆ ಅತಿ ವಿರಳರಿಗೆ ಮಾತ್ರ ತಿಳಿದಿದೆ. ಒಂದೇ ಮಾತಿನಿಂದ ಪ್ರೀತಿ ಹರಿಯಬಹುದು; ಮತ್ತೊಂದು ಮಾತಿನಿಂದ ಜಗಳ ಉಂಟಾಗಬಹುದು. ಕಹಿ ಮಾತುಗಳು ಲೋಕದಲ್ಲಿ ಎಷ್ಟೋ ಕಲಹಗಳನ್ನು ಹುಟ್ಟಿಸಿವೆ. ಈ ನಾಲಿಗೆಯೇ ಲೋಕದಲ್ಲಿ ಭಾರಿ ವಿಪತ್ತನ್ನುಂಟುಮಾಡಿದೆ. ಮೂರು ಇಂಚಿನ ಈ ನಾಲಿಗೆ ಎಂಬ ಆಯುಧದಿಂದ, ಆರು ಅಡಿ ಎತ್ತರದ ವ್ಯಕ್ತಿಯನ್ನೂ ಕೊಲ್ಲಬಹುದು; ಹಾಗೆಯೇ ಸಾಯುತ್ತಿರುವವನಲ್ಲೂ ಜೀವ ತುಂಬಬಹುದು. ಎಲ್ಲ ಜೀವಿಗಳಲ್ಲಿ ವಾಣಿ ಎಂಬ ವರವು ಮಾನವನಿಗೆ ಮಾತ್ರ ಲಭಿಸಿದೆ. ಅದರ ಸದ್ವಿನಿಯೋಗದಿಂದ ಸ್ವರ್ಗವೇ ಭೂಮಿಗೆ ಇಳಿಯಬಹುದು; ದುರುಪಯೋಗದಿಂದ ಸ್ವರ್ಗವೂ ನರಕವಾಗಬಹುದು’.</p><p>ಲುಕ್ಮಾನನ ಬುದ್ಧಿವಂತಿಕೆ ಮತ್ತು ಚಾತುರ್ಯಭರಿತ ಮಾತುಗಳನ್ನು ಕೇಳಿ ಮಾಲೀಕನು ಬಹಳ ಸಂತೋಷಪಟ್ಟನು. ಆ ದಿನ ಅವನ ಗುಲಾಮನೇ ಅವನಿಗೆ ದೊಡ್ಡ ಪಾಠವನ್ನು ಕಲಿಸಿದ್ದ. ಆದ್ದರಿಂದ ಅವನು ಲುಕ್ಮಾನನನ್ನು ದಾಸತ್ವದಿಂದ ಮುಕ್ತಗೊಳಿಸಿದನು.</p><p>ಶರಣರು ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದರು. ಕಬೀರ ‘ಬೋಲಿ ಏಕ್ ಅನಮೋಲ್ ಹೈ, ಜೋ ಕೋಯಿ ಬೋಲೆ ಜಾನಿ, ಹಿಯೇ ತರಾಜು ತೌಲಿ ಕೆ,ತಬ್ ಮುಖ ಬಾಹರ ಆನಿ’ (ಮಾತು ಅಮೂಲ್ಯವಾದುದು, ಅಳೆದು-ತೂಗಿ ನೋಡಿ ಮಾತಾಡಬೇಕು) ಎಂದ. ಮಧುರ ವಾಣಿ ಒಂದು ವರ. ಅದನ್ನು ಸಿದ್ಧಿಸುವುದೇನು ಕಷ್ಟವಲ್ಲ. ನಿಮ್ಮ ವಾಣಿ ಹೇಗಿದೆ? ಅದು ತೀಕ್ಷ್ಣವಾಗಿದ್ದರೆ ಅಥವಾ ಸಾಮಾನ್ಯವಾಗಿದ್ದರೂ ಅದನ್ನು ಸಿಹಿಯಾಗಿಸುವ ಪ್ರಯತ್ನ ಮಾಡಿ. ನಿಮ್ಮ ವಾಣಿ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ; ಅದು ಸದಾ ಉತ್ತಮವಾಗಿರಲೇಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>