ಬೆಳಗಾವಿ: ಕಬ್ಬಿಗೆ ನ್ಯಾಯ ಸಮ್ಮತವಾದ ಬೆಲೆ ಸಿಗುತ್ತಿಲ್ಲವೆಂದು ರೈತರು ಪರಿತಪಿಸುವುದು ಮುಂದುವರೆದಿದೆ. ಸಕ್ಕರೆ ಕಾರ್ಖಾನೆಗಳ ವಿರುದ್ಧ ಪ್ರತಿಭಟನೆಗಳು ಆಗಾಗ್ಗೆ ನಡೆಯುತ್ತಿದ್ದರೂ ರೈತರ ಬೇಡಿಕೆಯಂತೂ ಈಡೇರುತ್ತಲೇ ಇಲ್ಲ.
ಈಗಿರುವ ಕಬ್ಬು ನಿಯಂತ್ರಣ ಕಾಯ್ದೆ ಪ್ರಕಾರ, ಕಬ್ಬು ಪೂರೈಸಿದ 14 ದಿನಗಳೊಳಗೆ ರೈತರಿಗೆ ಹಣ ಕೊಡಬೇಕು. ತಪ್ಪಿದರೆ, ಶೇ 15ರಷ್ಟು ಬಡ್ಡಿ ಸೇರಿಸಿ ಕೊಡಬೇಕು. ಆದರೆ, ಇದುವರೆಗೂ ಯಾವ ಕಾರ್ಖಾನೆಯೂ ನಿಗದಿಯಂತೆ ಹಣ ಕೊಟ್ಟಿಲ್ಲ; ಕೊಡದಿರುವುದಕ್ಕೆ ಬಡ್ಡಿ ಸೇರಿಸಿಯೂ ಪಾವತಿಸಿಲ್ಲ. ಇದು ಈ ಕಾನೂನಿನ ಗಟ್ಟಿತನ!
ಹಾಗಾದರೆ ಏನು ಮಾಡಬೇಕು?
ಕಠಿಣ ಕಾನೂನು ರೂಪಿಸಬೇಕು. ಹಣ ಪಾವತಿಗೆ ಸಂಬಂಧಿಸಿದಂತೆ ಕಾರ್ಖಾನೆಗಳ ಆಡಳಿತಾಧಿಕಾರಿಯನ್ನೇ ಹೊಣೆಗಾರರನ್ನಾಗಿಸುವ ಕಾನೂನು ಜಾರಿಗೆ ತರಬೇಕು. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಕಲ್ಪಿಸಬೇಕು. ಕಬ್ಬು ಕಟಾವು ಆರಂಭವಾಗುವ ವೇಳೆಯೇ ಎಫ್ಆರ್ಪಿ ದರವನ್ನು ಪ್ರಕಟಿಸಬೇಕು. ಈ ದರವನ್ನು ಪಾವತಿಸುವಂತೆ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ನಿಗದಿತ ಸಮ ಯದೊಳಗೆ ಹಣ ಪಾವತಿಸದ ಕಾರ್ಖಾನೆಗಳನ್ನು ವಶಕ್ಕೆ ಪಡೆಯಬೇಕು. ಆಡಳಿತಾಧಿಕಾರಿಯನ್ನು ನೇಮಿಸಿ, ಸಕ್ಕರೆ ಹರಾಜು ಹಾಕಬೇಕು. ಅದರಿಂದ ಬರುವ ಹಣವನ್ನು ರೈತರಿಗೆ ಪಾವತಿಸಲು ಮುಂದಾಗಬೇಕು. ಇದೇ ರೀತಿ, ಪ್ರಾಮಾಣಿಕವಾಗಿ ಹಣ ಪಾವತಿಸುವ ಕಾರ್ಖಾನೆಗಳಿಗೆ ಪ್ರೋತ್ಸಾಹ ದಾಯಕ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು. ಕಬ್ಬು ಖರೀದಿ ಮೇಲಿನ ಸೆಸ್– ರೋಡ್ ಸೆಸ್ನಿಂದ ವಿನಾಯ್ತಿ ನೀಡುವುದು, ಪುನಶ್ಚೇತನಕ್ಕಾಗಿ ಆರ್ಥಿಕ ಸಹಾಯ ನೀಡಬೇಕು ಎನ್ನುತ್ತಾರೆ ರೈತ ಮುಖಂಡರು.
ಆಡಳಿತದಲ್ಲಿ ಬಿಗಿ
ಸಕ್ಕರೆ ಆಯುಕ್ತರ ನಿರ್ದೇಶನಾಲಯವನ್ನು ಇನ್ನಷ್ಟು ಸಶಕ್ತಗೊಳಿಸ ಬೇಕು. ಕಾರ್ಖಾನೆಗಳ ಮಾಲೀಕರ ಲಾಬಿಗೆ ಮಣಿಯದ, ಬಿಗಿ ಆಡಳಿತಗಾರರನ್ನು ನೇಮಿಸ ಬೇಕು. ಹಣ ಪಾವತಿಸದ ಕಾರ್ಖಾನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಅವಕಾಶ ಕಲ್ಪಿಸಬೇಕು. ಹಾಗಾದರೆ, ಪರಿಸ್ಥಿತಿಯಲ್ಲಿ ಒಂದಿಷ್ಟು ಸುಧಾರಣೆ ಕಾಣಬಹುದು ಎನ್ನುತ್ತಾರೆ ರೈತ ಮುಖಂಡರು.
ಪದೇ ಪದೇ ಆಯುಕ್ತರ ವರ್ಗಾವಣೆಗೆ ಕಡಿವಾಣ ಹಾಕಬೇಕು. ಕಳೆದ ವರ್ಷ ಸಕ್ಕರೆ ಆಯುಕ್ತರಾಗಿದ್ದ ಅಜಯ್ ನಾಗಭೂಷಣ ಅವರು ರೈತರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡಿದ್ದರು. ಹಲವು ಬಾರಿ ಬೆಳಗಾವಿಯಲ್ಲಿ ರೈತರ ಅಹವಾಲು ಆಲಿಸಿದ್ದರು. ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ನೀಡುವ ಮೂಲಕ ಬಿಸಿ ಮುಟ್ಟಿಸಿದ್ದರು. ಇನ್ನೇನು ಎಲ್ಲವೂ ಸರಿದಾರಿಗೆ ಬರುತ್ತಿದೆ ಎನ್ನುವಾಗಲೇ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಲಾಯಿತು. ಈಗ ಬೇರೊಬ್ಬರು ಬಂದು, ತಿಳಿದುಕೊಳ್ಳುವುದರಲ್ಲಿಯೇ ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ಸಮಸ್ಯೆ ಹಾಗೆಯೇ ಇರುತ್ತದೆ.
ಸಕ್ಕರೆ ಉದ್ಯಮದ ಎರಡು ಕಣ್ಣುಗಳಂತಿರುವ ಕಾರ್ಖಾನೆಗಳ ಮಾಲೀಕರು ಹಾಗೂ ರೈತರ ನಡುವೆ ಸಮನ್ವಯತೆ ಸಾಧಿಸುವ
ಬಹುದೊಡ್ಡ ಜವಾಬ್ದಾರಿ ಸಕ್ಕರೆ ನಿರ್ದೇಶನಾಲಯದ ಮೇಲೆ ಇದೆ. ಕಾರ್ಖಾನೆಗಳು ಎದುರಿಸುವ ಸಂಕಷ್ಟಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಲ್ಪಿಸುವುದು; ರೈತರಿಗೆ ಸಕಾಲದಲ್ಲಿ ಹಣ ಕೊಡಿಸುವ ಜವಾಬ್ದಾರಿ ನಿರ್ದೇಶನಾಲಯದ್ದು.
* ರೈತರ ಹಿತ ಕಾಪಾಡಲು ಕಟ್ಟುನಿಟ್ಟಾದ ಕಾನೂನು ಜಾರಿಗೊಳಿಸಬೇಕು. ಸಕ್ಕರೆ ಕಾರ್ಖಾನೆಗಳ ಮಾಲೀಕರ ಲಾಬಿಗೆ ಮಣಿಯಬಾರದು
–ಬಾಬಾಗೌಡ ಪಾಟೀಲ,ರೈತ ಹೋರಾಟಗಾರ
*ಉತ್ತರ ಕರ್ನಾಟಕಕ್ಕೆ ನಿರ್ದೇಶನಾಲಯದ ಕಚೇರಿ ಸ್ಥಳಾಂತರಿಸಬೇಕು. ಇದರಿಂದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಅನುಕೂಲವಾಗಲಿದೆ.
–ಸಿದಗೌಡ ಮೋದಗಿ,ರೈತ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.