ದಾವಣಗೆರೆ:ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಹಾಗೂ ಒಂದೇ ಸೂರಿನಡಿ ಎಲ್ಕೆಜಿಯಿಂದ ಪಿಯುಸಿಯವರೆಗೆ ಶಿಕ್ಷಣ ನೀಡುವ ಉದ್ದೇಶದಿಂದಆರಂಭಿಸಿರುವಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳಉದ್ದೇಶ ಇನ್ನೂ ಈಡೇರಿಲ್ಲ.
ರಾಜ್ಯ ಸರ್ಕಾರವು 2018–19ನೇ ಸಾಲಿನಲ್ಲಿ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದ್ದು, ಮಕ್ಕಳ ಕಲಿಕಾ ಸಾಮರ್ಥ್ಯದ ಬಗ್ಗೆ ವಿಶ್ವಾಸಾರ್ಹತೆ ಮೂಡಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ರಾಜ್ಯದಲ್ಲಿ ಒಟ್ಟು 264 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಈ ಶಾಲೆಗಳಲ್ಲಿ ದಾಖಲಾತಿಗೆ ಮಕ್ಕಳ ಪೋಷಕರು ಆಸಕ್ತಿ ತೋರುತ್ತಿದ್ದರೂ ಮೂಲಸೌಕರ್ಯಗಳಿಲ್ಲದೆ ಸೊರಗುತ್ತಿವೆ.
ಪ್ರೌಢಶಿಕ್ಷಣ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಬೇರೆ ಬೇರೆಯಾಗಿರುವುದರಿಂದ ಎಲ್ಕೆಜಿಯಿಂದ ಪಿಯುಸಿಯವರೆಗೆ ಒಂದೇ ಸೂರಿನಡಿ ತರಲು ಸಮಸ್ಯೆಯಾಗಿದೆ. ಪಬ್ಲಿಕ್ ಶಾಲೆಗಳ ಜವಾಬ್ದಾರಿ ತೆಗೆದುಕೊಳ್ಳಲು ಕೆಲ ಪಿಯು ಕಾಲೇಜುಗಳ ಪ್ರಾಚಾರ್ಯರು ಹಿಂದೇಟು ಹಾಕುತ್ತಿದ್ದಾರೆ.
ಮೊದಲಿನಂತೆ 8ನೇ ತರಗತಿಯನ್ನು ಪ್ರೌಢಶಾಲಾ ವಿಭಾಗಕ್ಕೆ ಸೇರಿಸಬೇಕೆಂಬ ಬೇಡಿಕೆ ಇದೆ.ಪಬ್ಲಿಕ್ ಶಾಲೆಗಳೆಲ್ಲಾ ಒಂದೇ ಸೂರು ಎಂದಾಗ 8ನೇ ತರಗತಿಯನ್ನು ಮಾತ್ರ ಪ್ರಾಥಮಿಕಕ್ಕೆ ಸೇರಿಸುವುದು ಏಕೆ ಎಂಬ ಪ್ರಶ್ನೆ ಹಲವು ಶಿಕ್ಷಕರದ್ದು.
‘ಕೆಲ ಸಮಸ್ಯೆಗಳ ಹೊರತಾಗಿಯೂ ಪಬ್ಲಿಕ್ ಶಾಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕಟ್ಟಡ, ಶಿಕ್ಷಕರ ಕೊರತೆ ಸಂಬಂಧ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಿವಮೊಗ್ಗದ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ತಿಳಿಸಿದರು.
‘ಚಿತ್ರದುರ್ಗ ಜಿಲ್ಲೆಯ ಪಬ್ಲಿಕ್ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಿದೆ. ಕಲಿಕಾ ಉಪಕರಣಗಳು, ವಿಜ್ಞಾನ ಪ್ರಯೋಗಾಲಯ ಹಾಗೂ ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚುತ್ತಿದೆ’ ಎನ್ನುತ್ತಾರೆ ಚಿತ್ರದುರ್ಗದ ಬಿ.ಜಿ.ಕೆರೆ ಕರ್ನಾಟಕ ಪಬ್ಲಿಕ್ ಶಾಲೆಉಪ ಪ್ರಾಂಶುಪಾಲಎಂ.ಮಲ್ಲಿಕಾರ್ಜುನ್.
‘ಗ್ರಾಮೀಣ ಭಾಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಿದ್ದು, ಮಕ್ಕಳ ಕಲಿಕೆಗೆ ಬಹಳ ಸಹಕಾರಿಯಾಗಿದೆ. ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಗಳನ್ನು ಈ ಶಾಲೆಗೆ ದಾಖಲಿಸಿದ್ದೇನೆ’ ಎಂದು ಮರಡಿಹಳ್ಳಿಯ ವಿ.ರಘುನಾಥ್ ಹೇಳಿದರು.
‘ಮಕ್ಕಳ ಸಂಖ್ಯೆಗನುಗುಣವಾಗಿ ಈ ಶಾಲೆಗಳಲ್ಲಿ ಶಿಕ್ಷಕರು ಇಲ್ಲ. ಕೊಠಡಿಗಳ ನಿರ್ಮಾಣವಾಗಿಲ್ಲ’ ಎಂದು ಸಾಸ್ವೆಹಳ್ಳಿಯ ಶಾಲೆಯ ಹೆಸರು ಬಹಿರಂಗಪಡಿಸಲು ಬಯಸದ ಶಿಕ್ಷಕರೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.