ಕಲಬುರಗಿ: ಕಂದಾಯ ಇಲಾಖೆಯ ಮಹತ್ವಾಕಾಂಕ್ಷೆಯ, 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಗಡಿ ಜಿಲ್ಲೆ ಬೀದರ್ನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ.
ಮಧ್ಯವರ್ತಿಗಳ ಹಾವಳಿ ತಪ್ಪಿಸಲು ದೂರವಾಣಿ ಕರೆ ಮೂಲಕ ವಿವಿಧ ಪಿಂಚಣಿ ಸೌಲಭ್ಯ ಪಡೆಯಲು ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ವಡಗಾಂವ (ಡಿ) ಗ್ರಾಮದಲ್ಲಿ ನಡೆದ ಕಂದಾಯ ಸಚಿವರ ಗ್ರಾಮ ವಾಸ್ತವ್ಯದ ವೇಳೆ ಪ್ರತ್ಯೇಕ ಸಹಾಯವಾಣಿ ಕೌಂಟರ್ ತೆರೆಯಲಾಗಿತ್ತು.
ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗಲಿಲ್ಲ. ನಿರಂತರವಾಗಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇಲಾಖೆಯ ಮಳಿಗೆಯಲ್ಲಿದ್ದ ಸಿಬ್ಬಂದಿ ಸಹ ಕರೆಗೆ ಪ್ರಯತ್ನಿಸಿ ಕೈ ಚೆಲ್ಲಿದರು.
‘ತಾಲ್ಲೂಕು ಗಡಿ ಭಾಗವಾಗಿರುವುದರಿಂದ ನೆಟ್ವರ್ಕ್ ಸಮಸ್ಯೆ ಹೆಚ್ಚಿದೆ. ಆ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ. ಫೋನ್ ಮಾಡಿ ಪಿಂಚಣಿ ಸೌಲಭ್ಯ ಸಿಗುತ್ತದೆ ಎನ್ನುವುದು ಇನ್ನೂ ಬಹಳ ಜನರಿಗೆ ತಿಳಿದಿಲ್ಲ. ಈಗಾಗಲೇ ಗ್ರಾಮ ಸೇವಕರು, ಕಂದಾಯ ನಿರೀಕ್ಷಕರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪಿಂಚಣಿಗಾಗಿ ಬೇಡಿಕೆ ಸಲ್ಲಿಸಿದವರಿಗೆ ಕರೆ ಮಾಡಿ ಕೋರಿಕೆ ಸಲ್ಲಿಸುವಂತೆ ತಿಳಿವಳಿಕೆ ನೀಡುತ್ತಿದ್ದೇವೆ’ ಎಂದು ಔರಾದ್ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಹೇಳಿದರು.
ಗ್ರಾಮ ವಾಸ್ತವ್ಯದಲ್ಲಿ ಸಲ್ಲಿಸಲಾದ 647 ಬೇಡಿಕೆಗಳ ಪೈಕಿ 335 ಫಲಾನುಭವಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ‘ಹಲೋ ಕಂದಾಯ ಸಚಿವರೆ’ ಸಹಾಯವಾಣಿಗೆ ಜಿಲ್ಲೆಯಲ್ಲಿ ಜಾಗೃತಿ ಕೊರತೆ ಇದೆ.
ಮೇ 14ರಿಂದ ಮೇ 25ರವರೆಗೆ ಯಾದಗಿರಿ, ಶಹಾಪುರ ತಾಲ್ಲೂಕಿನಿಂದ ಮಾತ್ರ 6 ಅರ್ಜಿಗಳು ಬಂದಿವೆ. ಉಳಿದ ತಾಲ್ಲೂಕುಗಳಾದ ಗುರುಮಠಕಲ್, ಸುರಪುರ, ವಡಗೇರಾ, ಹುಣಸಗಿ ತಾಲ್ಲೂಕಿನಿಂದ ಒಂದೂ ಕರೆ ಬಂದಿಲ್ಲ.
ಗ್ರಾಮ ವಾಸ್ತವ್ಯ ಎಲ್ಲೆಲ್ಲಿ ನಡೆಯಿತು
* ಹೊಸಳ್ಳಿ ಗ್ರಾಮ (ಬೆಂಗಳೂರು ಗ್ರಾಮಾಂತರ ಜಿಲ್ಲೆ)
* ಛಬ್ಬಿ ಗ್ರಾಮ (ಧಾರವಾಡ ಜಿಲ್ಲೆ)
* ಸುರಹೊನ್ನೆ- ನ್ಯಾಮತಿ ಗ್ರಾಮ (ದಾವಣಗೆರೆ ಜಿಲ್ಲೆ)
* ಆರೂರು- ಕೊಕ್ಕರ್ಣೆ ಗ್ರಾಮ (ಉಡುಪಿ ಜಿಲ್ಲೆ) (ಕುಣಬಿ, ಕೊರಗ ಜನಾಂಗದವರ ಮನೆಗೆ ಭೇಟಿ ನೀಡಿ ಉಪಾಹಾರ ಸೇವನೆ ಮಾಡಿದ್ದರು) ಕೊರಗ ಜನಾಂಗದ ಒಬ್ಬರಿಗೆ ಗ್ರಾಮ ಸಹಾಯಕ ಹುದ್ದೆಗೆ ನೇಮಕಾತಿ ಪತ್ರ ನೀಡಿದರು.
* ಸುರಪುರ, ದೇವತ್ಕಲ್ ಗ್ರಾಮ (ಯಾದಗಿರಿ ಜಿಲ್ಲೆ)
* ಹೊಲನಗದ್ದೆ, ಆಚವೆ- ಹಿಲ್ಲೂರು ಗ್ರಾಮ (ಉತ್ತರಕನ್ನಡ ಜಿಲ್ಲೆ)
(ಸಿದ್ದಿ ಮತ್ತು ಗೌಳಿ ಜನಾಂಗ) ಸಿದ್ದಿ ಜನಾಂಗದ ಒಬ್ಬ ಮಹಿಳೆಗೆ ಗ್ರಾಮ ಸಹಾಯಕ ಹುದ್ದೆಗೆ ನೇಮಕಾತಿ ಪತ್ರ ನೀಡಿದರು.
* ವಡಗಾಂವ್ (ದೇ) ಗ್ರಾಮ (ಬೀದರ್ ಜಿಲ್ಲೆ, ಔರಾದ್ ತಾಲ್ಲೂಕು)
* ಕಂದಾಯ ಸಚಿವ ಆರ್.ಅಶೋಕ ಅವರು ಬೆಂಗಳೂರು ಗ್ರಾಮಾಂತರ, ಧಾರವಾಡ, ದಾವಣಗೆರೆ, ಉಡುಪಿ, ಯಾದಗಿರಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಒಟ್ಟು 8,791 ಅರ್ಜಿಗಳು ಸ್ವೀಕೃತಗೊಂಡಿದ್ದವು. ಈ ಪೈಕಿ 8,298 ಅರ್ಜಿಗಳನ್ನು ವಿಲೇವಾರಿ ಆಗಿವೆ. ಬಾಕಿ 493 ಅರ್ಜಿಗಳನ್ನು ವಿಲೇವಾರಿ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಲಾಗಿದೆ.
* ದೂರವಾಣಿ ಮೂಲಕ 1576 ಜನರಿಗೆ ಪಿಂಚಣಿ ಮಂಜೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.