ಬೆಂಗಳೂರು: ’ಈರುಳ್ಳಿ: ಮುಗಿಯದ ಕಣ್ಣೀರು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಫೆ. 26ರಂದು) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.
ಸಂಗ್ರಹ ವ್ಯವಸ್ಥೆ ಕಲ್ಪಿಸಿ
ಈರುಳ್ಳಿ ಎಲ್ಲರಿಗೂ ಬೇಕು. ಆದರೆ, ಅದನ್ನು ಬೆಳೆಯುವ ರೈತನ ಪಾಡು ನಮಗೆ ಸಂಬಂಧವಿಲ್ಲ ಎಂಬಂತೆ ವರ್ತಿಸುವುದು ಮನುಷ್ಯತ್ವ ಅಲ್ಲ. ರಾಜ್ಯದಲ್ಲಿನ ಈರುಳ್ಳಿಗಿಂತಲೂ ಹೊರ ರಾಜ್ಯದ ಈರುಳ್ಳಿ ಹೆಚ್ಚು ರುಚಿಕರ ಹಾಗೂ ಬಾಳಿಕೆ ಬರುತ್ತವೆ ಎನ್ನುವುದು ಬೇರೆ ಮಾತು! ಬಹುಶಃ ಎಲ್ಲ ಬೆಳೆಯ ರೈತರದ್ದೂ ಇದೇ ಪಾಡು. ಕಾರಣ ಮಧ್ಯವರ್ತಿಗಳು ಜತೆಗೆ ಬೆಳೆದ ಬೆಳೆಯನ್ನು ಸೂಕ್ತ ಮಾರುಕಟ್ಟೆ ದರ ಸಿಗುವವರೆಗೆ ಕಾಲಿಡಲು ಸಂಗ್ರಹ ಸಮಸ್ಯೆ ಇದೆ. ಇವನ್ನೆಲ್ಲ ಮನಗಂಡು ರೈತರು ಬೆಳೆದ ವಿವಿಧ ಬೆಳೆಗಳನ್ನು ಕಾಪಿಡಲು ಸೂಕ್ತ ವ್ಯವಸ್ಥೆ ಮಾಡಬೇಕು.
-ಚನ್ನಬಸವ ಪುತ್ತೂರ, ಉಡುಪಿ
---------------
ಕಣ್ಣೀರೇ ಗತಿ
ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಪ್ರತಿವರ್ಷ ಪರಿತಪಿಸುತ್ತಿದ್ದಾರೆ. ಬಂಡವಾಳ ಹುಟ್ಟುವುದೇ ಇಲ್ಲ. ವ್ಯವಸಾಯ ಮಾಡಬೇಕೋ ಬೇಡವೋ ಎನ್ನುವ ಮನಃಸ್ಥಿತಿ ರೈತರದ್ದಾಗಿದೆ. ಪ್ರತಿವರ್ಷವೂ ಇದೇ ಪರಿಸ್ಥಿತಿ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ನಿಗದಿತ ದರ ಕೊಡದೆ ಇದ್ದಲ್ಲಿ ರೈತರ ಸ್ಥಿತಿ ಶೋಚನೀಯ ಸ್ಥಿತಿಗೆ ಬಂದು ತಲುಪುತ್ತದೆ.
–ಎಂ. ಪರಮೇಶ್ವರ
ಮದ್ದಿಹಳ್ಳಿ, ಹಿರಿಯೂರು ತಾಲ್ಲೂಕು
----------------
’ಸಮರ್ಪಕ ಬೆಲೆ ದೊರೆಯಲಿ’
ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗುತ್ತಿಲ್ಲ. ರೈತರು ಈರುಳ್ಳಿ ಬೆಳೆದು ಮಾರಾಟ ಮಾಡುವ ಸಮಯಕ್ಕೆ ಅದಕ್ಕೆ ಸರಿಯಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಸಿಗುತ್ತಿಲ್ಲ. ಈರುಳ್ಳಿ ಬೆಳೆದ ಕರ್ನಾಟಕ ರೈತರು ಅವರಿಗೆ ಈರುಳ್ಳಿಯನ್ನು ಇರಿಸಲು ದಾಸ್ತಾನು ಕೊಠಡಿಗಳು ಸಿಗುತ್ತಿಲ್ಲ. ಈರುಳ್ಳಿ ಹಸಿ ಇದ್ದಾಗ ಮಾರಾಟ ಮಾಡಲು ಹೋದರೆ ಸರಿಯಾದ ಬೆಲೆ ಸಿಗುವುದಿಲ್ಲ. ಒಮ್ಮೆ ಬೆಳೆದ ಈರುಳ್ಳಿ ಅದು ಕೇವಲ ಮೂರು ನಾಲ್ಕು ತಿಂಗಳು ಮಾತ್ರ ಉತ್ತಮವಾಗಿರುತ್ತದೆ. ಈರುಳ್ಳಿಯನ್ನು ಒಣಗಿಸದಿದ್ದರೆ ಅದು ಕೊಳೆತು ಹೋಗುತ್ತದೆ. ಆಗ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಆದ್ದರಿಂದ, ಸರ್ಕಾರ ಇದರಲ್ಲಿ ಮಧ್ಯಸ್ಥಿಕೆ ವಹಿಸಿ ರೈತರಿಗೆ ಬೆಂಬಲ ಬೆಲೆ ನೀಡಬೇಕು.
– ಮಹೇಶ ಹೊಸೂರ
ಬೆಳಗಾವಿ
----------------------
ಕೇವಲ ಭರವಸೆ ಬೇಡ. ಬೇಡಿಕೆ ಈಡೇರಿಸಿ
‘ರೈತ ಇಲ್ಲದೆ ದೇಶ ಇಲ್ಲ, ರೈತ ದೇಶದ ಬೆನ್ನೆಲುಬು ಎಂಬೆಲ್ಲ ಮಾತನ್ನು ರಾಜಕಾರಣಿಗಳು ತುಂಬಿದ ಸಭೆಯಲ್ಲಿ ನುಡಿಯುತ್ತಾರೆ. ಆದರೆ, ರೈತರ ಕಣ್ಣೀರನ್ನು ಒರೆಸುವವರು ಬೆರಳಣಿಕೆಯಷ್ಟು ಜನ. ಸರಿಯಾದ ಸಮಯಕ್ಕೆ ಮಳೆಯಾಗದೆ, ಬೆಳೆ ಕೈಸೇರದೆ ರೈತ ಮಾಡಿರುವ ಸಾಲವನ್ನು ತೀರಿಸಲಾಗದೆ ನೇಣಿಗೆ ಶರಣಗುತ್ತಿದ್ದಾನೆ. ಮಧ್ಯವರ್ತಿಗಳಿಂದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಲಾಭದಲ್ಲಿ ಶೇ 50 ರಷ್ಟು ಮಧ್ಯವರ್ತಿಗಳೇ ಸ್ವೀಕರಿಸುತ್ತಿದ್ದಾರೆ. ರೈತರ ಅಮಾಯಕತನವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ರೈತರ ಕಷ್ಟಕ್ಕೆ ನೇರವಾಗಲು ಸರ್ಕಾರದಲ್ಲಿ ಹಣವಿಲ್ಲವೇ? ಮಧ್ಯವರ್ತಿಗಳು ರೈತರ ಲಾಭವನ್ನು ಪಡೆಯುವುದನ್ನು ತಡೆಯಬೇಕು. ನೇರವಾಗಿ ರೈತ ತನ್ನ ಬೆಳೆಯನ್ನು ಖರೀದಿದಾರರಿಗೆ ಮಾರಾಟ ಮಾಡುವ ವ್ಯವಸ್ಥೆ ತರಬೇಕು.
ಪೃಥ್ವಿ ಶಶಾಂಕ್
ವಿದ್ಯಾರ್ಥಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.