ಬಾಗಲಕೋಟೆ: ರಾಜ್ಯದ ಬಹುತೇಕ ನದಿಗಳು ಕುಡಿಯುವ ನೀರಿನ ಜಲಮೂಲಗಳಾಗಿವೆ. ಆದರೆ ಚರಂಡಿ ನೀರು, ಕಾರ್ಖಾನೆಗಳ ತ್ಯಾಜ್ಯ ನೀರು, ಪ್ಲಾಸ್ಟಿಕ್, ಹೂವಿನ ಹಾರ ಸೇರಿ ವಿವಿಧ ತ್ಯಾಜ್ಯಗಳು ನದಿಯ ಒಡಲನ್ನು ಸೇರುತ್ತಿವೆ.
ಮಾಂಜರಿ, ಯಡೂರ, ಇಂಗಳಿ, ಬಾಗಲಕೋಟೆ ಸೇರಿದಂತೆ ನದಿ ದಂಡೆಯ ಬಹುತೇಕ ಗ್ರಾಮ, ಪಟ್ಟಣಗಳ ಚರಂಡಿ ನೀರುಕೃಷ್ಣಾ ನದಿ ಒಡಲನ್ನು ಸೇರುತ್ತಿದೆ. ಚರಂಡಿ ನೀರನ್ನು ತಡೆಯುವ ಕೆಲಸ ಪರಿಣಾಮಕಾರಿಯಾಗಿ ಆಗುತ್ತಿಲ್ಲ.
ಕೃಷ್ಣಾ ನದಿಯಷ್ಟೇ ಅಲ್ಲ, ಮಲಪ್ರಭಾ, ಘಟಪ್ರಭಾ, ಕಾವೇರಿ, ಭೀಮಾ, ಕಾವೇರಿ, ಬೆಣ್ಣೆತೊರೆ, ಕಾಮಿನಿ ಸೇರಿದಂತೆ ಬಹುತೇಕ ನದಿಗಳ ಸ್ಥಿತಿಯಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ನದಿ ದಡದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಂದಲೂ ತ್ಯಾಜ್ಯ ನೀರಿನಲ್ಲಿ ಸೇರುತ್ತಿದೆ.
ಹುಬ್ಬಳ್ಳಿಯ ಉಣಕಲ್, ತೋಳನಕೆರೆ, ಬೆಳಗಾವಿಯ ಕೋಟೆ ಕೆರೆ ಸೇರಿದಂತೆ ನಗರ ವ್ಯಾಪ್ತಿಯಲ್ಲಿನ ಕೆರೆಗಳಿಗೂ ಚರಂಡಿ ನೀರು ಸೇರುತ್ತಲೇ ಇದೆ. ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಬಹುತೇಕ ಕೆರೆಗಳು ಇದೇ ರೀತಿ ಮಲಿನಗೊಳ್ಳುತ್ತಿವೆ.
ಪಡುಬಿದ್ರಿ ಸಮೀಪದ ಕಾಮಿನಿ ನದಿಯ ನೀರು ಕಲುಷಿತಗೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಸತ್ತವು. ನದಿಯನೀರು ಕಪ್ಪು ಬಣ್ಣಕ್ಕೆ ತಿರುಗಿತು. ಎಚ್.ಡಿ.ಕೋಟೆ ಪಟ್ಟಣದ ಕಸಾಯಿಖಾನೆ ತ್ಯಾಜ್ಯವನ್ನು ಹೆಬ್ಬಾಳದ ಜಲಾಶಯಕ್ಕೆ ಸುರಿಯಲಾಗುತ್ತದೆ.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ರಾಜ್ಯದ ಬಹುತೇಕ ಗ್ರಾಮಗಳಿಗೆ ನದಿ ನೀರನ್ನು ಪೂರೈಸಲಾಗುತ್ತದೆ. ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ, ನಿರ್ವಹಣೆಯ ಕೊರತೆಯಿಂದ ಅವು ಪಾಳು ಬಿದ್ದಿವೆ. ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ. ಆದರೆ, ಶುದ್ಧ ನೀರು ಸಿಗುವುದೆಂಬ ಖಾತ್ರಿ ಇಲ್ಲ.