ಹೊರೆ ಹೆಚ್ಚಿಸಿದ ‘ಜಿಎಸ್ಟಿ’
ನೌಕರರು ಪ್ರತಿ ವರ್ಷ ತಮ್ಮ ಆದಾಯ ತೆರಿಗೆ ಪಾವತಿಸುತ್ತಾರೆ. ಆದರೆ, ಸಣ್ಣಪುಟ್ಟ ಉಳಿತಾಯಗಳಿಗೂ ಜಿಎಸ್ಟಿ ಕಟ್ಟುವ ಕೆಟ್ಟ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ದುಡಿಯುವ ಹಣ ಉಳಿತಾಯಕ್ಕಿಂತ ಹೆಚ್ಚಿನ ಪಾಲುತೆರಿಗೆ ಪಾವತಿಗೆ ಹೋಗುತ್ತದೆ. ಮಧ್ಯಮ ವರ್ಗದವರಿಗೆ ಜಿಎಸ್ಟಿ ಹೊರೆಯಾಗಿದೆ.
ಕುಪೇಂದ್ರ ವಠಾರ್, ಯಾದಗಿರಿ
ದೇಶಕ್ಕೆ ಸವಾಲು
ಅಭಿವೃದ್ಧಿ ರಾಷ್ಟ್ರಗಳಲ್ಲಿ ಜಿಎಸ್ಟಿ ವ್ಯವಸ್ಥೆ ಯಶಸ್ಸು ಕಾಣುತ್ತದೆ. ಆದರೆ, ಅಭಿವೃದ್ಧಿಶೀಲ ದೇಶವಾದ ಭಾರತದಲ್ಲಿ ಇದು ಸವಾಲಾಗಿದೆ. ತೆರಿಗೆ ಹಣ ಭ್ರಷ್ಟರ ಕೈಯಲ್ಲಿ ಬಂಧಿಯಾಗಿದ್ದು,ಜನರ ಶ್ರಮದ ಹಣ ಅವರ ಬಳಿ ಉಳಿಯುತ್ತಿಲ್ಲ.
ಶ್ವೇತಾ, ಜ್ಞಾನಭಾರತಿ
ಜನರಲ್ಲಿ ಗೊಂದಲ
ಸಾರ್ವಜನಿಕರು ಪಾವತಿಸುವ ತೆರಿಗೆ ಹಣ ದೇಶದ ಆರ್ಥಿಕತೆಯ ಭವಿಷ್ಯ ನಿರ್ಧರಿಸುತ್ತದೆ. ಜಿಎಸ್ಟಿ ಬಗ್ಗೆ ಜನರಲ್ಲಿ ಗೊಂದಲವಿದೆ. ತಾವು ಪಾವತಿಸುವ ತೆರಿಗೆ ಹಣದ ಬಗ್ಗೆ ಪೂರ್ಣ ಮಾಹಿತಿ ಇರುವುದಿಲ್ಲ. ಮೊದಲು ಜಿಎಸ್ಟಿ ಬಗೆಗಿನ ಗೊಂದಲಗಳು ಪರಿಹಾರವಾಗಲಿ.
ನೇತ್ರಾವತಿ, ತುಮಕೂರು
ತ್ರಿಶಂಕು ಸ್ಥಿತಿಯಲ್ಲಿ ಜಿಎಸ್ಟಿ
ಮಧ್ಯಮ ವರ್ಗದವರ ಪಾಲಿಗೆ ಜಿಎಸ್ಟಿ ತ್ರಿಶಂಕು ಸ್ವರ್ಗದಂತಾಗಿದೆ. ದೊಡ್ಡ ಉದ್ಯಮಿಗಳು ತೆರಿಗೆ ಪಾವತಿಸದೆ ನಿರಾತಂಕವಾಗಿದ್ದಾರೆ. ಈ ಏರಿಳಿತದಿಂದ ದೇಶಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಎಲ್ಲರೂ ಕಟ್ಟುನಿಟ್ಟಾಗಿ ತೆರಿಗೆ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು.
ಮಧುಸೂದನ್, ದಾವಣಗೆರೆ
ಜಾರಿ ಮುನ್ನ ಗ್ರಹಿಸಬೇಕಿತ್ತು
ತೆರಿಗೆ ನೀತಿ ಜಾರಿಗೊಳಿಸಿ ಸರ್ಕಾರ ಕೈತೊಳೆದುಕೊಂಡಿದೆ. ಆದರೆ, ಯೋಜನೆ ದುರುಪಯೋಗ ಆಗುವ ಬಗ್ಗೆ ಗ್ರಹಿಸುವಲ್ಲಿ ಎಡವಿದೆ. ಗ್ರಾಹಕರಿಗೆ ಜಿಎಸ್ಟಿ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ವ್ಯಾಪಾರಿಗಳು ಗ್ರಾಹಕರಿಗೆ ಬಿಲ್ ನೀಡದೆ ತೆರಿಗೆ ವಂಚನೆ ಮಾಡುತ್ತಾರೆ.
–ಪುನೀತ್, ಮೈಸೂರು
ಅಭಿವೃದ್ಧಿಗೂ ಹಿನ್ನಡೆ
ಪ್ರತಿಯೊಬ್ಬರೂ ಸಕಾಲದಲ್ಲಿ ತೆರಿಗೆ ಹಣ ಪಾವತಿಸಿದರೆ, ಸರ್ಕಾರಕ್ಕೆ ಹೆಚ್ಚಿನ ಹಣ ಸಂಗ್ರಹವಾಗುತ್ತದೆ. ಪಾವತಿದಾರರಿಗಿಂತ ವಂಚಕರ ಪ್ರಮಾಣ ಹೆಚ್ಚಾಗಿದ್ದು, ತೆರಿಗೆ ಸಂಗ್ರಹದಲ್ಲಿ ಕುಸಿತ ಕಾಣುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ವಿಳಂಬವಾಗಲಿದೆ.
ಚನ್ನಬಸಪ್ಪ, ಬಳ್ಳಾರಿ
ವಂಚಕರಿಗೆ ಸೌಲಭ್ಯಗಳು ಬೇಡ
ತೆರಿಗೆ ಪಾವತಿಸಿದವರಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ಸಿಗಬೇಕು. ತೆರಿಗೆ ಪಾವತಿ ಮಾಡದೆ ಇರುವವರಿಗೆ ಯಾವುದೇ ಮೂಲ ಸೌಲಭ್ಯಗಳನ್ನು ನೀಡಬಾರದು. ತೆರಿಗೆ ನೀತಿ ಮತ್ತಷ್ಟು ಬಿಗಿಯಾಗಲಿ. ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕಠಿಣ ಕಾನೂನು ಜಾರಿಯಾಗಲಿ.
ದಿವ್ಯಾ, ಬೆಂಗಳೂರು
ನೀತಿ ಪೂರ್ಣ ಜಾರಿಯಾಗಲಿ
ಜಿಎಸ್ಟಿ ಜಾರಿಯಾಗಿ ಎರಡು ವರ್ಷ ಕಳೆದರೂ ಪೂರ್ಣ ಪ್ರಮಾಣದಲ್ಲಿ ತೆರಿಗೆ ಪಾವತಿಯಾಗುತ್ತಿಲ್ಲ. ಸುಳ್ಳು ದಾಖಲೆಗಳ ಮೂಲಕ ಖಾಸಗಿ ಸಂಸ್ಥೆಗಳು ಹಾಗೂವ್ಯಾಪಾರಿಗಳು ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಸಮರ್ಪಕವಾಗಿ ಜಾರಿಯಾದರೆ ದೇಶ ಭ್ರಷ್ಟಾಚಾರ ಮುಕ್ತ ಆಗಲಿದೆ.
–ಪ್ರೀತಿ, ಬೀದರ್
ತೆರಿಗೆ ವಂಚನೆಗೆ ಅಡ್ಡದಾರಿ
ಜಿಎಸ್ಟಿ ಸಮರ್ಪಕವಾಗಿ ಅನುಷ್ಠಾನ ಆಗದ ಕಾರಣ, ತೆರಿಗೆದಾರರು ಅಧಿಕಾರಿಗಳಿಗೆ ಮಣ್ಣೆರಚುತ್ತಿದ್ದಾರೆ. ಇದು ದೇಶದ ಆರ್ಥಿಕತೆಗೆ ದೊಡ್ಡ ಮಟ್ಟದ ಪೆಟ್ಟು ನೀಡಲಿದೆ.ಜಿಎಸ್ಟಿ ಪಾವತಿಯಿಂದ ತಪ್ಪಿಸಿಕೊಳ್ಳಲುಅಡ್ಡದಾರಿಗಳನ್ನು ಕಂಡುಕೊಂಡಿದ್ದಾರೆ.
ರವಿಕುಮಾರ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.