‘ಹಳೇ ಮೈಸೂರಿಗೆ ಅನ್ಯಾಯ’ ಚನ್ನಪಟ್ಟಣ, ಏ. 12– ರಾಜ್ಯವನ್ನು ಹಳೇ ಮೈಸೂರು ಮತ್ತು ಹೊಸದಾಗಿ ವಿಲೀನವಾದ ಪ್ರದೇಶವೆಂದು ಎರಡಾಗಿ ವಿಭಾಗಿಸಲು ವಿರೋಧ ಪಕ್ಷದ ಕೆಲವು ಶಾಸಕರು ಇಂದು ಇಲ್ಲಿ ಕರೆಯಿತ್ತರು.
ಚನ್ನಪಟ್ಟಣ ತಾಲ್ಲೂಕು ರಾಜಕೀಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ವಿರೋಧ ಪಕ್ಷದ ಸಚೇತಕ ಶ್ರೀ ಎನ್. ಹುಚ್ಚಮಾಸ್ತಿಗೌಡ ಮತ್ತು ಎಸ್. ಗೋಪಾಲಗೌಡ ಅವರು ಹಳೆ ಮೈಸೂರಿನ ಬಗ್ಗೆ ಕಾಂಗ್ರೆಸ್ ನ್ಯಾಯವಾಗಿ ನಡೆದುಕೊಂಡಿ ಲ್ಲವೆಂದು ಆಪಾದಿಸಿದರು.
ಜನಮತಗಣನೆಗೆ ಮೈಸೂರು ಒಪ್ಪದು ಎಂದು ವೀರೇಂದ್ರ ಪಾಟೀಲ್ ಬೆಂಗಳೂರು, ಏ. 12– ‘ಮಹಾರಾಷ್ಟ್ರದೊಡನಿರುವ ಗಡಿ ಪ್ರಶ್ನೆಯ ಇತ್ಯರ್ಥಕ್ಕೆ ಜನಮತಗಣನೆಯ ಪರಿಹಾರವನ್ನು ಮೈಸೂರು ಎಂದಿಗೂ ಒಪ್ಪದು’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದರು.
ಈಚಿನ ತಿಂಗಳುಗಳಲ್ಲಿ ದೆಹಲಿಯಲ್ಲಿ ಪ್ರಧಾನಿ ಮತ್ತು ಉಪ ಪ್ರಧಾನಿಯವರೊಡನೆ ತಾವು ನಡೆಸಿದ ಮಾತುಕತೆಗಳ ವೇಳೆ ಜನಮತಗಣನೆಯ ಬಗ್ಗೆ ಯಾವುದೇ ಸೂಚನೆ ವ್ಯಕ್ತವಾಗಿರಲಿಲ್ಲ ಎಂದರು.
ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಪರಿಹಾರಕ್ಕೆ ಜನಮತಗಣನೆಯ ಸಲಹೆಯೂ ಪರಿಶೀಲನೆಯಲ್ಲಿದೆ ಎಂಬ ಕೇಂದ್ರ ಗೃಹಶಾಖೆಯ ಸ್ಟೇಟ್ ಸಚಿವ ವಿ.ಸಿ. ಶುಕ್ಲಾ ಅವರು ನಿನ್ನೆ ಲೋಕಸಭೆಯಲ್ಲಿ ನೀಡಿದ ಹೇಳಿಕೆಯ ಬಗ್ಗೆ ವರದಿಗಾರರು ಗಮನ ಸೆಳೆದಾಗ ಶ್ರೀ ವೀರೇಂದ್ರ ಪಾಟೀಲರು ಈ ರೀತಿ ಹೇಳಿದರು.