ಹೊಸ ಕೈಗಾರಿಕೆಗಳಿಗೆ ಎಲ್ಲ ರಿಯಾಯಿತಿ; ರಾಜ್ಯ ಸರ್ಕಾರದ ನಿರ್ಧಾರ ಬೆಂಗಳೂರು, ಜೂನ್ 11– ರಾಜ್ಯದಲ್ಲಿ ಸ್ಥಾಪನೆಯಾಗಲಿರುವ ಹೊಸ ಕೈಗಾರಿಕೆಗಳಿಗೆ ಮಾರಾಟ ತೆರಿಗೆ, ಆಕ್ಟ್ರಾಯಿ, ವಿದ್ಯುತ್ತು, ಭೂಮಿ ಮತ್ತಿತರ ರೂಪಗಳಲ್ಲಿ ರಿಯಾಯಿತಿ ನೀಡುವ ನೀತಿಯನ್ನು ಸರ್ಕಾರ ನಿರ್ದಿಷ್ಟ ಕ್ರಮಗಳಲ್ಲಿ ಸ್ಪಷ್ಟಗೊಳಿಸಿದೆ.
ಕಳೆದ 2–3 ವರ್ಷಗಳಿಂದ, ಹೊಸ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಕೆಲವೊಂದು ರಿಯಾಯಿತಿಗಳನ್ನು ಕೊಡುತ್ತಿದೆಯಾದರೂ, ಇವುಗಳನ್ನು ನಿರ್ದಿಷ್ಟ ಆದೇಶಗಳ ರೂಪದಲ್ಲಿ ಕ್ರೋಡೀಕರಿಸುವ ಬಗ್ಗೆ ಮಂತ್ರಿಮಂಡಲ ಇಂದು ಕೈಗೊಂಡ ನಿರ್ಧಾರ, ಈ ರಿಯಾಯಿತಿಗಳಿಗೆ ಒಂದು ಸ್ಪಷ್ಟ ಸ್ವರೂಪ ನೀಡಿದೆ.
ಬಿತ್ತನೆ ಬೀಜ ಉತ್ಪಾದನೆಗೆ ಸಾಲ ವಾಷಿಂಗ್ಟನ್, ಜೂನ್ 11– ಭಾರತದಲ್ಲಿ ಅಧಿಕ ಇಳುವರಿ ಕೊಡುವ ಶಕ್ತಿಮಾನ್ ಬಿತ್ತನೆ ಬೀಜಗಳ ಉತ್ಪಾದನೆ ಯೋಜನೆಗೆ ಒಂದು ಕೋಟಿ 30 ಲಕ್ಷ ಡಾಲರುಗಳ ಸಾಲ ನೀಡಿಕೆಯನ್ನು ವಿಶ್ವಬ್ಯಾಂಕ್ ಇಂದು ಪ್ರಕಟಿಸಿತು.
ಐದು ವರ್ಷದ ಯೋಜನೆ ಪೂರ್ಣವಾದಾಗ ವಾರ್ಷಿಕವಾಗಿ 70 ಲಕ್ಷ ಎಕರೆ ಜಮೀನಿಗೆ ಸಾಕಾಗುವಷ್ಟು ಶಕ್ತಿಮಾನ್ ಬಿತ್ತನೆ ಬೀಜವನ್ನು ಉತ್ಪಾದಿಸುವುದು.
ಆಹಾರಧಾನ್ಯ ಉತ್ಪಾದನೆಗಾಗಿ ವಿಶ್ವಬ್ಯಾಂಕ್ ಕೊಡುತ್ತಿರುವ ಪ್ರಪ್ರಥಮ ಸಾಲ ಇದಾಗಿದ್ದು, ಭಾರತದ ಹಸಿರು ಕ್ರಾಂತಿಯ ನೆರವಿಗೆ ಬ್ಯಾಂಕಿನ ಪ್ರಮುಖ ಕ್ರಮವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮೆಕ್ನಮಾರ ವಿವರಿಸಿದ್ದಾರೆ.