ನಗರದಲ್ಲಿ ಕರುಣಾನಿಧಿ ಸಭೆ ನಂತರ ಭಾರಿ ನೂಕು ನುಗ್ಗಲು: 28 ಜನಕ್ಕೆ ಗಾಯ ಬೆಂಗಳೂರು, ಅ. 11– ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ಕರುಣಾನಿಧಿ ಅವರು ಭಾಷಣ ಮಾಡಿದ, ಶಿವಾಜಿನಗರ ಮೈದಾನದ ಮುಖ್ಯದ್ವಾರದ ಬಳಿ ಇಂದು ರಾತ್ರಿ ಸಂಭವಿಸಿದ ಭಾರಿ ನೂಕು ನುಗ್ಗಲಿನಲ್ಲಿ ಇಪ್ಪತ್ತೆಂಟು ಮಂದಿ ಗಾಯಗೊಂಡರು.
ಸಮೀಪದ ಬೌರಿಂಗ್ ಆಸ್ಪತ್ರೆಗೆ ಸೇರಿಸಲ್ಪಟ್ಟಿರುವ ಹದಿನೈದು ಮಂದಿ ಗಾಯಾಳುಗಳ ಪೈಕಿ ಐದಾರು ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಮಧ್ಯರಾತ್ರಿ ವರದಿಯಾಗಿದೆ.
ಭಾಷಣ ಮುಗಿಸಿಕೊಂಡು, ಮೈದಾನದಿಂದ ಕಾರಿನಲ್ಲಿ ಹೊರಗೆ ಹೊರಟ ಶ್ರೀ ಕರುಣಾನಿಧಿಯವರನ್ನು ಸಮೀಪದಿಂದ ನೋಡಲು ಜನರು ಧಾವಿಸಿ ಬಂದಾಗ ಈ ಘಟನೆ ಸಂಭವಿಸಿತು.
ಬಂದೋಬಸ್ತಿಗಾಗಿ ಬಂದಿದ್ದ ಪೊಲೀಸರು ತಕ್ಷಣ ಧಾವಿಸಿ, ಅಲೆ ಅಲೆಯಾಗಿ ಹೊರಗೋಡಿ ಬರುತ್ತಿದ್ದ ಜನರನ್ನು ತಡೆಯದೇ ಹೋಗಿದ್ದರೆ, ಪರಿಸ್ಥಿತಿ ತುಂಬಾ ಗಂಭೀರವಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಹೇಮಾವತಿ ಯೋಜನೆ: ಅಧಿಕಾರಿಗಳ ಮಟ್ಟದ ಚರ್ಚೆಗೆ ಕರುಣಾನಿಧಿ ಒಪ್ಪಿಗೆ ಬೆಂಗಳೂರು, ಅ. 11– ಹೇಮಾವತಿ ನೀರಾವರಿ ಯೋಜನೆಯ ಸಂಬಂಧದಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಯಲೆಂಬ ಮೈಸೂರು ಮುಖ್ಯಮಂತ್ರಿಗಳ ಸೂಚನೆಗೆ ತಮ್ಮ ಅಭ್ಯಂತರವೇನಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ. ಕರುಣಾನಿಧಿ ಇಂದು ಇಲ್ಲಿ ತಿಳಿಸಿದರು.