<p>ಕೊಡಗಿನ ದುಬಾರೆ ಆನೆ ಶಿಬಿರದಲ್ಲಿನ ದುರಂತವು ಪ್ರವಾಸಿಗರ ಸುರಕ್ಷತೆ ಕುರಿತಂತೆ ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ. ಆದರೆ, ಕಾಲಿಗೆ ಕಬ್ಬಿಣದ ದೊಡ್ಡ ಸರಪಳಿಯನ್ನು ಬಿಗಿಸಿಕೊಂಡು ಇಡೀ ಜೀವಿತಾವಧಿಯನ್ನು ಒಂದೇ ಸ್ಥಳದಲ್ಲಿ ಸವೆಸುವ ಸಾಕಾನೆಗಳ ದೂರು ದುಮ್ಮಾನಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ.</p>.<p>ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುವ ಅವುಗಳನ್ನು ಕುಟುಂಬಗಳಿಂದ ಬೇರ್ಪಡಿಸಿ ಮನರಂಜನೆಯ ಸರಕುಗಳಾಗಿ ಬಳಸುವುದು ನೈತಿಕ ಅಪರಾಧವಲ್ಲವೆ? ಆನೆಗಳನ್ನು ಸೆರೆಹಿಡಿದು ಪಳಗಿಸಿ ನಮ್ಮ ಅಧೀನದಲ್ಲಿ ಇರಬೇಕೆಂದು ಬಯಸುವುದು ಮನುಷ್ಯನ ಅಹಂಕಾರ ಅಲ್ಲವೆ?</p>.<p>ಮಾನವನಂತೆಯೇ ಆನೆಯೂ ಸಾಮಾಜಿಕ ಜೀವಿ. ಅವುಗಳದು ಮಹಿಳಾಪ್ರಧಾನ ಕೌಟುಂಬಿಕ ವ್ಯವಸ್ಥೆ. ಹಿರಿಯ ಹೆಣ್ಣಾನೆಯೇ ಗುಂಪಿನ ಅಧಿನಾಯಕಿ. ಸೋದರಿ ಮತ್ತು ಮಕ್ಕಳೇ ಆಕೆಯ ಕುಟುಂಬ. ಚಿಕ್ಕಮ್ಮ ಆನೆಯದು ಮರಿಗಳ ಪಾಲನೆ ಕೆಲಸ; ಮರಿಗಳಿಗೆ ಕಾಡಿನ ಕಾಗುಣಿತ ಹೇಳಿಕೊಡುವುದು ಅದೇ. ಆ ಪಾಠವೇ ಅವುಗಳ ಭವಿಷ್ಯತ್ತಿಗೆ ಜೀವಾಳ. ಹಲವು ಸೋದರ ಸಂಬಂಧಿಗಳು ಸೇರಿ ಆನೆಯ ಒಂದು ಕುಲವಾಗುತ್ತದೆ. ಆ ಗುಂಪಿನಲ್ಲಿ 60ರಿಂದ 90 ಆನೆಗಳಿರುತ್ತವೆ. ವರ್ಷವೊಂದರಲ್ಲಿ ಆ ಗುಂಪು ಕಾಡಿನಲ್ಲಿ ಒಂದು ಸಾವಿರ ಚದರ ಕಿ.ಮೀ.ನಷ್ಟು ಚಲಿಸುತ್ತದೆ. ಆದರೆ, ಎಂದಿಗೂ ದಾರಿ ತಪ್ಪುವುದಿಲ್ಲ; ಅವು ಮುತ್ತಜ್ಜಿಯಿಂದ ಪಡೆದ ಜ್ಞಾನದ ಬಳುವಳಿ ಇದು.</p>.<p>ಬೇಸಿಗೆಯಲ್ಲಿ ಒಣಗಿ ನಿಂತ ಉದ್ದನೆಯ ಹುಲ್ಲು ಎಲ್ಲಿದೆ (ಎಲಿಫೆಂಟ್ ಗ್ರಾಸ್), ಯಾವ ಭಾಗದಲ್ಲಿ ಸೀಗೆಮುಳ್ಳು ಚಿಗುರೊಡೆದಿದೆ, ಉಪ್ಪಿನ ಅಂಶದ ಮಣ್ಣು ಯಾವ ಮೂಲೆಯಲ್ಲಿದೆ, ಕೆರೆಗಳು ಬತ್ತಿದಾಗ ಕಾಡಿನಲ್ಲಿ ಅಡಗಿರುವ ನೀರೆಲ್ಲಿದೆ; ಸಮೃದ್ಧವಾಗಿ ಬೆಳೆದುನಿಂತ ಬಿದಿರು ಮೆಳೆ ಎಲ್ಲಿದೆ? ಇದೆಲ್ಲ ಜ್ಞಾನ ಅಜ್ಜಿಯಿಂದ ತಾಯಿಗೆ, ತಾಯಿ<br>ಯಿಂದ ಮರಿಗಳಿಗೆ ಹರಿಯುತ್ತಿರುತ್ತದೆ. ಗಂಡಾನೆಗಳಿಗೆ ಕುಟುಂಬದ ರೀತಿ ರಿವಾಜುಗಳೆಂದರೆ ಅಪಥ್ಯ. ಹತ್ತು ವರ್ಷಕ್ಕೆ ಕಾಲಿಡುವ ವೇಳೆಗೆ ಅವು ಕುಟುಂಬದ ಬಂಧವನ್ನು ಕಳಚಿಕೊಳ್ಳುತ್ತವೆ; ಗುಂಪಿನಿಂದ ದೂರ ಸರಿದು ತಮ್ಮದೇ ಹಾದಿ ಹಿಡಿಯುತ್ತವೆ.</p>.<p>ಕಾಡಾನೆಗಳ ದೈನಂದಿನ ದಿನಚರಿಗೆ ಹೋಲಿಸಿದರೆ ಅರಣ್ಯ ಇಲಾಖೆಯ ಶಿಬಿರಗಳು, ದೇಗುಲಗಳು ಮತ್ತು ಮಠಗಳ ಸುಪರ್ದಿಯಲ್ಲಿರುವ ಸಾಕಾನೆಗಳ ದಿನಚರಿ ತದ್ವಿರು<br>ದ್ಧವಾದುದು. ಕಾಡಾನೆಯೊಂದು ಅರಣ್ಯದಲ್ಲಿ ದಿನವೊಂದಕ್ಕೆ 20ರಿಂದ 40 ಚ.ಕಿ.ಮೀ. ಚಲಿಸಿದರೆ, ಸಾಕಾನೆಯು ಒಂದರಿಂದ ಎರಡು ಕಿ.ಮೀ. ಸಂಚರಿಸುವುದೇ ಹೆಚ್ಚು. ಅವುಗಳಿಗೆ ಕಾಡಿನ ಭಾಷೆ ಅಪರಿಚಿತ. ಮಾವುತನೇ ಅವುಗಳ ಒಡನಾಡಿ. ಪೇಟೆ ಮಂದಿಯ ಇತಿಮಿತಿಗಳು ಎಂದಿಗೂ ಅವುಗಳಿಗೆ ಅರ್ಥವಾಗದು.</p>.<p>ಶಿಬಿರಗಳಲ್ಲಿರುವ ಆನೆಗಳಿಗೆ ಸ್ನಾನ ಮಾಡಿಸಿ, ಕಾಡಿನೊಳಗೆ ಮೇಯಲು ಬಿಡುವುದು ವಾಡಿಕೆ. ಆದರೆ, ಈ ಪದ್ಧತಿಯು ಅವುಗಳ ಏಕಾಂಗಿತನಕ್ಕೆ ಪರಿಹಾರವಾಗದು. ಮತ್ತೊಂದೆಡೆ ದೇಗುಲಗಳಲ್ಲಿರುವ ಆನೆಗಳ ಏಕಾಂಗಿ ಬಾಳು–ನೋವು ಯಾರಿಗೂ ತಿಳಿಯದು. ಅವುಗಳದ್ದು ಒಂದರ್ಥದಲ್ಲಿ ಗ್ರೀಕ್ನ ದುರಂತ ನಾಟಕಗಳ ಸ್ಥಿತಿ; ಮಾವುತ ಹೇಳಿದರೆ ಭಕ್ತರಿಗೆ ನಮಸ್ಕರಿಸುವುದು, ದೇವಾಲಯವನ್ನು ಸುತ್ತು ಹಾಕುವುದು, ಗಂಟೆ ಬಾರಿಸುವುದು, ಕಾಣಿಕೆ ಕೊಡುವ ಭಕ್ತರ ಕೊರಳಿಗೆ ಹೂವಿನ ಹಾರ ಹಾಕುವುದು, ಅವರು ನೀಡಿದ ಹಣ್ಣುಹಂಪಲು ಮೆಲ್ಲುತ್ತಾ, ಮಾವುತನ ಆದೇಶಗಳನ್ನು ಪಾಲಿಸುವುದಷ್ಟೆ ಅವುಗಳ ಕಾಯಕ. ಸ್ವಚ್ಛಂದದ ಬದುಕೆಂಬುದು ಅವುಗಳ ಪಾಲಿಗೆ ಮರೀಚಿಕೆ.</p>.<p>ಆನೆಗಳು ಶಿಬಿರದಲ್ಲಿರಲಿ ಅಥವಾ ದೇವಸ್ಥಾನದಲ್ಲಿರಲಿ ಅವು ವನ್ಯಜೀವಿಗಳೇ. ಏಕಾಂಗಿಯಾಗಿದ್ದಾಗ ಅಥವಾ ಗುಂಪಿನಲ್ಲಿದ್ದಾಗಲೂ ಅವುಗಳ ಸ್ವಭಾವಸಿದ್ಧ ಗುಣ ಬದಲಾಗದು. ಅವುಗಳ ಮನಸ್ಸು ಒಂದೇ ತೆರನಾಗಿ ಇರುವುದಿಲ್ಲ; ಸ್ವಭಾವ, ವರ್ತನೆಯನ್ನು ಅಂದಾಜು ಮಾಡುವುದು ಕಷ್ಟ. </p>.<p>ಸೆರೆ ಹಿಡಿದ ಆನೆಗಳು, ಪ್ರವಾಸೋದ್ಯಮ ಚಟುವಟಿಕೆ ಮತ್ತು ಧಾರ್ಮಿಕ ಸಭೆ– ಸಮಾರಂಭಗಳಲ್ಲಿ ಬಳಸುವ ಸಾಕಾನೆಗಳು ಹೆಚ್ಚು ಮಾನಸಿಕ ಒತ್ತಡಕ್ಕೆ ಸಿಲುಕುತ್ತವೆ ಎಂದು ಹೈದರಾಬಾದ್ನ ಸಿಎಸ್ಐಆರ್ – ಜೀವಕೋಶ ಮತ್ತು ಆಣ್ವಿಕ ಜೀವವಿಜ್ಞಾನ ಕೇಂದ್ರದ (ಸಿಸಿಎಂಬಿ) ವಿಜ್ಞಾನಿಗಳು ನಡೆಸಿದ ಅಧ್ಯಯನ ಹೇಳಿದೆ. ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ವಾದ್ಯಮೇಳ, ಜನರ ಗದ್ದಲಕ್ಕೆ ಅವು ಬೆದರು<br>ತ್ತವೆ. ಈ ಸಂದರ್ಭದಲ್ಲಿ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ಗಳ ವ್ಯತ್ಯಾಸ ಅವುಗಳ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಅವುಗಳ ದಿಢೀರ್ ವರ್ತನೆಯು ಸಾರ್ವಜನಿಕ ಆಸ್ತಿ, ಜೀವಹಾನಿಗೆ ಕಾರಣ ಆಗುತ್ತದೆ. </p>.<p>ಕಾಡಿನಲ್ಲಿರುವ ಆನೆಗಳಿಗೆ ಹೋಲಿಸಿದರೆ ಸಾಕಾನೆಗಳು ಜೀವಿತಾವಧಿ ಮತ್ತು ಫಲವತ್ತತೆಯ ಸಮಸ್ಯೆ ಎದುರಿಸುತ್ತವೆ. ಇದರಿಂದ ದೇಹದಲ್ಲಾಗುವ ಬದಲಾವಣೆಯು ಅವುಗಳ ಪುಂಡಾಟಕ್ಕೂ ಕಾರಣವಾಗುತ್ತದೆ ಎಂದು ವನ್ಯಜೀವಿ ವಿಜ್ಞಾನಿಗಳು ಹೇಳುತ್ತಾರೆ. </p>.<p>ಆನೆಗಳ ಕಿವಿಗಳು ಅತ್ಯಂತ ಸೂಕ್ಷ್ಮ. ಭಕ್ತರು ದೇಗುಲಗಳಲ್ಲಿ ಬಾರಿಸುವ ಗಂಟೆನಾದ ಅವುಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಆನೆ ಶಿಬಿರಗಳಲ್ಲಿ ಜನರು ಕೇಕೆ ಹಾಕುತ್ತಾರೆ; ಚಪ್ಪಾಳೆ ತಟ್ಟುತ್ತಾರೆ. ಜನರ ಈ ವರ್ತನೆಯಿಂದ ಅವು ಕೆರಳುವ ಸಾಧ್ಯತೆ ಇರುತ್ತದೆ. ಜೀವವಿಕಾಸದ ಕುಲುಮೆಯಲ್ಲಿ ಅರಳಿ ಲಕ್ಷಾಂತರ ವರ್ಷ ಬಾಳಿದ ಆನೆಗಳನ್ನು ಜನರ ಹುಚ್ಚಾಟವು ಸಂಕಷ್ಟಕ್ಕೆ ಸಿಲುಕಿಸಿರುವುದು ಸ್ಪಷ್ಟ. ದುಬಾರೆಯ ದುರಂತ ಪ್ರವಾಸಿಗರ ಸುರಕ್ಷತೆಯ ಬಗ್ಗೆ ವ್ಯವಸ್ಥೆಯನ್ನು ಜಾಗೃತಿಗೊಳಿಸಿದರಷ್ಟೇ ಸಾಲದು; ಆನೆಗಳ ಮೇಲಿನ ಮನುಷ್ಯನ ಆಧಿಪತ್ಯದ ಚಟುವಟಿಕೆಗಳು ಈಗಲೂ ಅಗತ್ಯವೇ ಎನ್ನುವ ಅವಲೋಕನಕ್ಕೂ ಕಾರಣವಾಗಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಡಗಿನ ದುಬಾರೆ ಆನೆ ಶಿಬಿರದಲ್ಲಿನ ದುರಂತವು ಪ್ರವಾಸಿಗರ ಸುರಕ್ಷತೆ ಕುರಿತಂತೆ ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ. ಆದರೆ, ಕಾಲಿಗೆ ಕಬ್ಬಿಣದ ದೊಡ್ಡ ಸರಪಳಿಯನ್ನು ಬಿಗಿಸಿಕೊಂಡು ಇಡೀ ಜೀವಿತಾವಧಿಯನ್ನು ಒಂದೇ ಸ್ಥಳದಲ್ಲಿ ಸವೆಸುವ ಸಾಕಾನೆಗಳ ದೂರು ದುಮ್ಮಾನಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ.</p>.<p>ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುವ ಅವುಗಳನ್ನು ಕುಟುಂಬಗಳಿಂದ ಬೇರ್ಪಡಿಸಿ ಮನರಂಜನೆಯ ಸರಕುಗಳಾಗಿ ಬಳಸುವುದು ನೈತಿಕ ಅಪರಾಧವಲ್ಲವೆ? ಆನೆಗಳನ್ನು ಸೆರೆಹಿಡಿದು ಪಳಗಿಸಿ ನಮ್ಮ ಅಧೀನದಲ್ಲಿ ಇರಬೇಕೆಂದು ಬಯಸುವುದು ಮನುಷ್ಯನ ಅಹಂಕಾರ ಅಲ್ಲವೆ?</p>.<p>ಮಾನವನಂತೆಯೇ ಆನೆಯೂ ಸಾಮಾಜಿಕ ಜೀವಿ. ಅವುಗಳದು ಮಹಿಳಾಪ್ರಧಾನ ಕೌಟುಂಬಿಕ ವ್ಯವಸ್ಥೆ. ಹಿರಿಯ ಹೆಣ್ಣಾನೆಯೇ ಗುಂಪಿನ ಅಧಿನಾಯಕಿ. ಸೋದರಿ ಮತ್ತು ಮಕ್ಕಳೇ ಆಕೆಯ ಕುಟುಂಬ. ಚಿಕ್ಕಮ್ಮ ಆನೆಯದು ಮರಿಗಳ ಪಾಲನೆ ಕೆಲಸ; ಮರಿಗಳಿಗೆ ಕಾಡಿನ ಕಾಗುಣಿತ ಹೇಳಿಕೊಡುವುದು ಅದೇ. ಆ ಪಾಠವೇ ಅವುಗಳ ಭವಿಷ್ಯತ್ತಿಗೆ ಜೀವಾಳ. ಹಲವು ಸೋದರ ಸಂಬಂಧಿಗಳು ಸೇರಿ ಆನೆಯ ಒಂದು ಕುಲವಾಗುತ್ತದೆ. ಆ ಗುಂಪಿನಲ್ಲಿ 60ರಿಂದ 90 ಆನೆಗಳಿರುತ್ತವೆ. ವರ್ಷವೊಂದರಲ್ಲಿ ಆ ಗುಂಪು ಕಾಡಿನಲ್ಲಿ ಒಂದು ಸಾವಿರ ಚದರ ಕಿ.ಮೀ.ನಷ್ಟು ಚಲಿಸುತ್ತದೆ. ಆದರೆ, ಎಂದಿಗೂ ದಾರಿ ತಪ್ಪುವುದಿಲ್ಲ; ಅವು ಮುತ್ತಜ್ಜಿಯಿಂದ ಪಡೆದ ಜ್ಞಾನದ ಬಳುವಳಿ ಇದು.</p>.<p>ಬೇಸಿಗೆಯಲ್ಲಿ ಒಣಗಿ ನಿಂತ ಉದ್ದನೆಯ ಹುಲ್ಲು ಎಲ್ಲಿದೆ (ಎಲಿಫೆಂಟ್ ಗ್ರಾಸ್), ಯಾವ ಭಾಗದಲ್ಲಿ ಸೀಗೆಮುಳ್ಳು ಚಿಗುರೊಡೆದಿದೆ, ಉಪ್ಪಿನ ಅಂಶದ ಮಣ್ಣು ಯಾವ ಮೂಲೆಯಲ್ಲಿದೆ, ಕೆರೆಗಳು ಬತ್ತಿದಾಗ ಕಾಡಿನಲ್ಲಿ ಅಡಗಿರುವ ನೀರೆಲ್ಲಿದೆ; ಸಮೃದ್ಧವಾಗಿ ಬೆಳೆದುನಿಂತ ಬಿದಿರು ಮೆಳೆ ಎಲ್ಲಿದೆ? ಇದೆಲ್ಲ ಜ್ಞಾನ ಅಜ್ಜಿಯಿಂದ ತಾಯಿಗೆ, ತಾಯಿ<br>ಯಿಂದ ಮರಿಗಳಿಗೆ ಹರಿಯುತ್ತಿರುತ್ತದೆ. ಗಂಡಾನೆಗಳಿಗೆ ಕುಟುಂಬದ ರೀತಿ ರಿವಾಜುಗಳೆಂದರೆ ಅಪಥ್ಯ. ಹತ್ತು ವರ್ಷಕ್ಕೆ ಕಾಲಿಡುವ ವೇಳೆಗೆ ಅವು ಕುಟುಂಬದ ಬಂಧವನ್ನು ಕಳಚಿಕೊಳ್ಳುತ್ತವೆ; ಗುಂಪಿನಿಂದ ದೂರ ಸರಿದು ತಮ್ಮದೇ ಹಾದಿ ಹಿಡಿಯುತ್ತವೆ.</p>.<p>ಕಾಡಾನೆಗಳ ದೈನಂದಿನ ದಿನಚರಿಗೆ ಹೋಲಿಸಿದರೆ ಅರಣ್ಯ ಇಲಾಖೆಯ ಶಿಬಿರಗಳು, ದೇಗುಲಗಳು ಮತ್ತು ಮಠಗಳ ಸುಪರ್ದಿಯಲ್ಲಿರುವ ಸಾಕಾನೆಗಳ ದಿನಚರಿ ತದ್ವಿರು<br>ದ್ಧವಾದುದು. ಕಾಡಾನೆಯೊಂದು ಅರಣ್ಯದಲ್ಲಿ ದಿನವೊಂದಕ್ಕೆ 20ರಿಂದ 40 ಚ.ಕಿ.ಮೀ. ಚಲಿಸಿದರೆ, ಸಾಕಾನೆಯು ಒಂದರಿಂದ ಎರಡು ಕಿ.ಮೀ. ಸಂಚರಿಸುವುದೇ ಹೆಚ್ಚು. ಅವುಗಳಿಗೆ ಕಾಡಿನ ಭಾಷೆ ಅಪರಿಚಿತ. ಮಾವುತನೇ ಅವುಗಳ ಒಡನಾಡಿ. ಪೇಟೆ ಮಂದಿಯ ಇತಿಮಿತಿಗಳು ಎಂದಿಗೂ ಅವುಗಳಿಗೆ ಅರ್ಥವಾಗದು.</p>.<p>ಶಿಬಿರಗಳಲ್ಲಿರುವ ಆನೆಗಳಿಗೆ ಸ್ನಾನ ಮಾಡಿಸಿ, ಕಾಡಿನೊಳಗೆ ಮೇಯಲು ಬಿಡುವುದು ವಾಡಿಕೆ. ಆದರೆ, ಈ ಪದ್ಧತಿಯು ಅವುಗಳ ಏಕಾಂಗಿತನಕ್ಕೆ ಪರಿಹಾರವಾಗದು. ಮತ್ತೊಂದೆಡೆ ದೇಗುಲಗಳಲ್ಲಿರುವ ಆನೆಗಳ ಏಕಾಂಗಿ ಬಾಳು–ನೋವು ಯಾರಿಗೂ ತಿಳಿಯದು. ಅವುಗಳದ್ದು ಒಂದರ್ಥದಲ್ಲಿ ಗ್ರೀಕ್ನ ದುರಂತ ನಾಟಕಗಳ ಸ್ಥಿತಿ; ಮಾವುತ ಹೇಳಿದರೆ ಭಕ್ತರಿಗೆ ನಮಸ್ಕರಿಸುವುದು, ದೇವಾಲಯವನ್ನು ಸುತ್ತು ಹಾಕುವುದು, ಗಂಟೆ ಬಾರಿಸುವುದು, ಕಾಣಿಕೆ ಕೊಡುವ ಭಕ್ತರ ಕೊರಳಿಗೆ ಹೂವಿನ ಹಾರ ಹಾಕುವುದು, ಅವರು ನೀಡಿದ ಹಣ್ಣುಹಂಪಲು ಮೆಲ್ಲುತ್ತಾ, ಮಾವುತನ ಆದೇಶಗಳನ್ನು ಪಾಲಿಸುವುದಷ್ಟೆ ಅವುಗಳ ಕಾಯಕ. ಸ್ವಚ್ಛಂದದ ಬದುಕೆಂಬುದು ಅವುಗಳ ಪಾಲಿಗೆ ಮರೀಚಿಕೆ.</p>.<p>ಆನೆಗಳು ಶಿಬಿರದಲ್ಲಿರಲಿ ಅಥವಾ ದೇವಸ್ಥಾನದಲ್ಲಿರಲಿ ಅವು ವನ್ಯಜೀವಿಗಳೇ. ಏಕಾಂಗಿಯಾಗಿದ್ದಾಗ ಅಥವಾ ಗುಂಪಿನಲ್ಲಿದ್ದಾಗಲೂ ಅವುಗಳ ಸ್ವಭಾವಸಿದ್ಧ ಗುಣ ಬದಲಾಗದು. ಅವುಗಳ ಮನಸ್ಸು ಒಂದೇ ತೆರನಾಗಿ ಇರುವುದಿಲ್ಲ; ಸ್ವಭಾವ, ವರ್ತನೆಯನ್ನು ಅಂದಾಜು ಮಾಡುವುದು ಕಷ್ಟ. </p>.<p>ಸೆರೆ ಹಿಡಿದ ಆನೆಗಳು, ಪ್ರವಾಸೋದ್ಯಮ ಚಟುವಟಿಕೆ ಮತ್ತು ಧಾರ್ಮಿಕ ಸಭೆ– ಸಮಾರಂಭಗಳಲ್ಲಿ ಬಳಸುವ ಸಾಕಾನೆಗಳು ಹೆಚ್ಚು ಮಾನಸಿಕ ಒತ್ತಡಕ್ಕೆ ಸಿಲುಕುತ್ತವೆ ಎಂದು ಹೈದರಾಬಾದ್ನ ಸಿಎಸ್ಐಆರ್ – ಜೀವಕೋಶ ಮತ್ತು ಆಣ್ವಿಕ ಜೀವವಿಜ್ಞಾನ ಕೇಂದ್ರದ (ಸಿಸಿಎಂಬಿ) ವಿಜ್ಞಾನಿಗಳು ನಡೆಸಿದ ಅಧ್ಯಯನ ಹೇಳಿದೆ. ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ವಾದ್ಯಮೇಳ, ಜನರ ಗದ್ದಲಕ್ಕೆ ಅವು ಬೆದರು<br>ತ್ತವೆ. ಈ ಸಂದರ್ಭದಲ್ಲಿ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ಗಳ ವ್ಯತ್ಯಾಸ ಅವುಗಳ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಅವುಗಳ ದಿಢೀರ್ ವರ್ತನೆಯು ಸಾರ್ವಜನಿಕ ಆಸ್ತಿ, ಜೀವಹಾನಿಗೆ ಕಾರಣ ಆಗುತ್ತದೆ. </p>.<p>ಕಾಡಿನಲ್ಲಿರುವ ಆನೆಗಳಿಗೆ ಹೋಲಿಸಿದರೆ ಸಾಕಾನೆಗಳು ಜೀವಿತಾವಧಿ ಮತ್ತು ಫಲವತ್ತತೆಯ ಸಮಸ್ಯೆ ಎದುರಿಸುತ್ತವೆ. ಇದರಿಂದ ದೇಹದಲ್ಲಾಗುವ ಬದಲಾವಣೆಯು ಅವುಗಳ ಪುಂಡಾಟಕ್ಕೂ ಕಾರಣವಾಗುತ್ತದೆ ಎಂದು ವನ್ಯಜೀವಿ ವಿಜ್ಞಾನಿಗಳು ಹೇಳುತ್ತಾರೆ. </p>.<p>ಆನೆಗಳ ಕಿವಿಗಳು ಅತ್ಯಂತ ಸೂಕ್ಷ್ಮ. ಭಕ್ತರು ದೇಗುಲಗಳಲ್ಲಿ ಬಾರಿಸುವ ಗಂಟೆನಾದ ಅವುಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಆನೆ ಶಿಬಿರಗಳಲ್ಲಿ ಜನರು ಕೇಕೆ ಹಾಕುತ್ತಾರೆ; ಚಪ್ಪಾಳೆ ತಟ್ಟುತ್ತಾರೆ. ಜನರ ಈ ವರ್ತನೆಯಿಂದ ಅವು ಕೆರಳುವ ಸಾಧ್ಯತೆ ಇರುತ್ತದೆ. ಜೀವವಿಕಾಸದ ಕುಲುಮೆಯಲ್ಲಿ ಅರಳಿ ಲಕ್ಷಾಂತರ ವರ್ಷ ಬಾಳಿದ ಆನೆಗಳನ್ನು ಜನರ ಹುಚ್ಚಾಟವು ಸಂಕಷ್ಟಕ್ಕೆ ಸಿಲುಕಿಸಿರುವುದು ಸ್ಪಷ್ಟ. ದುಬಾರೆಯ ದುರಂತ ಪ್ರವಾಸಿಗರ ಸುರಕ್ಷತೆಯ ಬಗ್ಗೆ ವ್ಯವಸ್ಥೆಯನ್ನು ಜಾಗೃತಿಗೊಳಿಸಿದರಷ್ಟೇ ಸಾಲದು; ಆನೆಗಳ ಮೇಲಿನ ಮನುಷ್ಯನ ಆಧಿಪತ್ಯದ ಚಟುವಟಿಕೆಗಳು ಈಗಲೂ ಅಗತ್ಯವೇ ಎನ್ನುವ ಅವಲೋಕನಕ್ಕೂ ಕಾರಣವಾಗಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>