ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಂದಸ್ಸಿನಲ್ಲಿರುವ ಕಾವ್ಯ ಗಾಯನವೇ ಗಮಕ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗಮಕ/ ವ್ಯಾಖ್ಯಾನ ಕಲೆಯತ್ತ ಆಕರ್ಷಣೆ ಉಂಟಾಗಿದ್ದು ಹೇಗೆ?

ಮನೆಯಲ್ಲಿ ಮೊದಲಿನಿಂದಲೂ ಸಂಗೀತ, ಸಾಹಿತ್ಯಕ್ಕೆ ಸಮಾನ ಅವಕಾಶವಿತ್ತು. ತಂದೆ, ತಾಯಿ, ಅಣ್ಣಂದಿರು, ತಂಗಿಯರು ಎಲ್ಲರಿಗೂ ಕಾವ್ಯ, ನಾಟಕ, ಗಮಕ, ಗಾಯನದಲ್ಲಿ ಆಸಕ್ತಿ ಹೆಚ್ಚಾಗಿತ್ತು. ನಿತ್ಯ ಮನೆಯಲ್ಲಿ ರಾಮಾಯಣ, ಭಾಗವತ ಪಾರಾಯಣ ನಡೆಯುತ್ತಿದ್ದವು. ಹೆಣ್ಮಕ್ಕಳಿಗೆ ಸಂಗೀತ ಕಲಿಸಬೇಕು ಅನ್ನೋದು ಮನೆಯ ಸಂಪ್ರದಾಯ. ಹಾಗಾಗಿ ಅಕ್ಕಂದಿರಿಗೆಲ್ಲ ಮೇಷ್ಟ್ರು ಮನೆಗೆ ಬಂದು ಪಾಠ ಮಾಡ್ತಿದ್ರು. ಅದನ್ನ ಕೇಳಿ ಕೇಳಿನೆ ನಾನು ಸಂಗೀತದಲ್ಲಿ ತೊಡಗಿಸಿಕೊಂಡೆ, ಗಮಕದತ್ತ ಒಲವು ಮೂಡಿತು.
ಮನೆಯಲ್ಲಿ ಗಮಕ ವಾಚನ ಕಾರ್ಯಕ್ರಮಗಳು, ಪ್ರತಿ ತಿಂಗಳು ಕಾವ್ಯಗಳಿಗೆ ಸಂಬಂಧಿಸಿದಂತೆ ಸಹೃದಯ ಗೋಷ್ಠಿ, ವಿಚಾರ ವಿನಿಮಯ, ಭಾಗವತ ಪಾರಾಯಣ ಮತ್ತು ಚರ್ಚೆಗಳು ನಡೆಯುತ್ತಿದ್ದವು. ಈ ವಾತಾವರಣ ನನ್ನ ಮೇಲೆ ಅತೀವ ಪ್ರಭಾವ ಬೀರಿತು.

ಮತ್ತೂರು ಶಂಕರಮೂರ್ತಿಯವರು ನನ್ನ ಸಂಗೀತದ ಪ್ರಾಥಮಿಕ ಗುರುಗಳು. ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದ ಚನ್ನೈನ ಸುಗಂಧಾರಾಮ ಅವರು ನನ್ನ ಸಂಗೀತದ ಮುನ್ನಡೆಗೆ ಕಾರಣಿಭೂತರು. ವಿದ್ವತ್‍ನಲ್ಲಿ ರಾಜ್ಯಕ್ಕೆ 2 ನೇ ರ‍್ಯಾಂಕ್‌ ಪಡೆದಿದ್ದೆ.

ಮಲ್ಲೇಶ್ವರಂನ ‘ಗಾಂಧಿ ಸಾಹಿತ್ಯ ಸಂಘ’ಕ್ಕೆ ಜಿ.ಪಿ.ರಾಜರತ್ನಂ, ಸಿದ್ದುನಹಳ್ಳಿ ಕೃಷ್ಣಶರ್ಮಾ ಅವರಂತಹ ಹಿರಿಯ ಕವಿಗಳು ಬರುತ್ತಿದ್ದರು. ಆಗ ಪಂಡಿತ್ ಹೂಮಾರಾಮಾರಾಥರು ಗಮಕ ತರಗತಿ ನಡೆಸುತ್ತಿದ್ದರು. ನಾನು ಸೇರಿಕೊಂಡೆ, ಸಂಗೀತದ ಜತೆಜತೆಗೆ ಗಮಕ ಗಾಯನವನ್ನೂ ಕಲಿತೆ. ಗಮಕದಲ್ಲಿ ಗಮಕ ರೂಪಕವನ್ನು, ಪಾತ್ರಗಳ ರೂಪದಲ್ಲಿ, ವೇಷಧಾರಿಗಳಾಗದೆ ನಾಟಕೀಯ ರೂಪದಲ್ಲಿ ನವರಸಗಳಲ್ಲಿ ಹಾಡುವುದನ್ನು ಕಲಿಸಿದರು. ಸಾಹಿತ್ಯದ ಭಾವವನ್ನು ಅರಿತು, ರಾಗದ ಲಹರಿಯನ್ನು ಬಳಸಿಕೊಳ್ಳುವ ಮಟ್ಟಿಗೆ ಗಮಕ ಅಧ್ಯಯನ ನನಗೆ ಸಹಾಯಕಾರಿಯಾಯಿತು. 55 ವರ್ಷಗಳಿಂದ ಗಮಕದ ಒಡನಾಟದಲ್ಲಿದ್ದೀನಿ.

ಈ ಕಲೆಯ ವಿಶೇಷವೇನು?

ಕನ್ನಡದ ಛಂದಸ್ಸಿನಲ್ಲಿರುವ ಕಾವ್ಯ ಗಾಯನವೇ ಗಮಕ. ಸಂಗೀತ ರಾಗ, ತಾಳ, ಲಯ ಬದ್ಧವಾಗಿ ಹಾಡುವಂಥದ್ದು. ಆದ್ರೆ, ಗಮಕದಲ್ಲಿ ತಾಳ ಬದ್ಧತೆ ಇರುವುದಿಲ್ಲ. ಭರತೇಶ ವೈಭವ, ಭಾಮಿನಿ ಷಟ್ಪದಿ, ವಾರ್ಧಕ, ಚಂಪುಗಳಲ್ಲಿ ಸಾಹಿತ್ಯದ ಅರ್ಥಗೆಡಿಸದೆ, ಪದವಿಭಾಗ ಮಾಡಿ, ರಾಗ ಸಂಯೋಜಿಸಿ, ಹಾಡುವುದು ಈ ಕಲೆಯ ವಿಶಿಷ್ಟತೆ. ಇಲ್ಲಿ ಆವರ್ತ, ತಾಳದ ಚೌಕಟ್ಟು ಇರುವುದಿಲ್ಲ.

ಗಮಕ/ ವ್ಯಾಖ್ಯಾನ ಕ್ಷೇತ್ರದ ಸವಾಲುಗಳೇನು?

ಸಾಂಪ್ರದಾಯಿಕ ಶೈಲಿಯ ಭಾಮಿನಿ, ವಾರ್ಧಕ ಮತ್ತು ಚಂಪು ಷಟ್ಪದಿಗಳು ಪದ್ಯ ಮತ್ತು ಗದ್ಯದ ಮಿಶ್ರಣ ಆಗಿರುವುದರಿಂದ, ಪದ್ಯವನ್ನು ಸರಾಗವಾಗಿ ಎಳೆದೆಳೆದು ಹಾಡಬಹುದು ಆದರೆ, ಗದ್ಯವನ್ನು ಎಳೆದೆಳೆದು ಹಾಡಲು ಅವಕಾಶವಿಲ್ಲ. ಇಂತವನ್ನು ರಾಗ, ಶೃತಿ, ಭಾವವನ್ನು ಬಿಡದೆ ಹಾಡುವುದೆಂದರೆ ಗಮಕಿಗಳಿಗೆ ಇರುವ ನಿಜವಾದ ಸವಾಲು.

ಈ ಕಲೆಯ ಉಳಿವಿಗೆ ಏನು ಮಾಡಬೇಕು?

ಪ್ರಸ್ತುತ ಗಮಕವನ್ನು ಉಳಿಸಬೇಕೆಂದರೆ ಗಮಕ ಕಲಿಯಬೇಕು ಎನ್ನುವವರಲ್ಲಿ ಮೂಲತ: ಸಾಹಿತ್ಯ ಮತ್ತು ಸಂಗೀತದ ಜ್ಞಾನ ಅತ್ಯಗತ್ಯ. ಕನ್ನಡ ಶಾಲೆಗಳಲ್ಲಿ ಕಾವ್ಯ ಸಾಹಿತ್ಯದ ಪ್ರಮಾಣ ಕ್ಷೀಣಿಸುತ್ತಿದೆ. ಹಳೆಗನ್ನಡದ ಕಾವ್ಯಗಳೇ ಬೇಕಿಲ್ಲ ನಮಗೆ ಎನ್ನವ ಸ್ಥಿತಿಗೆ ಬಂದು ನಿಂತಿದ್ದೇವೆ. ಇದರಿಂದ ಕಾವ್ಯಗಳ ಅಸ್ತಿತ್ವ ಗೌಣವಾಗ್ತಿದೆ. ಹಾಗಾಗಿ ಕಾವ್ಯಾಭ್ಯಾಸ, ಭಾಷಾಜ್ಞಾನ ಹೆಚ್ಚಾಗಬೇಕು.

ಕನ್ನಡಿಗರ ಮನಸ್ಸಲ್ಲಿ ಈ ಭಾವನೆ ಬರಬೇಕು. ಅಂದಿನ ಕಾವ್ಯ ಸಾಹಿತ್ಯ ಇಂದಿಗೂ ಪ್ರಸ್ತುತ ಎನ್ನುವುದರ ಅರಿವು ನಮಗಾಗಬೇಕು. ಗಮಕ ಗಾಯನ ಮತ್ತು ವ್ಯಾಖ್ಯಾನ ಎರಡೂ ಅಷ್ಟೇ ಮುಖ್ಯ. ಆಗಾಗ ಗಮಕ ಗಾಯನ ಕಾರ್ಯಕ್ರಮಗಳನ್ನು ನಡೆಸಬೇಕು. ಗಮಕ ಗಾಯಕರಿಗೆ ಆರ್ಥಿಕವಾಗಿ ಸಹಾಯ ಆಗುವ ರೀತಿಯಲ್ಲಿ ಸರ್ಕಾರದ ಯೋಜನೆಗಳು ಜಾರಿ ಆದರೆ, ಪ್ರಾಶಸ್ತ್ಯ ದೊರೆತರೆ, ಕಲಿಯುವವರಲ್ಲೂ ಕಲಿಕೆಯ ಮೊಳಕೆಯೊಡೆಯಲು ಸಾಧ್ಯ. ಪ್ರದರ್ಶಕ ಕಲೆಗಳಿಗೆ ಇರುವ ಸ್ಥಾನಮಾನ ಗಮಕಕ್ಕೂ ಸಿಗಬೇಕು. ಅಂದಾಗ ಮಾತ್ರ ಗಮಕ ಮುನ್ನೆಲೆಗೆ ಬರಲು ಸಾಧ್ಯ.

ನಿಮ್ಮಿಷ್ಟದ ಗಮಕ ವ್ಯಾಖ್ಯಾನ ಯಾವುದು?

ನನಗೆ ಗಂಗಮ್ಮ ಕೃಷ್ಣಮೂರ್ತಿ, ಹೊಸಳ್ಳಿ ಕೇಶವ ಮೂರ್ತಿ, ಬಿಎಸ್‌ಎಸ್‌ ಕೌಶಿಕ, ರಾಘವೇಂದ್ರ ರಾಯರು,ಶಕುಂತಲ್ಮಮ ಪಾಂಡುರಂಗರಾಯರು ನನ್ನ ಮೆಚ್ಚಿನ ಗಮಕ ಗಾಯಕರು, ಅವರ ದಾರಿಯಲ್ಲೇ ನಡೆದು ಬಂದಿದ್ದೀನಿ.

ಕುಮಾರವ್ಯಾಸರ ಕಾವ್ಯ–

‘ಅರಸುಗಳಿಗಿದು ವೀರ

ದ್ವಿಜರಿಗೆ ಪರಮ ಬೇಧದ ಸಾರ

ಯೋಗಿಶ್ವರರ ತತ್ವ ವಿಚಾರ

ಮಂತ್ರಿ ಜನಕೆ ಬುದ್ಧಿ ಗುಣ

ವಿರಹಿಗಳ ಶೃಂಗಾರ

ವಿದ್ಯಾಪರಿಣತರ ಅಲಂಕಾರ’ ಎನ್ನುವ ಕಾವ್ಯ ನನಗೆ ತುಂಬ ಇಷ್ಟ. ಜತೆಗೆ ಲಕ್ಷ್ಮೀಶನ ಗಂಗಾನದಿ ವರ್ಣನೆ, ವಿಧುರ ನೀತಿಯ– ಕೋಪವೆಂಬುದು ಅನರ್ಥ ಸಾಧನಂ ಕಾವ್ಯ ಕೂಡ ಬಲು ಇಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT