ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು ಹಳೆಯದಾದರೂ ‘ಭಾವ’ ನವನವೀನ

ಹಳೆಯ ಮುಖಗಳಲ್ಲೇ ಹೊಸ ಕಳೆ ಹುಡುಕುತ್ತಿರುವ ಮತದಾರ, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮತ್ತು ಮಾಜಿ ಶಾಸಕ ಎಂ.ಸಿ.ಸುಧಾಕರ್ ನಡುವೆ ಭಾರಿ ಪೈಪೋಟಿ
Last Updated 7 ಮೇ 2018, 8:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಂತಾಮಣಿ ವಿಧಾನಸಭೆ ಕ್ಷೇತ್ರದ ಮತದಾರ ಪ್ರಸ್ತುತ ಚುನಾವಣೆಯಲ್ಲಿ ‘ಹಾಡು ಹಳೆಯದಾದರೇನು ಭಾವ ನವನವೀನ’ ಎಂಬ ಕವಿವಾಣಿ ಗುನುಗುತ್ತಿರುವಂತೆ ಭಾಸವಾಗುತ್ತಿದೆ. ಏಕೆಂದರೆ ಕಳೆದ ಮತ್ತು ಈ ಬಾರಿಯ ಸ್ಪರ್ಧಾ ಕಣದ ಪ್ರಬಲ ಹುರಿಯಾಳುಗಳ ಮುಖಗಳು ಬದಲಾಗಿಲ್ಲ.

ಶಾಸಕ ಜೆ.ಕೆ.ಕೃಷ್ಣಾರೆಡ್ಡಿ (ಜೆಡಿಎಸ್), ವಾಣಿ ಕೃಷ್ಣಾರೆಡ್ಡಿ (ಕಾಂಗ್ರೆಸ್), ಎನ್.ಶಂಕರಪ್ಪ (ಬಿಜೆಪಿ) ಮತ್ತು ಡಾ.ಎಂ.ಸಿ.ಸುಧಾಕರ್ (ಭಾರತೀಯ ಪ್ರಜಾ ಪಕ್ಷ) ಈ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು. ಇವರೊಂದಿಗೆ 18 ಅಭ್ಯರ್ಥಿಗಳು ‘ಅದೃಷ್ಟ’ ಪರೀಕ್ಷೆಗಿಳಿದಿದ್ದಾರೆ.

ಈ ಚುನಾವಣೆಯಲ್ಲಿ ಗೆಲುವಿಗಾಗಿ ಕೃಷ್ಣಾರೆಡ್ಡಿ ಮತ್ತು ಸುಧಾಕರ್ ನಡುವೆ ತೀವ್ರ ಪೈಪೋಟಿ ತಲೆದೋರಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಎದುರಾಳಿಗಳಲ್ಲಿ ನಡುಕ ಹುಟ್ಟಿಸುವಷ್ಟು ಸಾಮರ್ಥ್ಯ ಗಳಿಸಿಕೊಂಡಿಲ್ಲ.

ಕ್ಷೇತ್ರದ ‘ರಾಜಕೀಯ’ ಇತಿಹಾಸ ಅವಲೋಕಿಸಿದರೆ ಪಕ್ಷಗಳು ನಗಣ್ಯ ಎಂಬುದು ಇಲ್ಲಿ ಪಕ್ಷೇತರರಾಗಿ ನಿಂತು ಗೆಲುವಿನ ನಗೆ ಬೀರಿದವರ ಸಂಖ್ಯೆ ನೋಡಿದರೆ ಸಾಕು. 1952ರ ಮೊದಲ ವಿಧಾನಸಭೆ ಚುನಾವಣೆಯಿಂದ ಸತತ ಐದು ಚುನಾವಣೆಗಳು ಅಂದರೆ 1978ರ ವರೆಗೆ ಸುಮಾರು ಎರಡೂವರೆ ದಶಕಗಳ ಕಾಲ ಆರಂಭಿಕ ಕಾಲಘಟ್ಟದಲ್ಲಿ ಇಲ್ಲಿ ಆಳಿದವರೆಲ್ಲರೂ ಪಕ್ಷೇತರರೇ.

ಕೊನೆ ಮೊದಲಿಲ್ಲದ ‘ರೆಡ್ಡಿ’ ಕುಟುಂಬಗಳ ರಾಜಕೀಯ ಚದುರಂಗದ ದಾಳಕ್ಕೆ ಮಣೆಯಾಗುತ್ತ ಬಂದಿರುವ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳೆಲ್ಲರೂ ರೆಡ್ಡಿಗಳೇ. ಈವರೆಗೆ ನಡೆದ 14 ವಿಧಾನಸಭೆ ಚುನಾವಣೆಗಳ ಪೈಕಿ ಇಲ್ಲಿನ 13ನೇ ಚುನಾವಣೆಗಳಲ್ಲಿ ಎರಡು ರೆಡ್ಡಿ ಮನೆತನದವರ ನಡುವೆಯೇ ಜಿದ್ದಾಜಿದ್ದಿ ನಡೆದಿದೆ ಎನ್ನುವುದೇ ಈ ಕ್ಷೇತ್ರದ ವೈಶಿಷ್ಟ್ಯ.

ಸಾರ್ವತ್ರಿಕ ಚುನಾವಣೆ ಆರಂಭಗೊಂಡು ಸುಮಾರು ಎರಡು ದಶಕಗಳ ವರೆಗೆ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಸಿದ್ಧಾಂತಗಳ ಹೋರಾಟಕ್ಕೆ ಇಲ್ಲಿನ ನೆಲ ನೆಲೆಯಾಗಿತ್ತು. ಮೊದಲೆಲ್ಲ ಪಕ್ಷ ತತ್ವ, ಸಿದ್ಧಾಂತಗಳಿಗೆ ಮಣೆ ಹಾಕುತ್ತಿದ್ದ ಮತದಾರ ಬದಲಾದ ಕಾಲಘಟ್ಟದಲ್ಲಿ ವ್ಯಕ್ತಿ ಆಧಾರಿತ ರಾಜಕಾರಣಕ್ಕೆ ‘ಉಘೇ’ ಎನ್ನುತ್ತ ಬರುತ್ತಿರುವುದು ಸ್ಥಳೀಯ ರಾಜಕಾರಣಕ್ಕೆ ಹೊಸ ವ್ಯಾಕರಣ ರೂಪಿಸಿದೆ.

ಕಸಬಾ, ಮುರುಗಮಲ್ಲ, ಮುಂಗಾನಹಳ್ಳಿ, ಕೈವಾರ, ಅಂಬಾಜಿದುರ್ಗಾ ಹೋಬಳಿಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವು ಈ ಬಾರಿ ಹಳೆಯ ಮುಖಗಳಲ್ಲೇ ಹೆಚ್ಚು ಯಾರಿಗೆ ಒಲಿಯುತ್ತವೆ ಎಂದು ಕಾಯ್ದು ನೋಡಬೇಕಿದೆ.

ಕೆ.ಎಂ.ಕೃಷ್ಣಾರೆಡ್ಡಿ ಅವರ ನಿರ್ಗಮನದಿಂದ ಕ್ಷೇತ್ರದಲ್ಲಿ ಆವರಿಸಿಕೊಂಡಿದ್ದ ‘ಶೂನ್ಯ’ ತೊಡೆದು ತಗ್ಗಿದ ಜೆಡಿಎಸ್ ಪ್ರಾಬಲ್ಯವನ್ನು ಪುನಶ್ಚೇತನಗೊಳಿಸಿದ ಶಾಸಕ ಕೃಷ್ಣಾರೆಡ್ಡಿ ಅವರು ತನ್ನ ಎರಡನೇ ಸುತ್ತಿನ ಕುಸ್ತಿಯಲ್ಲಿ ಎದುರಾಳಿಗಳನ್ನು ಚಿತ್ ಮಾಡುವ ತಂತ್ರಗಳನ್ನು ಜೋರಾಗಿಯೇ ನಡೆಸಿದ್ದಾರೆ. ಅದು ಫಲ ನೀಡುತ್ತಾ? ಮತದಾರ ಹೇಳಬೇಕಷ್ಟೇ.

ಕ್ಷೇತ್ರದ ಹಿರಿಯ ರಾಜಕಾರಣಿ ಎಂ.ಸಿ.ಆಂಜನೇಯರೆಡ್ಡಿ ಅವರ ಕುಟುಂಬದ ಕುಡಿ ಡಾ.ಎಂ.ಸಿ.ಸುಧಾಕರ್ ಅವರು ‘ರಕ್ತಗತ’ವಾಗಿ ಬಂದ ರಾಜಕೀಯ ‘ಚತುರತೆ’ಯನ್ನು ಗೆಲುವಿಗಾಗಿ ಒರೆ ಹಚ್ಚಿದ್ದಾರೆ. ಬಹು ಹಿಂದಿನಿಂದಲೂ ಸಂಸದ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಹುಸಿ ಮುನಿಸು, ಶೀತಲ ಸಮರ, ಸೀಮಿತ ಅಂತರ ಕಾಯ್ದುಕೊಂಡು ಬರುತ್ತಿರುವ ಸುಧಾಕರ್ ಅವರಿಗೆ ಇದು ನಾಲ್ಕನೇ ಚುನಾವಣೆ. ಎರಡು ಬಾರಿ ಗೆದ್ದು ಅಧಿಕಾರ ಅನುಭವಿಸಿ, ಒಂದು ಬಾರಿ ಸೋಲಿನ ಪಾಠ ಕಲಿತಿರುವ ಸುಧಾಕರ್ ಕಳೆದ ಬಾರಿ ಮಾಡಿದ ಪ್ರಮಾದಗಳನ್ನು ಮೆಲುಕು ಹಾಕಿ, ಮತದಾರರ ಮನದಾಳ ಗೆಲ್ಲಲು ತಮ್ಮದೇ ಆದ ರಾಜಕೀಯ ತಂತ್ರಗಾರಿಕೆ ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್, ಬಿಜೆಪಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುನಿಯಪ್ಪ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುವಂತೆ ಸುಧಾಕರ್‌ ಅವರಿಗೆ ಹೇಳಿದರೂ ಅವರು ಒಪ್ಪದೆ ಪಕ್ಷೇತರರಾಗಿ ಸ್ಪರ್ಧಿಸಿ, ಅಲ್ಪ ಮತಗಳ ಅಂತರದಲ್ಲಿ ಸೋಲುಂಡಿದ್ದರು. ಈ ಬಾರಿ ಕೂಡ ಕಾಂಗ್ರೆಸ್‌ ಟಿಕೆಟ್ ನಯವಾಗಿ ನಿರಾಕರಿಸಿದ ಸುಧಾಕರ್ ಅವರು (ಭಾರತೀಯ ಪ್ರಜಾ ಪಕ್ಷ) ಚಿಕ್ಕ ಪಕ್ಷವೊಂದರ ಹುರಿಯಾಳು ಆಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಸಂಸದ ಮುನಿಯಪ್ಪ ಅವರು ಅನಿವಾರ್ಯವಾಗಿ ಜೆಡಿಎಸ್‌ನಲ್ಲಿದ್ದ ವಾಣಿ ಕೃಷ್ಣಾರೆಡ್ಡಿ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಹೆಸರಿಗೊಬ್ಬ ಅಭ್ಯರ್ಥಿಯನ್ನಾಗಿ ಮಾಡಿ ಕಣದಲ್ಲಿ ನಿಲ್ಲಿಸಿದರು. ಸುಧಾಕರ್ ಮೇಲಿನ ಸಿಟ್ಟಿಗೆ ಕೃಷ್ಣಾರೆಡ್ಡಿ ಅವರಿಗೆ ‘ಅನುಕೂಲ’ ಮಾಡಿಕೊಟ್ಟರು. ಫಲಿತಾಂಶ ಬಂದಾಗ ವಾಣಿ ಅವರು ಠೇವಣಿಯನ್ನೇ ಕಳೆದುಕೊಂಡಿದ್ದರು.

ಈ ‘ಹೊಂದಾಣಿಕೆ’ ರಾಜಕೀಯದಿಂದ ಬೇಸತ್ತು ಕೆಲ ವರ್ಷಗಳಿಂದ ಬಹುತೇಕ ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ ಮತ್ತು ಸುಧಾಕರ್‌ ಬಣಗಳಲ್ಲಿ ಹಂಚಿ ಹೋಗಿದ್ದಾರೆ. ಹೀಗಾಗಿ ಕಾಂಗ್ರೆಸ್ ವಿಚಾರದಲ್ಲಿ ಈ ಚಿತ್ರಣ ಕಳೆದ ಬಾರಿಗಿಂತಲೂ ಹೆಚ್ಚು ಬದಲಾಗುತ್ತದೆ ಎಂದು ಅನಿಸುವುದಿಲ್ಲ ಎನ್ನುತ್ತಾರೆ ಸ್ಥಳೀಯ ರಾಜಕಾರಣದ ಆಳ ಅಗಲ ಬಲ್ಲವರು.

ಇನ್ನು ಬಿಜೆಪಿಗಂತೂ ಜಿಲ್ಲೆಯ ಕೆಲ ಕ್ಷೇತ್ರಗಳಂತೆ ಇಲ್ಲಿಯೂ ನೆಲೆ ಇಲ್ಲ. ಸಂಘಟನೆ ಇದ್ದರೂ ರಾಜಕೀಯ ಸಂಘರ್ಷಕ್ಕಿಳಿಯುವ ಶಕ್ತಿಯಂತೂ ಇಲ್ಲವೇ ಇಲ್ಲ. ‘ಕಮಲ’ ಪಾಳೆಯ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವಂತಿದೆ. ಜತೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ತಲೆದೋರಿದ ಆಂತರಿಕ ಭಿನ್ನಮತ ಸ್ಫೋಟ ಪಕ್ಷಕ್ಕೆ ಮತ್ತಷ್ಟು ಹಿನ್ನಡೆ ಮಾಡಿದೆ.

ಗೆಲುವಿನ ಸಮೀಕರಣ

ಕೃಷ್ಣಾರೆಡ್ಡಿ ಮತ್ತು ಸುಧಾಕರ್ ಇಬ್ಬರೂ ಒಕ್ಕಲಿಗರು. ಹೀಗಾಗಿ ಜಾತಿಯನ್ನೂ ಮೀರಿ ಈ ನಾಯಕರು ಮತಗಳನ್ನು ಆಕರ್ಷಿಸಬೇಕಿದೆ. ಈ ವಿಚಾರದಲ್ಲಿ ಅವರ ಬೆಂಬಲಿಗರು ತಮ್ಮ ಆದ ಗೆಲುವಿನ ಸಮೀಕರಣವನ್ನು ಮುಂದಿಡುತ್ತಾರೆ.

ಶಾಸಕ ಕೃಷ್ಣಾರೆಡ್ಡಿ ಸರಳ ವ್ಯಕ್ತಿ. ಎಲ್ಲ ಜಾತಿ, ಧರ್ಮದವರೊಡೆನೆ ಬೆರೆಯುತ್ತಾರೆ. ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಸುಧಾಕರ್ ಅವರದು ಒರಟು ಸ್ವಭಾವ. ಜನಸಾಮಾನ್ಯರ ಜೊತೆ ಬೆರೆಯಲ್ಲ. ಹೀಗಾಗಿ ಜನ ಮತ್ತೆ ಕೃಷ್ಣಾರೆಡ್ಡಿ ಕೈ ಅವರ ಹಿಡಿಯುತ್ತಾರೆ ಎನ್ನುವುದು ಜೆಡಿಎಸ್ ಕಾರ್ಯಕರ್ತರ ಆಶಾವಾದ.

ಇದಕ್ಕೆ ಪ್ರತಿಯಾಗಿ, ಐದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ 20 ವರ್ಷ ಹಿಂದೆ ಬಿದ್ದಿದೆ. ಸುಧಾಕರ್ ಅವರ ಅವಧಿಯಲ್ಲಿ ಕ್ರೀಡಾಂಗಣ, ಬಸ್‌ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಮಾವು ಅಭಿವೃದ್ದಿ ಕೇಂದ್ರ, ಹೊಸಕೋಟೆ–ಚಿಂತಾಮಣಿ ರಸ್ತೆ, ಸರ್ಕಾರಿ ಶಾಲಾ ಕಾಲೇಜು ಕಟ್ಟಡಗಳು, ಸಾಮರ್ಥ್ಯಸೌಧ, ಪ್ರವಾಸಿ ಮಂದಿರ... ಹೀಗೆ ಕಾಮಗಾರಿಗಳು ಕಣ್ಣಿಗೆ ಗೋಚರಿಸುತ್ತವೆ. ಜನ ಈ ಬಾರಿ ಮೋಸ ಹೋಗಲ್ಲ. ಸುಧಾಕರ್‌ಗೆ ಆಶೀರ್ವಾದ ಮಾಡುತ್ತಾರೆ ಎನ್ನುವುದು ಅವರ ಬೆಂಬಲಿಗರ ವಾದ.

ಕಣದಲ್ಲಿರುವ ಇತರ ಅಭ್ಯರ್ಥಿಗಳು

ಗೌಸ್‌ಖಾನ್ (ಅಖಿಲ ಭಾರತ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ) ಜಮೀರ್ ಪಾಷಾ (ಅಂಬೇಡ್ಕರ್ ಸಮಾಜ ಪಕ್ಷ), ಎಲ್‌.ವಿ. ಶ್ರೀನಾಥ್ (ಅಂಬೇಡ್ಕರ್ ಪೀಪಲ್ ಪಕ್ಷ) ವೈ.ಎನ್.ಸುರೇಶ್ (ರಾಷ್ಟ್ರೀಯ ಮಾನವ ವಿಕಾಸ್), ಸೈಯದ್ ಆಯೂಬ್ (ಫೆಡರಲ್ ಕಾಂಗ್ರೆಸ್ ಆಫ್ ಇಂಡಿಯಾ ಪಕ್ಷ), ಸೈಯದ್ ಆಲೀಮ್ ಪಾಷಾ (ಅಂಬೇಡ್ಕರ್ ರಾಷ್ಟ್ರೀಯ ಕಾಂಗ್ರೆಸ್), ಪಕ್ಷೇತರರಾಗಿ ಕೃಷ್ಣಾರೆಡ್ಡಿ, ಎಂ.ಕೃಷ್ಣಾರೆಡ್ಡಿ, ಎಂ.ಕೃಷ್ಣಾರೆಡ್ಡಿ, ಎ.ಎಸ್. ಭಾಸ್ಕರ್ ರೆಡ್ಡಿ, ಎಸ್.ರಚನಾ, ಟಿ.ಸಿ.ವೆಂಕಟೇಶ್ ರೆಡ್ಡಿ, ಎನ್.ಆರ್.ಸುಧಾಕರ್, ಎಂ.ಸುಧಾಕರ್, ಆರ್.ಸುಧಾಕರ್, ಕೆ.ವಿ.ಸುಧಾಕರ್ ರೆಡ್ಡಿ, ಟಿ.ಎ.ಸುಧಾಕರ್‌ ರೆಡ್ಡಿ, ಜಿ.ಎಸ್.ಸುಭಾಷ್ ಸೇರಿದಂತೆ 22 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT