ಬೆಲೆ ಏರಿಕೆಗೆ ಉಭಯ ಸದನಗಳಲ್ಲಿ ತರಾಟೆ; ಬಿಜೆಪಿ ವೈಫಲ್ಯ ಖಂಡಿಸಿ ಪ್ರತಿಪಕ್ಷ ಸಭಾತ್ಯಾಗ
ನವದೆಹಲಿ, ಜುಲೈ 28 (ಪಿಟಿಐ)– ಬೆಲೆ ಹತೋಟಿ ಹಾಗೂ ಕಾನೂನು ಶಾಂತಿ ಪರಿಸ್ಥಿತಿಯನ್ನು ಹತೋಟಿಗೆ ತರುವುದೂ ಸೇರಿದಂತೆ ಎಲ್ಲ ರಂಗಗಳಲ್ಲೂ ವಾಜಪೇಯಿ ನಾಯಕತ್ವದ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿದ ಪ್ರತಿಪಕ್ಷಗಳು ಸಂಸತ್ತಿನ ಎರಡೂ ಸದನಗಳಲ್ಲಿ ಇಂದು ಸಭಾತ್ಯಾಗ ಮಾಡಿದವು.
ಈ ಸರ್ಕಾರ ‘ಎಷ್ಟುಬೇಗ ತೊಲಗಿದರೆ ದೇಶದ ಜನರಿಗೆ ಅಷ್ಟು ಒಳ್ಳೆಯದು’ ಎಂದು ಘೋಷಿಸುತ್ತ ಸದಸ್ಯರು ಹೊರನಡೆದರು.
ರಾಜಧಾನಿಯಲ್ಲಿ ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಚಳವಳಿಯನ್ನು ಪ್ರಾರಂಭಿಸುತ್ತಿದ್ದಂತೆ ಸದನದ ಒಳಗೆ ಪ್ರತಿಪಕ್ಷ ನಾಯಕ ಶರದ್ ಪವಾರ್ ಅವರು ಶೂನ್ಯವೇಳೆಯಲ್ಲಿ ಸರ್ಕಾರದ ವೈಫಲ್ಯವನ್ನು ಪ್ರಸ್ತಾಪಿಸಿ ‘ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕ ಸಮರ್ಥನೆ ಇಲ್ಲ’ ಎಂದರು.
ಕಾಶ್ಮೀರದಲ್ಲಿ ಮತ್ತೆ 16 ಜನರ ಹತ್ಯೆ
ದೊಡಾ, ಜುಲೈ 28 (ಪಿಟಿಐ, ಯುಎನ್ಐ)– ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಉಗ್ರಗಾಮಿಗಳು ಇಂದು ಬೆಳಿಗ್ಗೆ ಇಬ್ಬರು ಮಹಿಳೆಯರೂ ಸೇರಿ 16 ಮಂದಿ ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ.
ಈ ನಡುವೆ ಜಮ್ಮು ಪ್ರದೇಶದಲ್ಲಿ ಕಳೆದ ರಾತ್ರಿ ನಡೆದ ಮೂರು ಪ್ರತ್ಯೇಕ ಚಕಮಕಿಗಳಲ್ಲಿ 11 ಉಗ್ರರು ಹತರಾಗಿದ್ದಾರೆ. ಇಬ್ಬರು ಸೈನಿಕರು ಹಾಗೂ ನ್ಯಾಷನಲ್ ಕಾನ್ಫರೆನ್ಸಿನ ಧುರೀಣರೊಬ್ಬರು ಮೃತಪಟ್ಟಿದ್ದಾರೆ. ಇದರಿಂದ ಕಳೆದ ರಾತ್ರಿಯಿಂದ ಈ ಪ್ರದೇಶದಲ್ಲಿ ಸಾವಿನ ಸಂಖ್ಯೆ 31ಕ್ಕೆ ಏರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.