ಸರ್ಕಾರಿ ಉದ್ಯೋಗ: ಗ್ರಾಮೀಣರಿಗೆ ಕೃಪಾಂಕ ಶೇ 10ಕ್ಕೆ ಏರಿಕೆ
ಬೆಂಗಳೂರು,ಏ. 28– ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಸಿ ಮತ್ತು ಡಿ ದರ್ಜೆ ಸರ್ಕಾರಿ ನೌಕರಿಗೆ ಸೇರುವ ಸಂದರ್ಭದಲ್ಲಿ ನೀಡುತ್ತಿದ್ದ ಶೇ ಐದರ ಕೃಪಾಂಕ ನೀತಿಯನ್ನು ಬದಲಾಯಿಸಿರುವ ಸರ್ಕಾರ ಇದನ್ನು ಶೇ 10ಕ್ಕೆ ಏರಿಸುವುದರ ಜತೆಗೆ ಈ ಕೃಪಾಂಕ ನೀತಿಯನ್ನು ಎ ಮತ್ತು ಬಿ ದರ್ಜೆ ನೌಕರರಿಗೂ ವಿಸ್ತರಿಸಿದೆ.
ಇಂದು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು ಇದರಿಂದ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಇನ್ನೂ ಹೆಚ್ಚಿನ ಅನುಕೂಲ ಆಗಲಿದೆ ಎನ್ನುವುದು ಸರ್ಕಾರದ ನಿರೀಕ್ಷೆ ಎಂದು ಸಭೆ ಬಳಿಕ ವಾರ್ತಾ ಸಚಿವ ಎಂ.ಸಿ ನಾಣಯ್ಯ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಒಂದನೆಯ ತರಗತಿಯಿಂದ 10ನೇ ತರಗತಿಯವರೆಗೆ 50 ಸಾವಿರ ಜನಸಂಖ್ಯೆ ಮೀರದ ಊರುಗಳಲ್ಲಿ ಕಲಿತಿರುವ ಅಭ್ಯರ್ಥಿಗಳನ್ನು ಗ್ರಾಮೀಣರು ಎಂದು ಪರಿಗಣಿಸಲಾಗುವುದು. ಶೇ 5ರ ಕೃಪಾಂಕ ಪದ್ಧತಿಯಿಂದ ಬಹಳ ಜನರಿಗೆ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಅದನ್ನು ದುಪ್ಪಟ್ಟಾಗಿಸಲು ತೀರ್ಮಾನಿಸಲಾಯಿತು ಎಂದು ಅವರು ತಿಳಿಸಿದರು.
ವೈದ್ಯ–ಶಿಕ್ಷಕರ ಕಾಯಂ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 235 ಜನ ಪಶುಸಂಗೋಪನಾ ವೈದ್ಯರು ಹಾಗೂ ಸುಮಾರು 600ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಅರೆಕಾಲಿಕ ಪ್ರೌಢ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಲೂ ಸರ್ಕಾರ ತೀರ್ಮಾನಿಸಿದೆ.