ನವದೆಹಲಿ, ಫೆ. 1 (ಪಿಟಿಐ)– ಲೋಕಸಭಾ ಚುನಾವಣೆಯ ಬಳಿಕ ಅತಂತ್ರ ಸಂಸತ್ ಅಸ್ತಿತ್ವಕ್ಕೆ ಬಂದಲ್ಲಿ ಸರ್ವ ಪಕ್ಷಗಳ ರಾಷ್ಟ್ರೀಯ ಸರ್ಕಾರವನ್ನು ರಚಿಸುವುದಕ್ಕೆ ಪ್ರಧಾನಿ ಐ.ಕೆ. ಗುಜ್ರಾಲ್ ವಿರೋಧ ವ್ಯಕ್ತಪಡಿಸಿದ್ದಾರೆ.
ಟಿ.ವಿ. ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ‘ವಿರೋಧ ಪಕ್ಷಗಳ ಸಾಲಿನಲ್ಲಿ ಯಾರೂ ಇರದೆ ಎಲ್ಲ ಪಕ್ಷಗಳೂ ಒಂದಾದರೆ ಸರ್ಕಾರಕ್ಕೆ ಇದು ಯೋಗ್ಯವಾದುದಲ್ಲ. ಅಂದು ದುಃಖದ ದಿನವಾಗುತ್ತದೆ’ ಎಂದರು.
ರಾಜೀವ್ ಹತ್ಯೆ: ರಾಜಕಾರಣಿಗಳ ಕೈವಾಡ– ಸೋನಿಯಾ ಆರೋಪ
ಗಾಂಧಿ ನಗರ (ಅಮೇಠಿ) ಫೆ. 1– ರಾಜೀವ್ ಗಾಂಧಿ ಅವರ ಹತ್ಯೆಯಲ್ಲಿ ಕೆಲವು ರಾಜಕಾರಣಿಗಳ ಕೈವಾಡ ಇದೆ ಎಂದು ಸೋನಿಯಾ ಗಾಂಧಿ ಅವರು ಆಪಾದಿಸಿದ್ದಾರೆ.
ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಅವರು, ‘ರಾಜೀವ್ ಗಾಂಧಿ ಹತ್ಯೆಯ ಒಳಸಂಚನ್ನು ರೂಪಿಸಿದವರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದವರನ್ನು ರಕ್ಷಿಸಲಾಗುತ್ತಿದೆ’ ಎಂದು ಪರೋಕ್ಷವಾಗಿ ಡಿಎಂಕೆ ಮತ್ತು ಸಂಯುಕ್ತ ರಂಗವನ್ನು ಟೀಕಿಸಿದರು.