ಬೆಂಗಳೂರು, ಅ.31– ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಸುಮಾರು 1,275 ಕೋಟಿ ರೂಪಾಯಿ ಅಂದಾಜು ವೆಚ್ಚದ ಕಾವೇರಿ ಯೋಜನೆ ನಾಲ್ಕನೇ ಹಂತದ ಕೆಲಸ ಜನವರಿಯಲ್ಲಿ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಇಂದು ಇಲ್ಲಿ ಪ್ರಕಟಿಸಿದರು.
‘ಇದರಿಂದ ಇನ್ನು 50 ವರ್ಷವಾದರೂ ನಗರಕ್ಕೆ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಬಹುದು’ ಎಂದ ಅವರು, ‘ಈ ಯೋಜನೆಗೆ ಬೇಕಾದ ಭಾರಿ ಮೊತ್ತವನ್ನು ಹೊಂದಿಸುವ ಬಗೆ ನಮಗೆ ಗೊತ್ತು. ಹೊಂದಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರೆ, ಹಣ ಸಂಗ್ರಹ ಹೇಗೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.