ಬೆಂಗಳೂರು, ಜ.2–ಕೇಂದ್ರ ಸರ್ಕಾರದ ಐದನೇ ವೇತನ ಆಯೋಗದ ಶಿಫಾರಸುಗಳನ್ನು ತಮಗೂ ಅನ್ವಯಿಸಬೇಕೆಂಬ ಬೇಡಿಕೆ ಮುಂದಿಟ್ಟು ರಾಜ್ಯ ಸರ್ಕಾರಿ ನೌಕರರು ಇಂದು ಆರಂಭಿಸಿರುವ ಅನಿರ್ದಿಷ್ಟ ಅವಧಿಯ ಮುಷ್ಕರವು ರಾಜ್ಯದಾದ್ಯಂತ ಸಂಪೂರ್ಣ ಯಶಸ್ವಿಯಾಗಿದೆ.
ನೌಕರರ ಮುಷ್ಕರದಿಂದಾಗಿ ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಬೆಳಗಾವಿ ನಗರಗಳೂ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಸರ್ಕಾರಿ ಕಚೇರಿಗಳ ಬಾಗಿಲು ಇಂದು ತೆಗೆದಿರಲಿಲ್ಲ. ಇದರಿಂದಾಗಿ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಮುಷ್ಕರ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಮುಷ್ಕರ ನಾಳೆಯೂ ಮುಂದುವರಿಯಲಿದೆ.
ಹಣಕಾಸು ಕಂಪನಿಗಳಿಗೆ ಆರ್ಬಿಐ ಅಂಕುಶ
ಮುಂಬೈ, ಜ.2 (ಪಿಟಿಐ): ರಿಸರ್ವ್ ಬ್ಯಾಂಕ್ ಇಂದು ಬ್ಯಾಂಕಿಂಗೇತರ ಹಣಕಾಸು ಕಂಪನಿ (ಎನ್ಬಿಎಫ್ಸಿ)ಗಳ ಮೇಲೆ ಕಟ್ಟುನಿಟ್ಟಿನ ಹಾಗೂ ಕಠಿಣ ನಿರ್ಬಂಧಗಳನ್ನು ಹೇರಿದ್ದು, ಅವುಗಳು ಠೇವಣಿಗಳಿಗೆ ಕೊಡಬಹುದಾದ ಬಡ್ಡಿದರವನ್ನು ಗರಿಷ್ಠ ಶೇಕಡ 16ಕ್ಕೆ ಮಿತಿಗೊಳಿಸಿದೆ.
ಸ್ವಂತ ನಿವ್ವಳ ಹಣಕಾಸು 25 ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿರುವ ಹಾಗೂ ರೇಟಿಂಗ್ ಸಂಸ್ಥೆಗಳಿಂದ ’ಎ’ ದರ್ಜೆಗಿಂತ ಕೆಳಗಿನ ಅರ್ಹತೆಯನ್ನು ಪಡೆದ ಹಣಕಾಸು ಸಂಸ್ಥೆಗಳು ಸಾರ್ವಜನಿಕರಿಂದ ಠೇವಣಿ ಸ್ವೀಕರಿಸದೇ ಇರುವಂತೆ ನಿರ್ಬಂಧ ಹೇರಿದೆ.