ಬೆಂಗಳೂರು, ಜೂನ್ 18– ರಾಜ್ಯ ವಿಧಾನಪರಿಷತ್ತಿನ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ 3 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಹಾಗೂ ಆ ಪಕ್ಷದ ಬೆಂಬಲಿತ ಅಭ್ಯರ್ಥಿ ಮತ್ತೊಂದು ಸ್ಥಾನವನ್ನುತಮ್ಮದಾಗಿಸಿಕೊಂಡಿದ್ದಾರೆ.
ಬೀದರ್, ಕಲಬುರ್ಗಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಜಿ. ನಾಮೋಶಿ 4,038 ಮತಗಳಿಂದ ಜಯಗಳಿಸಿದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ. ನರಹರಿ 1,883 ಮತ ಪಡೆದು ವಿಜಯ ಸಾಧಿಸಿದ್ದಾರೆ.
ತುಮಕೂರು, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಯನ್ನ ಒಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಎ.ಎಚ್. ಶಿವಯೋಗಿ ಸ್ವಾಮಿ 4,374 ಮತ ಗಳಿಸಿ ಜಯ ಸಾಧಿಸಿದ್ದಾರೆ.
ಗೊಬ್ಬರ ಹಗರಣ– ಪ್ರಕಾಶ್, ಸಂಜೀವರಾವ್ ಬಂಧನ
ನವದೆಹಲಿ, ಜೂನ್ 18 (ಪಿಟಿಐ)– ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಬಂಧು ಸಂಜೀವರಾವ್ ಹಾಗೂ ಹಿಂದಿನ ಸರ್ಕಾರದ ರಸಗೊಬ್ಬರ ಸಚಿವ ರಾಮ್ಲಖನ್ ಸಿಂಗ್ ಯಾದವ್ ಅವರ ಮಗ ಪ್ರಕಾಶಚಂದ್ರ ಅವರನ್ನು ಸಿಬಿಐ ಇಂದು 133 ಕೋಟಿ ರೂಪಾಯಿ ಯೂರಿಯಾ ಹಗರಣದಲ್ಲಿ ಲಂಚ ಪಡೆದ ಆರೋಪದ ಮೇರೆಗೆ ಬಂಧಿಸಿತು.
ನರಸಿಂಹರಾವ್ ಅವರ ಪುತ್ರ ರಾಜೇಶ್ವರರಾವ್ ಅವರ ಭಾವ ಸಂಜೀವರಾವ್ ಅವರನ್ನು ಹೈದರಾ ಬಾದ್ನಲ್ಲಿ ಬಂಧಿಸಲಾಯಿತು. ಪ್ರಕಾಶ ಚಂದ್ರ ಅವರನ್ನು, ಸಿಬಿಐ ಕೇಂದ್ರ ಕಚೇರಿಯಲ್ಲಿ ಇಂದು ಮಧ್ಯಾಹ್ನ ಮೂರನೇ ಬಾರಿಗೆ ವಿಚಾರಣೆಗೆ ಒಳಪಡಿಸಿದ ನಂತರ ದಸ್ತಗಿರಿ ಮಾಡಲಾಯಿತು.