ಆಳೆತ್ತರದ ಗುಲಾಬಿಯ ಹಾರಗಳು, ಕುಸುರಿ ಕೆಲಸದ ರೇಶಿಮೆಯ ಮಾಲೆಗಳು, ನೆನಪಿನ ಕಾಣಿಕೆಗಳು, ಸಕಲಗುಣ ವಿಶೇಷಣಗಳನ್ನೂ ಹೊತ್ತ ಅಭಿನಂದನ ಪತ್ರ, ಅಭಿಮಾನಿಗಳ ಉತ್ಸಾಹ ಈ ಎಲ್ಲದರ ನಡುವೆ ಹೂತು ಹೋಗಿದ್ದ ರಾ. ರಾಜಕುಮಾರ್ ಅವರಿಗೆ ತವರೂರ ಪುಲಕ. ಹುಟ್ಟಿದ ಜಿಲ್ಲೆಯ ರೋಮಾಂಚನ. ಆನಂದ ಭಾಷ್ಪಗಳನ್ನು ತುಂಬಿಕೊಂಡು ನೆರೆದ ಅಭಿಮಾನಿಗಳ ಮುಂದೆ ಕೃತಜ್ಞತೆ ಹೇಳಿದ ಡಾ. ರಾಜ್, ಅಷ್ಟೇ ಹುರುಪಿನಿಂದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡನ್ನೂ ಹಾಡಿ ಅದಕ್ಕೆ ಹೆಜ್ಜೆಯನ್ನೂ ಹಾಕಿ, ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸಿದರು.