ಅನಿಶ್ಚಿತ ಸ್ಥಿತಿ ಚರ್ಚೆಗೆ ನಾಳೆ: ಕಾಂಗ್ರೆಸ್ ಕಾರ್ಯಕಾರಿಣಿ
ನವದೆಹಲಿ, ಏ. 12– ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದ ಸಂಯುಕ್ತ ರಂಗ ಪತನಕ್ಕೆ ಕಾರಣವಾದ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರ ಆತುರದ ನಿರ್ಧಾರ ಮತ್ತು ಈಗ ಉದ್ಭವಿಸಿರುವ ರಾಜಕೀಯ ಅನಿಶ್ಚಿತ ಪರಿಸ್ಥಿತಿಯ ಬಗೆಗೆ ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯು ಬರುವ ಸೋಮವಾರ ನಡೆಯಲಿದೆ.
ಈಗಿನ ರಾಜಕೀಯ ಅಸ್ಥಿರತೆಗೆ ಕಾರಣ ವಾದ ಕೇಸರಿ ಅವರ ನಿರ್ಧಾರದಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿಯ ಬಗೆಗೆ ಸುಮಾರು 150 ಮಂದಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಇಂದು ಬಂಡಾಯ ಎದ್ದ ಹಿನ್ನೆಲೆಯಲ್ಲಿ ಕೇಸರಿ ಅವರು ಈ ನಿರ್ಧಾರ ಕೈಗೊಂಡರು. ಈ ತೀರ್ಮಾನವನ್ನು ಕೇಸರಿ ಅವರ ರಾಜಕೀಯ ಆಪ್ತ ಕಾರ್ಯದರ್ಶಿ ತಾರಿಖ್ ಅನ್ವರ್ ಅವರು ಇಂದು ರಾತ್ರಿ ಪ್ರಕಟಿಸಿದರು.
ಇವರಲ್ಲಿ ಬಹುತೇಕ ಮಂದಿ ಶರದ್ ಪವಾರ್ ಮತ್ತು ನರಸಿಂಹರಾವ್ ಬೆಂಬಲಿ ಗರು, ಸಂಜೆ ಶರದ್ ಪವಾರ್ ಅವರ ನಿವಾಸ ದಲ್ಲಿ ನಡೆದ ಚಹಾ ಕೂಟದ ಸಭೆಯಲ್ಲಿ ನಡೆದ ಆತ್ಮಶೋಧನಾ ಚರ್ಚೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದ್ದಾಗಿ ಸಭೆಯಲ್ಲಿ ಭಾಗವಹಿಸಿದ್ದ ಎ.ಆರ್. ಅಂಟುಲೆ ಮತ್ತು ಮಮತಾ ಬ್ಯಾನರ್ಜಿ ಅವರು ತಿಳಿಸಿದರು.
ಪಕ್ಷದ ವಿಪ್ ಉಲ್ಲಂಘನೆ ಮಾಡದೇ ನಾವು ಮತ ಹಾಕಿ ಸರ್ಕಾರ ಬೀಳಿಸಿದೆವು. ಆದರೆ, ನಮ್ಮ ಆತ್ಮಸಾಕ್ಷಿಯನ್ನು ವಂಚನೆ ಮಾಡಿದೆವು ಎಂದು ಅವರು ಪವಾರ್ ನಿವಾಸದ ಮುಂದೆ ಸೇರಿದ್ದ ಪತ್ರಕರ್ತರಿಗೆ ತಿಳಿಸಿದರು.
ಒಂದು ರೀತಿಯಲ್ಲಿ ಕೇಸರಿ ಅವರ ವಿರುದ್ಧ ಇದು ಬಂಡಾಯ ಎನ್ನುವಂತೆ ಮತ್ತು ಅವರ ನಾಯಕತ್ವವನ್ನು ಬದಲಾಯಿಸುವ ಅವಶ್ಯಕತೆಯ ಬಗೆಗೂ ಹಲವು ಸದಸ್ಯರು ಬಲವಾದ ಅಭಿಪ್ರಾಯ ವ್ಯಕ್ತಪಡಿಸಿದರೆನ್ನಲಾಗಿದೆ.