ಚೆನ್ನೈ, ಆ.25 (ಪಿಟಿಐ)– ಕುಖ್ಯಾತ ದಂತಚೋರ, ನರಹಂತಕ ವೀರಪ್ಪನ್ನ ಬಂಧನದಲ್ಲಿ 44 ದಿನಗಳ ಕಾಲ ನರಕಯಾತನೆ ಅನುಭವಿಸಿದ ಎಂಟು ಮಂದಿ ಅರಣ್ಯ ಸಿಬ್ಬಂದಿ ನಿನ್ನೆ ಬಿಡುಗಡೆ ಯಾಗುವುದರೊಂದಿಗೆ ಅವರಿಗೆ ಮರುಹುಟ್ಟು ದೊರೆತಂತಾಗಿದೆ.
ಸಾವಿನ ಅಂಚು ತಲುಪಿದ್ದ ಮಾಧವ ಹಾಗೂ ದಾಸಯ್ಯ ಅವರಿಗಂತೂ ಪುನರ್ಜನ್ಮವೇ ಸರಿ. ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಜುಲೈ 26ರಂದು ವೀರಪ್ಪನ್ಗೆ ಕ್ಷಮಾದಾನ ನೀಡಲು ನಿರಾಕರಿಸಿದ್ದರಿಂದ ಕೋಪಗೊಂಡ ವೀರಪ್ಪನ್ ಈ ಇಬ್ಬರನ್ನು ಶಿರಚ್ಛೇದ ಮಾಡುವ ಸಲುವಾಗಿ ಬೇರೆಡೆಗೆ ಕರೆದೊಯ್ದಿದ್ದ. ಆದರೆ ವೀರಪ್ಪನ್ನ ಆಪ್ತ ಸಹಚರ ಸೇತುಕುಳಿ ಗೋವಿಂದನ್ ತಕ್ಕ ಸಮಯಕ್ಕೆ ಮಧ್ಯೆಪ್ರವೇಶಿಸಿ ಈ ಇಬ್ಬರ ಜೀವದಾನಕ್ಕೆ ಕಾರಣನಾಗಿದ್ದ.
ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವ ವೀರಪ್ಪನ್ ಶರಣಾಗತಿಗೆ ಇನ್ನಷ್ಟು ಕಾಲಾವಕಾಶ ಬೇಡುವ ಸಾಧ್ಯತೆ ಇದೆ ಎಂದು ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಹೇಳಿದ್ದಾರೆ.