ಹೈದರಾಬಾದ್, ಜ. 21 (ಪಿಟಿಐ, ಯುಎನ್ಐ)– ತೆಲುಗು ದೇಶಂ (ಎನ್ಟಿಆರ್ ಬಣ) ಪಕ್ಷದ ಹೊಸ ಅಧ್ಯಕ್ಷರಾಗಿ ದಿವಂಗತ ಎನ್ಟಿಆರ್ ಅವರ ಪತ್ನಿ ಲಕ್ಷ್ಮಿ ಶಿವಪಾರ್ವತಿ ಅವರು ಇಂದು ಸರ್ವಾನುಮತದಿಂದ ಆಯ್ಕೆಯಾದರು.
ದಿ.ರಾಮರಾವ್ ಅವರ ನಿವಾಸದಲ್ಲಿ ಸಂಜೆ ನಡೆದ ಪಕ್ಷದ ಕಾರ್ಯಕಾರಿಣಿ ಸಭೆ, ದೇಶಂ ಅಧ್ಯಕ್ಷತೆಯನ್ನು ಎನ್ಟಿಆರ್ ಅವರ ದ್ವಿತೀಯ ಪತ್ನಿಗೆ ಹಸ್ತಾಂತರಿಸಲು ಸರ್ವ ಸಮ್ಮತಿಯಿಂದ ತೀರ್ಮಾನಿಸಿತು. ದಿವಂಗತ ನಾಯಕನ ದೊಡ್ಡ ಅಳಿಯ ಡಾ. ವೆಂಕಟೇಶ್ವರ ರಾವ್ ಅವರು ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದರು.
ಇದುವರೆಗಿನ ಭಿನ್ನಾಭಿಪ್ರಾಯ ಮರೆತು ತಮ್ಮೊಂದಿಗೆ ಸೇರುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಡಿದ್ದ ಮನವಿಯನ್ನು ಇದಕ್ಕೂ ಮುನ್ನ ನಡೆದ ಈ ಬಣದ ಶಾಸಕರ ಸಭೆ ಸಾರಾಸಗಟಾಗಿ ತಿರಸ್ಕರಿಸುವುದರೊಂದಿಗೆ, ಎರಡೂ ಬಣಗಳ ವಿಲೀನ ಯತ್ನ ಮುರಿದು ಬಿದ್ದಂತಾಗಿದೆ.
ಆದಾಯದ ಲೆಕ್ಕ ಸಲ್ಲಿಕೆ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಗಡುವು
ನವದೆಹಲಿ, ಜ. 21 (ಪಿಟಿಐ)– ಆದಾಯ ತೆರಿಗೆ ಕಾನೂನಿನ 13 (ಎ) ವಿಧಿಯು ಆದಾಯದ ಲೆಕ್ಕಪತ್ರ ಸಲ್ಲಿಸುವ ಕಡ್ಡಾಯ ಹೊಣೆಗಾರಿಕೆಯಿಂದ ರಾಜಕೀಯ ಪಕ್ಷಗಳಿಗೆ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.