ನವದೆಹಲಿ, ಜುಲೈ 25 (ಪಿಟಿಐ, ಯುಎನ್ಐ)– ದೇಶದ ಹತ್ತನೇ ರಾಷ್ಟ್ರಪತಿಯಾಗಿ ಕೊಚೇರಿಲ್ ರಾಮನ್ ನಾರಾಯಣನ್ ಇಂದು ಪ್ರಮಾಣವಚನ ಸ್ವೀಕರಿಸಿದರು.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಅವರು ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಡಾ. ಶಂಕರ್ ದಯಾಳ್ ಶರ್ಮಾ ಅವರ ಸಮ್ಮುಖದಲ್ಲಿ ನಾರಾಯಣನ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ನಾರಾಯಣನ್ ಹಿಂದಿ ಭಾಷೆಯಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸ್ವಾತಂತ್ರ್ಯೋತ್ಸವದ ಸುವರ್ಣ ವರ್ಷದ ಆಚರಣೆಯ ಸಮಯದಲ್ಲಿ ನಾರಾಯಣನ್ ರಾಷ್ಟ್ರದ ಅತ್ಯುನ್ನತ ಪದವಿ ಅಲಂಕರಿಸಿದ ಮೊದಲ ದಲಿತ ವ್ಯಕ್ತಿಯಾಗಿದ್ದಾರೆ.
ಲಾಲೂ ರಾಜೀನಾಮೆ: ಪತ್ನಿ ರಾಬ್ಡಿ ದೇವಿ ಉತ್ತರಾಧಿಕಾರಿ
ಪಟ್ನಾ, ಜುಲೈ 25 (ಪಿಟಿಐ, ಯುಎನ್ಐ)– ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲಾಲೂ ಅವರ ಉತ್ತರಾಧಿಕಾರಿಯಾಗಿ ಅವರ ಪತ್ನಿ ರಾಬ್ಡಿ ದೇವಿ ಅವರು ಆಯ್ಕೆಯಾಗಿದ್ದು ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಿದರು.
ಬಂಧನಕ್ಕೆ ತಡೆ: ಪಟ್ನಾ ಹೈಕೋರ್ಟಿನ ಆಜ್ಞೆ ಯನ್ನು ಪ್ರಶ್ನಿಸಿ ಲಾಲೂ ಅವರುಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅರ್ಜಿ ಯನ್ನು ವಿಚಾರಣೆಗೆ ತೆಗೆದುಕೊಳ್ಳುವವರೆಗೆ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಇಂದು ಸಿಬಿಐಗೆ ನಿರ್ದೇಶನ ನೀಡಿತು.