ಚೆನ್ನೈ, ಮೇ 25– ತಮಿಳುನಾಡು ರೈತರ ಹಿತದ ದೃಷ್ಟಿಯಿಂದ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಜಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯುತ್ ಬೆಲೆ ನಿಯಂತ್ರಣ ಮಸೂದೆಯನ್ನು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಂಡಿಸಬಾರದು ಎಂದು ಕೇಂದ್ರದ ಬಿಜೆಪಿ ಮೈತ್ರಿಕೂಟದ ಘಟಕ ಪಕ್ಷವಾದ ಎಐಎಡಿಎಂಕೆ ಇಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದೆ.
ಮಿತ್ರ ಪಕ್ಷದಿಂದಲೇ ಬಂದಿರುವ ಈ ಷರತ್ತಿನಿಂದ ಬಜೆಟ್ ಅಧಿವೇಶನದಲ್ಲಿ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು ವಿದ್ಯುತ್ ಮಸೂದೆ ಕುರಿತಂತೆ ಜಯಲಲಿತಾ ಅವರೊಂದಿಗೆ ಸಮಾಲೋಚನೆ ನಡೆಸಲು ಸಿದ್ಧವಿರುವುದಾಗಿ ಪ್ರಕಟಿಸಿದೆ.
‘ಬಿಜೆಪಿ ಮೈತ್ರಿಕೂಟದಲ್ಲಿ ಎಐಎಡಿಎಂಕೆ ಬಹುಮುಖ್ಯ ಘಟಕವಾದ್ದರಿಂದ ವಿದ್ಯುತ್ ಸುಗ್ರೀವಾಜ್ಞೆ ಕುರಿತಂತೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮಾತುಕತೆ ಮೂಲಕ ಬಹೆಹರಿಸಿಕೊಳ್ಳಲಾಗುವುದು’ ಎಂದು ಪ್ರಧಾನಿ ಅವರ ರಾಜಕೀಯ ಸಲಹೆಗಾರ ಪ್ರಮೋದ್ ಮಹಾಜನ ಅವರು ದೆಹಲಿಯಲ್ಲಿ ಹೇಳಿದ್ದಾರೆ.
–––
ಚಿಕ್ಕಮಗಳೂರು, ತುಮಕೂರು, ಬೀದರ್ ಜಿಲ್ಲೆಗಳಲ್ಲಿ ಡಕಾಯಿತಿ
ಚಿಕ್ಕಮಗಳೂರು, ಮೇ 25– ಚಿಕ್ಕಮಗಳೂರಿನ ಯಗಟಿ, ತುಮಕೂರು ಬಳಿಯ ಬಡ್ಡಿಹಳ್ಳಿಯಲ್ಲಿ ದರೋಡೆಕೋರರು ಮನೆಗಳ ಮೇಲೆ ದಾಳಿ ಮಾಡಿ ನಗನಾಣ್ಯ ದೋಚಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿಯೂ ದರೋಡೆ ಯತ್ನ ನಡೆದಿದೆ.