ಚಿನ್ನದ ವರ್ಷ ಆರಂಭ. ಭಾರತದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದೊಂದಿಗೆ ನಮಗೂ ಈಗ ಚಿನ್ನದ ಹಬ್ಬದ ಸಂಭ್ರಮ.
ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್ ಇಂದು ಸುವರ್ಣ ಮಹೋತ್ಸವ ವರ್ಷದಲ್ಲಿ ಹೆಜ್ಜೆ ಇರಿಸಿವೆ.
ದೇಶದ ಸ್ವಾತಂತ್ರ್ಯದ ಸುಪ್ರಭಾತದಲ್ಲೇ ಪ್ರಜಾಸತ್ತಾತ್ಮಕ ಆಶಯಗಳಿಗೆ ದನಿಯಾಗಬೇಕಾದ ಪತ್ರಿಕೆಗಳ ಅಗತ್ಯವನ್ನು ನಮ್ಮ ಹಿರಿಯರು ದೂರದೃಷ್ಟಿ ಹಾಗೂ ಜೀವನಾನುಭವದಿಂದ ಕಂಡುಕೊಂಡರು. ಹೀಗೆ ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಕನಸು ಮೂಡಿತು.
17, ಜೂನ್ 1948.
ಈ ಕನಸಿನ ಸಾಕಾರವಾಗಿ ಮೊದಲು ‘ಡೆಕ್ಕನ್ ಹೆರಾಲ್ಡ್’ ಬೆಳಕು ಕಂಡಿತು. ನಂತರ ಸಮಸ್ತ ಕನ್ನಡಿಗರ ದನಿಯಾಗಿ ಅದೇ ವರ್ಷ ಅಕ್ಟೋಬರ್ 15ರಂದು ಸೂರ್ಯೋದಯಕ್ಕೆ ‘ಪ್ರಜಾವಾಣಿ’ ಮೊಳಗಿತು.
ರಾಷ್ಟ್ರಪತಿ ಹುದ್ದೆಗೆ ಜಂಟಿ ಅಭ್ಯರ್ಥಿ ನಾರಾಯಣನ್
ನವದೆಹಲಿ, ಜೂನ್ 16– ರಾಷ್ಟ್ರಪತಿ ಹುದ್ದೆಗೆ ಸಂಯುಕ್ತ ರಂಗ ಹಾಗೂ ಕಾಂಗ್ರೆಸ್ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಉಪರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರನ್ನು ಇಂದು ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಹಾಗೂ ಸಂಯುಕ್ತ ರಂಗದ ಸಂಚಾಲಕ ಚಂದ್ರಬಾಬು ನಾಯ್ಡು ಅವರು ಇಂದು ರಾತ್ರಿ ಭೇಟಿಯಾಗಿ ಚರ್ಚಿಸಿದ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದರು.