ಬೆಂಗಳೂರು, ಆ. 5– ಅಡಿಕೆಯನ್ನು ಉಪಯೋಗಿಸಿ ಉತ್ಪಾದಿಸುವ ಗುಟ್ಕಾದಂತಹ ಯಾವುದೇ ವಸ್ತುವಿಗೆ ನಿಷೇಧ ಅಥವಾ ನಿರ್ಬಂಧ ಹೇರುವ ಆಲೋಚನೆಯನ್ನು ಕೈಬಿಡಬೇಕು ಎಂದು ರಾಜ್ಯದ ಅಡಿಕೆ ಬೆಳೆಯುವ ಪ್ರದೇಶಗಳ ಶಾಸಕರು ಹಾಗೂ ಪ್ರಮುಖ ಅಡಿಕೆ ಬೆಳೆಗಾರರ ಸಭೆ ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದೆ.
ಗುಟ್ಕಾ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಿದೆ ಎಂಬ ನೆಪದಲ್ಲಿ ಈ ಉತ್ಪನ್ನವನ್ನು ನಿಷೇಧಿಸುವ ವದಂತಿಯಿದ್ದು ಇದು ಈಚಿಗಿನ ತಿಂಗಳುಗಳಲ್ಲಿ ಅಡಿಕೆಯ ಬೆಲೆ ಸುಮಾರು ಶೇಕಡಾ 50ರಷ್ಟು ಕುಸಿಯಲು ಕಾರಣವಾಗಿದೆ ಎಂದು ಶಾಸಕರ ಸಭೆ ಅಂಗೀಕರಿಸಿದ ನಿರ್ಣಯದಲ್ಲಿ ಹೇಳಲಾಗಿದೆ.
ಗುಟ್ಕಾದಲ್ಲಿ ಯಾವುದೇ ಹಾನಿಕಾರಕ ವಸ್ತುಗಳನ್ನು ಸೇರಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಶೇಕಡಾ 80 ಭಾಗದಷ್ಟು ಅಡಿಕೆಯನ್ನು ಬಳಸುವ ಗಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸುವುದರಿಂದ ದೇಶದ ಸುಮಾರು 10 ಲಕ್ಷ ಅಡಿಕೆ ಬೆಳಗಾರ ಕುಟುಂಬಗಳಿಗೆ ಜೀವನದ ಆಧಾರವೇ ಇಲ್ಲದಂತಾಗುವುದು ಎಂದು ತಿಳಿಸಿವೆ.
ಯೂರಿಯಾ ಹಗರಣ: ಪಿವಿಎನ್ ಪುತ್ರನ ಬಂಧನ ಸಂಭವ
ನವದೆಹಲಿ, ಆ. 5 (ಯುಎನ್ಐ): ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಪುತ್ರ ಪ್ರಭಾಕರ್ ರಾವ್ ಅವರಿಗೆ ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ ನಿರೀಕ್ಷಣಾ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು ರದ್ದು ಮಾಡಿದೆ.
ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಭಾಕರ್ ಅವರನ್ನು ಬಂಧಿಸುವುದಕ್ಕೆ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಿದೆ.