ಬೆಂಗಳೂರು, ನ. 1– ಕರ್ನಾಟಕದ ನೆಲ, ಜಲ, ಖನಿಜ ಹಾಗೂ ಸಸ್ಯ ಸಂಪತ್ತನ್ನು ವಿದೇಶೀಕರಣಗೊಳಿಸುವ ಮೂಲಕ ಜನತೆ ಮತ್ತು ಸಂಸ್ಕೃತಿಯ ಮೇಲೆ ದಾಳಿ ನಡೆಸಲು ಹೊರಟಿರುವ ರಾಜ್ಯ ಸರ್ಕಾರದ ನೀತಿಯ ವಿರುದ್ಧ ಇಂದು ಕಬ್ಬನ್ ಉದ್ಯಾನದಲ್ಲಿ ನಡೆದ ಬೃಹತ್ ರೈತರ ಸಮಾವೇಶ ತನ್ನ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಭೂ ಸುಧಾರಣೆಯ ಕಾನೂನನ್ನು ತಿದ್ದುಪಡಿ ಮಾಡಿ, ಅದಕ್ಕೆ ಹೊಂದಿಕೆಯಾಗುವ ‘ರಾಷ್ಟ್ರದ್ರೋಹಿ ಕೃಷಿ ನೀತಿ’ಯನ್ನು ಜಾರಿಗೆ ತಂದು, ಕೃಷಿಯನ್ನು ಖಾಸಗೀಕರಣಗೊಳಿಸಿರುವುದನ್ನು ರೈತರು ತೀವ್ರವಾಗಿ ಪ್ರತಿಭಟಿಸಿದರು. ಕೃಷಿ ನೀತಿ ಹಾಗೂ ಜನತಾದಳದ ಪ್ರತಿಕೃತಿಯನ್ನು ದಹನ ಮಾಡಿ ಸಮಾವೇಶ ತನ್ನ ಅಸಮಾಧಾನದ ತೀವ್ರತೆಯನ್ನು ಪ್ರಕಟಿಸಿತು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶದಲ್ಲಿ ಸರ್ಕಾರದ ಜನವಿರೋಧಿ ನೀತಿಯನ್ನು ವೇದಿಕೆಯ ಮೇಲೆ ನೆರೆದ ನಾಯಕರು ಟೀಕಿಸಿ ಮಾತನಾಡುತ್ತಿದ್ದಂತೆ ಸಮಾವೇಶದಲ್ಲಿ ಭಾವೋದ್ರೇಕದ ವಾತಾವರಣ ನಿರ್ಮಾಣವಾಯಿತು. ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಘೋಷಣೆಗಳು ಮೂಡಿಬಂದವು.
ಷರೀಫ, ಶಾಂತಲಾ ಹೆಸರಲ್ಲಿ ಪ್ರಶಸ್ತಿ
ಬೆಂಗಳೂರು, ನ. 1– ಸರ್ವ ಧರ್ಮ ಸಮನ್ವಯಕ್ಕಾಗಿ ಸಂತ ಶಿಶುನಾಳ ಷರೀಫ್ ಮತ್ತು ನೃತ್ಯಕ್ಕಾಗಿ ನಾಟ್ಯರಾಣಿ ಶಾಂತಲಾ ಹೆಸರಿನಲ್ಲಿ ತಲಾ ಒಂದು ಲಕ್ಷ ನಗದುಳ್ಳ ಪ್ರಶಸ್ತಿಯನ್ನು ಸ್ಥಾಪಿಸಿರುವುದಾಗಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು ರಾಜ್ಯೋತ್ಸವ ದಿನವಾದ ಇಂದು ಪ್ರಕಟಿಸಿದರು.