ನವದೆಹಲಿ, ಜ. 19 (ಪಿಟಿಐ)– ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಮಲಯಾಳಂ ಭಾಷೆಯ ಖ್ಯಾತ ಸಾಹಿತಿ ಮತ್ತು ಮಾತೃಭೂಮಿ ಪ್ರಕಾಶನ ಸಮೂಹದ ಸಂಪಾದಕ ಎಂ.ಟಿ.ವಾಸುದೇವನ್ ನಾಯರ್ ಅವರನ್ನು 1995ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದು 21ನೇ ಜ್ಞಾನಪೀಠ ಪ್ರಶಸ್ತಿಯಾಗಿದ್ದು, ಪ್ರಶಸ್ತಿ 2.5 ಲಕ್ಷ ರೂ. ಮತ್ತು ವಾಗ್ದೇವಿ ಪ್ರತಿಮೆ ಹೊಂದಿದೆ. ನಾಯರ್ ಅವರ 1975–94ರ ನಡುವಿನ ಸೃಜನಶೀಲ ಸಾಹಿತ್ಯ ಬರವಣಿಗೆಯನ್ನು ಗಣನೆಗೆ ತೆಗೆದುಕೊಂಡು ಈ ಪ್ರಶಸ್ತಿ ನೀಡಲಾಗಿದೆ ಎಂದು ‘ಭಾರತೀಯ ಜ್ಞಾನಪೀಠ’ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮೈಸೂರು ಬ್ಯಾಂಕ್ ಪ್ರತ್ಯೇಕಕ್ಕೆ ಸಲಹೆ
ಬೆಂಗಳೂರು, ಜ. 19– ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಎಲ್ಲ ಅಧೀನ ಬ್ಯಾಂಕುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ನಿಂದ ಪ್ರತ್ಯೇಕಿಸಬೇಕು ಮತ್ತು ಅವುಗಳಿಗೆ ಪ್ರತ್ಯೇಕ ಅಧ್ಯಕ್ಷರನ್ನು ನೇಮಿಸಬೇಕು ಎಂದು ಲೋಕಸಭೆಯ ಅಧೀನ ಶಾಸನಗಳ ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ.
ಕೇಂದ್ರ ರೇಷ್ಮೆ ಮಂಡಳಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಸಿಂಡಿಕೇಟ್ ಬ್ಯಾಂಕ್ಗಳ ಕಾರ್ಯವಿಧಾನ ಮತ್ತು ಅವು ಎದುರಿಸುತ್ತಿರುವ ಸಮಸ್ಯೆಗಳಅಧ್ಯಯನ ನಡೆಸಲು ಸಂಸತ್ ಸದಸ್ಯ ಅಮಲ್ ದತ್ತ ಅವರ ನೇತೃತ್ವದಲ್ಲಿ ಸಮಿತಿಯು ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿದೆ.