ದೇಶದಲ್ಲಿ 69 ಕಡೆ ಮರು ಮತದಾನ ನವದೆಹಲಿ, ಏ. 28 (ಯುಎನ್ಐ)– ಶನಿವಾರ ನಡೆದ ಮೊದಲ ಹಂತದ ಮತದಾನದ ವೇಳೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಒಂದು ಮತಗಟ್ಟೆಯೂ ಸೇರಿದಂತೆ ವಿವಿಧ ರಾಜ್ಯಗಳ 69 ಮತಗಟ್ಟೆಗಳಲ್ಲಿ ಏ. 30ರಂದು ಮರು ಮತದಾನ ನಡೆಸುವಂತೆ ಚುನಾವಣಾ ಆಯೋಗ ಇಂದು ಆದೇಶಿಸಿದೆ. ಇದರಲ್ಲಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಸ್ಪರ್ಧಿಸಿರುವ ಆಂಧ್ರ ಪ್ರದೇಶದ ನಂದ್ಯಾಲ ಕ್ಷೇತ್ರದ 17 ಮತಗಟ್ಟೆಗಳೂ ಸೇರಿವೆ.
ಕರ್ನಾಟಕ, ಅಸ್ಸಾಂ, ಹರಿಯಾಣ, ತಮಿಳುನಾಡು, ರಾಜಸ್ಥಾನ, ಆಂಧ್ರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಿನ್ನೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿರುವ ಬಗ್ಗೆ ಆಯಾ ರಾಜ್ಯಗಳ ಚುನಾವಣಾಧಿಕಾರಿಗಳು ಆಯೋಗಕ್ಕೆ ವರದಿ ಮಾಡಿದ್ದಾರೆ ಎಂದು ಆಯೋಗದ ವಕ್ತಾರರು ತಿಳಿಸಿದ್ದಾರೆ.
ಕಡೆಗಣಿಸಿದ ಸಲಹೆ: ಶೇಷನ್ ವಿಷಾದ ನವದೆಹಲಿ, ಏ. 28 (ಪಿಟಿಐ)– ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮಾಡುವ ಚುನಾವಣಾ ವೆಚ್ಚವನ್ನು ಕಡಿಮೆ ಮಾಡಲು ಚುನಾವಣಾ ಕಾನೂನಿಗೆ ತಿದ್ದುಪಡಿ ಮಾಡಬೇಕೆಂದು ಚುನಾವಣಾ ಆಯೋಗ ಮಾಡಿರುವ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಟಿ.ವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.