ನವದೆಹಲಿ, ಮೇ 26 (ಪಿಟಿಐ, ಯುಎನ್ಐ)– ಲೋಕಸಭೆಯಲ್ಲಿ ಬಲಾಬಲ ಪ್ರದರ್ಶನಕ್ಕೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿರುವಾಗ ಬಿಜೆಪಿ ವರಿಷ್ಠ ನಾಯಕರು ಹಿಂಜರಿತದ ಹೇಳಿಕೆಗಳನ್ನು ನೀಡಿದ್ದು, ದೆಹಲಿಯಲ್ಲಿ ಅನಿಶ್ಚಿತ ಸ್ಥಿತಿ ಇನ್ನಷ್ಟು ದಟ್ಟವಾಗಿದೆ.
ಎಲ್ಲ ರಾಷ್ಟ್ರೀಯ ಪಕ್ಷಗಳು ವಿರೋಧ ಮನೋಭಾವ ಕೈಬಿಟ್ಟು ಕೇಂದ್ರದಲ್ಲಿ ಸ್ಥಿರ ಸರ್ಕಾರದ ಅಗತ್ಯದ ಬಗ್ಗೆ ಚಿಂತಿಸಬೇಕು ಎಂದು ಪ್ರಧಾನಿ ವಾಜಪೇಯಿ ಅಮೃತಸರದಲ್ಲಿ ಮನವಿ ಮಾಡಿದರೆ, ವಿಶ್ವಾಸಮತ ದೊರೆಯುವುದು ಖಚಿತವಿಲ್ಲ ಎಂಬುದನ್ನು ಬಿಜೆಪಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಇದೇ ಮೊದಲ ಸಲ ಒಪ್ಪಿಕೊಂಡಿದ್ದಾರೆ. ವಾಜಪೇಯಿ ನೇತೃತ್ವದ ಸರ್ಕಾರ ನಾಳೆ ಲೋಕಸಭೆಯಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸಲಿದೆ.
ನಿರಶನ ನಿಲ್ಲಿಸಲು ಸ್ವಾಮಿಗಳ ನಕಾರ
ಕಲ್ಬುರ್ಗಿ, ಮೇ 26– ತಮ್ಮ ಪ್ರಾಣ ಹೋದರೂ ತಾವು ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರನ್ನಿಡುವ ತನಕ ಆಮರಣಾಂತ ಉಪವಾಸವನ್ನು ಕೈಬಿಡುವುದಿಲ್ಲ ಎಂದು ಇಲ್ಲಿಯ ಕಾರಾಗೃಹದಲ್ಲಿರುವ 14 ಮಂದಿ ವೀರಶೈವ ಸ್ವಾಮೀಜಿಗಳು ಇಂದು ಸ್ಪಷ್ಟಪಡಿಸಿದರು. ಇದರಿಂದಾಗಿ ಪುನರ್ನಾಮಕರಣ ಸಮಸ್ಯೆ ಮತ್ತಷ್ಟು ಜಟಿಲಗೊಂಡಂತಾಗಿದೆ.
ರಾಷ್ಟ್ರೀಯ ಬಸವ ದಳದ ಮುಖ್ಯಸ್ಥೆ ಮಾತೆ ಮಹಾದೇವಿ ಇಂದು ಉಪವಾಸನಿರತರನ್ನು ಭೇಟಿ ಮಾಡಿ, ಈ ಕುರಿತು ನಿರ್ಧಾರ ಕೈಗೊಳ್ಳಲು ಸಮಯ ಕೇಳಿರುವ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯ ಅವರ ಮನವಿಯನ್ನು ರವಾನಿಸಿದರು.