ಬೆಂಗಳೂರು, ಜುಲೈ 14– ಒಂಬತ್ತು ಮಂದಿ ಅರಣ್ಯ ಸಿಬ್ಬಂದಿಯನ್ನು ಅಪಹರಿಸಿ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಕುಖ್ಯಾತ ನರಹಂತಕ–ಕಾಡುಗಳ್ಳ ವೀರಪ್ಪನ್ ವಿಧಿಸಿರುವ ಷರತ್ತಿನಂತೆ ಆತನ ಶರಣಾಗತಿಯನ್ನು ಒಪ್ಪಿಕೊಂಡು, ಜೀವ ರಕ್ಷಣೆ ಮಾಡಲು ರಾಜ್ಯ ಸರ್ಕಾರ ಸಮ್ಮತಿಸಿದೆ.
ವೀರಪ್ಪನ್ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಈ ತೀರ್ಮಾನಕ್ಕೆ ತಮಿಳುನಾಡು ಸರ್ಕಾರವೂ ಒಪ್ಪಿಗೆ ಸೂಚಿಸಿದೆ ಎಂದು, ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಕಾನೂನು ಮತ್ತು ವಾರ್ತಾ ಸಚಿವ ಎಂ.ಸಿ.ನಾಣಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೀರಪ್ಪನ್ ಜೀವಕ್ಕೆ ರಕ್ಷಣೆ ನೀಡಲು ಸರ್ಕಾರ ಕೈಗೊಂಡಿರುವ ತೀರ್ಮಾನ ಪೊಲೀಸ್ ಅಧಿಕಾರಿಗಳ ವಲಯದಲ್ಲಿ ತೀವ್ರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಈ ನಿರ್ಧಾರ ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿಲ್ಲ ಎಂಬುದು ಪೊಲೀಸ್ ಅಧಿಕಾರಿಗಳ ಸ್ಪಷ್ಟ ಅಭಿಪ್ರಾಯ.
ರಾಷ್ಟ್ರಪತಿ ಚುನಾವಣೆ ಶೇಕಡ 95 ಮತದಾನ
ನವದೆಹಲಿ, ಜುಲೈ 14 (ಪಿಟಿಐ)– ದೇಶದ 11ನೇ ರಾಷ್ಟ್ರಪತಿಯ ಆಯ್ಕೆಗಾಗಿ ಇಂದು ದೇಶದಾದ್ಯಂತ ನಡೆದ ಚುನಾವಣೆಯಲ್ಲಿ ಶೇಕಡ 95ರಷ್ಟು ಮತದಾನವಾಗಿದೆ.
ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಉಪರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರಿಗೆ ಬೆಂಬಲ ಸೂಚಿಸಿರುವ ಹಿನ್ನೆಲೆ ಯಲ್ಲಿ ಅವರು ಅತ್ಯುನ್ನತ ಹುದ್ದೆಗೆ ಆಯ್ಕೆಯಾಗುವುದು ಖಚಿತವಾಗಿದೆ.