ಇಸ್ಲಾಮಾಬಾದ್, ಸೆಪ್ಟೆಂಬರ್ 7 (ಪಿಟಿಐ)– ಪರಮಾಣು ಅಸ್ತ್ರಗಳನ್ನು ತಯಾರಿಸುವ ಸಾಮರ್ಥ್ಯ ತಮ್ಮ ದೇಶಕ್ಕಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಬಹಿರಂಗವಾಗಿ ಘೋಷಿಸಿದ್ದಾರೆ.
‘ಪಾಕಿಸ್ತಾನ ಪರಮಾಣು ಅಸ್ತ್ರಗಳನ್ನು ತಯಾರಿಸಬಹುದಾದಂಥ ತಂತ್ರಜ್ಞಾನ ಸಾಮರ್ಥ್ಯ ಹೊಂದಿದೆ ಎಂಬುದು ಈಗಾಗಲೇ ತಿಳಿದಿರುವ ಸಂಗತಿ. ಆ ಬಗ್ಗೆ ಚರ್ಚೆ ನಿಲ್ಲಬೇಕು’ ಎಂದು ಅವರು ಹೇಳಿದ್ದಾರೆ.
1965ರಲ್ಲಿ ನಡೆದ ಭಾರತ– ಪಾಕಿಸ್ತಾನ ಯುದ್ಧದ ಸ್ಮರಣಾರ್ಥ ಲಾಹೋರಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ರಕ್ಷಣಾ ದಿನ’ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಾರ್ವಭೌಮ ರಾಷ್ಟ್ರವಾಗಿ ನಮ್ಮ ಬಳಿ ಏನಿದೆಯೋ ಅದು ನಮ್ಮ ಹಕ್ಕು’ ಎಂದರು.
l ಬೆಳಗಾವಿ ಜಿಲ್ಲೆ ವಿಭಜನೆ ನಿರ್ಣಯಕ್ಕೆ ನಿಲುಗಡೆ
ಬೆಳಗಾವಿ, ಸೆಪ್ಟೆಂಬರ್ 7– ಜಿಲ್ಲೆಯನ್ನು ವಿಭಜಿಸಿ ಮೂರು ಜಿಲ್ಲೆಗಳನ್ನು ರಚಿಸುವ ಕುರಿತು ತಾನು ತೆಗೆದುಕೊಂಡಿದ್ದ ನಿರ್ಣಯಕ್ಕೆ ಸರ್ಕಾರ ಇಂದು ನಿಲುಗಡೆ ಹೇಳಿದೆ.
‘ವಿಧಾನಸಭೆ ಉಪಾಧ್ಯಕ್ಷ ಚಂದ್ರಶೇಖರ ಮಾಮನಿ ಅವರು ಜಿಲ್ಲೆಯ ಜನತೆಗೆ ಈ ನಿಲುಗಡೆ ವಿಚಾರ ತಿಳಿಸಬೇಕು’ ಎಂದು ಸೂಚಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಇಂದು ಫ್ಯಾಕ್ಸ್ ಸಂದೇಶ ತಲುಪಿದೆ.