ನವದೆಹಲಿ, ಅ. 8 (ಯುಎನ್ಐ)– ಪ್ರಮುಖ ಬೆಳವಣಿಗೆಯೊಂದರಲ್ಲಿ 133 ಕೋಟಿ ರೂಪಾಯಿಯ ಯೂರಿಯ ಹಗರಣಕ್ಕೆ ಸಂಬಂಧಪಟ್ಟ 27 ಕೋಟಿ ರೂಪಾಯಿ ಹಣವನ್ನು ತುರ್ಕಿ ದೇಶದ ಕರ್ಸನ್ ಸಂಸ್ಥೆಯ ಇಬ್ಬರು ಅಧಿಕಾರಿಗಳ ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಸಿಬಿಐ ಪತ್ತೆ ಮಾಡಿದೆ.
ಕಿಕ್ಕಿರದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ ಸಿಬಿಐಯ ನಿರ್ದೇಶಕ ಜೋಗಿಂದರ್ ಸಿಂಗ್ ಅವರು ಈ ಹಣವನ್ನು ಮರಳಿಸುವಂತೆ ಸ್ವಿಸ್ ಅಧಿಕಾರಿಗಳಿಗೆ ಔಪಚಾರಿಕ ಕೋರಿಕೆ ಸಲ್ಲಿಸಲಾಗಿದೆ. ನವೆಂಬರ್ ಅಂತ್ಯದಲ್ಲಿ ಈ ಹಣ ಬಿಡುಗಡೆಯಾಗುವುದನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಅತಿವೃಷ್ಟಿ: 50 ಕೋಟಿ ಪರಿಹಾರಕ್ಕೆ ಮನವಿ
ಮೈಸೂರು, ಅ. 8– ಅತಿವೃಷ್ಟಿಯಿಂದಾಗಿ ಕರ್ನಾಟಕದಲ್ಲಾಗಿರುವ ನಷ್ಟಕ್ಕೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರವನ್ನು ಐವತ್ತು ಕೋಟಿ ರೂ. ನೀಡುವಂತೆ ಕೋರಲಾಗಿದೆ ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಇಂದಿಲ್ಲಿ ತಿಳಿಸಿದರು.