ರಾಷ್ಟ್ರೀಯ– ಎಡರಂಗಕ್ಕೆ ಕಾಂಗೈ ಹೊರಗಿನಿಂದ ಬೆಂಬಲ ನವದೆಹಲಿ, ಮೇ 12 (ಪಿಟಿಐ, ಯುಎನ್ಐ)– ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರುವುದನ್ನು ತಪ್ಪಿಸಲು ‘ಜಾತ್ಯತೀತ ಸರ್ಕಾರ’ ರಚನೆಗೆ ಹೊರಗಿನಿಂದ ಬೆಂಬಲ ನೀಡಲು ಕಾಂಗೈ ಕಾರ್ಯಕಾರಿಣಿ ಸಭೆ ಇಂದು ತೀರ್ಮಾನ ಕೈಗೊಂಡಿದೆ.
ಪ್ರಧಾನಿ ಹಾಗೂ ಕಾಂಗೈ ಪಕ್ಷದ ಅಧ್ಯಕ್ಷರೂ ಆದ ಪಿ.ವಿ.ನರಸಿಂಹ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಹಿರಿಯ ನಾಯಕ ಕೆ. ಕರುಣಾಕರನ್, ‘ರಾಷ್ಟ್ರೀಯ ಹಾಗೂ ಎಡರಂಗ ಸರ್ಕಾರ ರಚನೆ ಮಾಡಲು ಹೊರಗಿನಿಂದ ಬೆಂಬಲ ನೀಡಲು ನಾವು ನಿರ್ಧರಿಸಿದ್ದೇವೆ. ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರಲು ಅವಕಾಶ ನೀಡಬಾರದು ಎಂಬುದು ನಮ್ಮ ಆಶಯವಾಗಿದೆ’ ಎಂದರು.
ಕಾಂಗೈ ನಾಯಕರಾಗಿ ರಾವ್ ಆಯ್ಕೆ ನವದೆಹಲಿ, ಮೇ 12– ಚುನಾವಣೆಯಲ್ಲಿನ ಸೋಲಿನಿಂದಾಗಿ ಈಗಿನ ನಾಯಕತ್ವದ ಬಗೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದರ ನಡುವೆಯೂ ಇಂದು ಸಂಜೆ ಕಾಂಗ್ರೆಸ್ ಸಂಸದೀಯ ಪಕ್ಷವು ಪಿ.ವಿ.ನರಸಿಂಹ ರಾವ್ ಅವರನ್ನು ಮತ್ತೆ ಒಮ್ಮತದ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ ಪಕ್ಷದಲ್ಲಿ ಏಕತೆಯನ್ನು ಪ್ರದರ್ಶಿಸಿತು.
ಪಕ್ಷದ ನೂತನ ಲೋಕಸಭೆ ಸದಸ್ಯರು ಮತ್ತು ರಾಜ್ಯಸಭೆ ಸದಸ್ಯರು ಒಮ್ಮತದಿಂದ ರಾವ್ ಅವರನ್ನು ಮತ್ತೆ ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿದರು.