‘ಉಂಡ ಮನೆಗೆ ಎರಡು ಬಗೆದವರು ಶಾಸಕ ಸ್ಥಾನ ತ್ಯಜಿಸಲಿ’
ಬೆಂಗಳೂರು, ಸೆ. 1– ಜನತಾ ದಳ ತೊರೆದ ಆರು ಮಂದಿ ವಿಧಾನ ಪರಿಷತ್ತಿನ ಸದಸ್ಯರನ್ನು ತರಾಟೆಗೆ ತೆಗೆದುಕೊಂಡು ಅವರ ರಾಜೀನಾಮೆಗೆ ಸೂಚಿಸಿದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ‘ಈ ರೀತಿ ರಾಜಕೀಯ ವ್ಯಭಿಚಾರಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಪ್ರೋತ್ಸಾಹ ನೀಡಬಾರದಿತ್ತು’ ಎಂದು ಕಟುವಾಗಿ ಟೀಕಿಸಿದರು.
‘ವಿಧಾನಸಭೆಯಲ್ಲಿ ಸರ್ಕಾರವನ್ನು ಬೀಳಿಸಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ಎಲ್ಲ ವಿರೋಧ ಪಕ್ಷಗಳು ಸೇರಿ ಕೊಂಡರೂ ಇದು ಸಾಧ್ಯವಿಲ್ಲ’ ಎಂದು ಹೇಳಿದರು.
ದೆಹಲಿಯಿಂದ ನಗರಕ್ಕೆ ಬೆಳಿಗ್ಗೆ ಬಂದ ಮುಖ್ಯಮಂತ್ರಿ ಅವರು ತಮ್ಮ ನಿವಾಸದಲ್ಲಿ ಭೇಟಿ ಆದ ಪತ್ರಕರ್ತರೊಂದಿಗೆ ಮಾತನಾಡಿ, ವೇದಿಕೆಗೆ ಸೇರಿದ ಶಾಸಕರನ್ನು ‘ಉಂಡ ಮನೆಗೆ ಎರಡು ಬಗೆಯುವವರು’ ಎಂದು ಕರೆದರು. ಅವರೆಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸೂಚಿಸಿದರು.
ಹೊರ್ತಿ, ಚಿಕ್ಕೋಡಿಯಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಕೇಂದ್ರ
ಬೆಂಗಳೂರು, ಸೆ. 1– ಗಾಳಿಯ ಮೂಲಕ ವಿದ್ಯುತ್ ಉತ್ಪಾದಿಸಲು ಇಂಡಿ ತಾಲ್ಲೂಕಿನ ಹೊರ್ತಿ ಮತ್ತು ಬೆಳಗಾವಿ ಸಮೀಪದ ಚಿಕ್ಕೋಡಿ ಕೇಂದ್ರಗಳನ್ನು ಗುರುತಿಸಲಾಗಿದೆ.
ಕರ್ನಾಟಕ ವಿದ್ಯುತ್ ಮಂಡಳಿಯ ಸ್ಥಾನದಲ್ಲಿ ‘ಬದಲಿ ಇಂಧನ ಮೂಲ ಮತ್ತು ಮರುಬಳಕೆ ಇಂಧನ ಅಭಿವೃದ್ಧಿ’ಗಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ನಿಯಂತ್ರಣ ಕೇಂದ್ರವಾಗಿ ನೇಮಿಸಿರುವ ‘ರಾಜ್ಯ ಬದಲಿ ಇಂಧನ ಅಭಿವೃದ್ಧಿ ಸಂಸ್ಥೆ’ಯ (ಕೆಆರ್ಇಡಿಎಲ್) ಮೊದಲ ಪ್ರಯತ್ನ ಇದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.