ನವದೆಹಲಿ, ಜೂನ್ 8 (ಪಿಟಿಐ)– ಕಾಂಗ್ರೆಸ್ ಪಕ್ಷದಲ್ಲಿ ವರ್ಚಸ್ವಿ ಮುಖಂಡರ ಯುಗ ಕೊನೆಗೊಂಡ ನಂತರ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕಳೆದ ಎರಡು ದಶಕಗಳಲ್ಲಿ ಮೊದಲ ಬಾರಿಗೆ ನೇರ ಚುನಾವಣೆ ನಡೆಯುತ್ತಿದ್ದು, ಪಕ್ಷದ ಪ್ರತಿನಿಧಿಗಳು ನಾಳೆ ನೂತನ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.
ಸ್ಪರ್ಧೆ ತಪ್ಪಿಸಿ ಸರ್ವಸಮ್ಮತ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡುವ ಪಕ್ಷದ ಕೆಲವು ನಾಯಕರ ಪ್ರಯತ್ನಗಳು ವಿಫಲವಾಗಿವೆ. ಸೀತಾರಾಮ ಕೇಸರಿ, ಶರದ್ ಪವಾರ್ ಹಾಗೂ ರಾಜೇಶ್ ಪೈಲಟ್ ಸ್ಪರ್ಧೆಯಲ್ಲಿದ್ದಾರೆ. ದೇಶದಾದ್ಯಂತ ಪಕ್ಷದ ಕೇಂದ್ರ ಕಚೇರಿಗಳಲ್ಲಿ ಚುನಾವಣೆ ನಡೆಯಲಿದೆ.
ಗದಗ ಜಿಲ್ಲೆ ವ್ಯಾಪ್ತಿಗೆ ನರಗುಂದ ವಿರೋಧಿಸಿ ಆತ್ಮಾಹುತಿಗೆ ಯತ್ನ ನವಲಗುಂದ, ಜೂನ್ 8– ನರಗುಂದ ತಾಲ್ಲೂಕನ್ನು ಗದಗ ಜಿಲ್ಲೆಗೆ ಸೇರಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ತಾಲ್ಲೂಕಿನಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.
ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ತಾಲ್ಲೂಕಿನ ಎನ್.ಎಸ್.ಯು.ಐ ಘಟಕದ ಕಾರ್ಯಕರ್ತರೊಬ್ಬರು ನಿನ್ನೆ ತಹಸೀಲ್ದಾರ ಕಚೇರಿಯ ಎದುರು ನೇಣು ಹಾಕಿಕೊಂಡು ಆತ್ಮಾಹುತಿಗೆ ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು.