ಬೇರೆ ಭೂಮಿ ಇದ್ದವರಿಗೆ ಗೇರು ಸಾಗುವಳಿಗೆ ಜಮೀನು ಮಂಜೂರಾತಿ ಪ್ರತಿಬಂಧಿಸಿ ಕ್ರಮ
ಬೆಂಗಳೂರು, ಜುಲೈ 14– ಬೇರೆ ಜಮೀನು ಇದ್ದವರಿಗೆ ಗೇರು ಸಾಗುವಳಿಗೆ ಜಮೀನು ಮಂಜೂರು ಮಾಡುವುದನ್ನು ನಿರ್ಬಂಧಿಸಲು ಭೂ ಹಂಚಿಕೆ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ಮಾಡುವ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ.
ಪ್ರಸಕ್ತ ಭೂ ಹಂಚಿಕೆ ನಿಯಮಗಳ ಪ್ರಕಾರ, ಬೇರೆ ಜಮೀನು ಇದ್ದವರಿಗೆ ಒಟ್ಟು 10 ಹೆಕ್ಟೇರುಗಳಿಗೆ ಮೀರದಂತೆ ಗೇರು ಸಾಗುವಳಿಗೆ ಜಮೀನನ್ನು ಮಂಜೂರು ಮಾಡಬಹುದು.
ಈ ವಿಷಯವನ್ನು ವಿಧಾನಸಭೆಯಲ್ಲಿ ಕಂದಾಯ ಸಚಿವ ಶ್ರೀ ಎನ್.ಹುಚ್ಚಮಾಸ್ತಿಗೌಡ ಅವರು ಶ್ರೀ ಕಾಗೋಡು ತಿಮ್ಮಪ್ಪ ಅವರಿಗೆ ತಿಳಿಸಿದರು.
ರಾಜ್ಯ ಸರ್ಕಾರದಿಂದ ಅರಮನೆ, ಜಮೀನಿನ ಕ್ರಯ
ಬೆಂಗಳೂರು, ಜುಲೈ 14– ಮೈಸೂರಿನ ಮಾಜಿ ಮಹಾರಾಜರಿಗೆ ಸೇರಿದ ಬೆಂಗಳೂರು ಅರಮನೆ ಹಾಗೂ 600 ಎಕರೆ ಭೂಮಿ, ಮೈಸೂರಿನಲ್ಲಿರುವ ಪ್ಯಾಲೆಸ್ ಕಚೇರಿ ಹಾಗೂ 800 ಎಕರೆ ಜಮೀನನ್ನು ರಾಜ್ಯ ಸರ್ಕಾರ ಕೊಳ್ಳಲಿದೆ.
ಇಂದು ಬೆಳಿಗ್ಗೆ ನಡೆದ ವಿಧಾನ ಮಂಡಲದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಸರ್ಕಾರದ ಈ ಆಲೋಚನೆಯನ್ನು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ತಿಳಿಸಿದರು. ಈ ಬಗ್ಗೆ ಚರ್ಚೆ ನಡೆದು ಸರ್ಕಾರದ ಈ ಸಲಹೆಯನ್ನು ಪಕ್ಷ ಒಪ್ಪಿತು.