ಬೆಂಗಳೂರು, ಸೆಪ್ಟೆಂಬರ್ 29– ಬೆಲೆ ಏರಿಕೆಯಿಂದ ಜೀವನ ದುಸ್ಸಹವಾಗಿರುವುದರಿಂದ ಕೇಂದ್ರ ಸರ್ಕಾರದ ನೌಕರರಿಗೆ ನೀಡಿದಂತೆ ತುಟ್ಟಿಭತ್ಯೆ ಏರಿಸಬೇಕೆಂಬ ತಮ್ಮ ಮನವಿಗೆ ಸರ್ಕಾರ ಲಕ್ಷ್ಯ ನೀಡದಿರುವುದನ್ನು ಪ್ರತಿಭಟಿಸಲು ರಾಜ್ಯ ಸರ್ಕಾರದ ಬಹುತೇಕ ನೌಕರರು ಇಂದು ವೇತನವನ್ನು ನಿರಾಕರಿಸಿದರೆಂದು ವರದಿಯಾಗಿದೆ.
ಅಕ್ಟೋಬರ್ 1 ಮತ್ತು 2ನೇ ತಾರೀಕು ರಜಾ ದಿನಗಳಾದ್ದರಿಂದ ಸೆಪ್ಟೆಂಬರ್ ತಿಂಗಳ ಸಂಬಳವನ್ನು ಸರ್ಕಾರ ಇಂದು ಮತ್ತು ನಾಳೆ ನೀಡುವ ವ್ಯವಸ್ಥೆ ಮಾಡಿತ್ತು. ಮೈಸೂರು ರಾಜ್ಯ ನೌಕರರ ಸಂಘವು ಅಕ್ಟೋಬರ್ ಮೂರನೇ ತಾರೀಕಿನವರೆಗೆ ಸಂಬಳವನ್ನು ನಿರಾಕರಿಸ ಬೇಕೆಂದು ತನ್ನ ಸದಸ್ಯರಿಗೆ ಕರೆ ನೀಡಿತ್ತು.