ಬೆಂಗಳೂರು, ಮೇ 29– ಗೇಣಿದಾರರ ಮೇಲೆ ಮಲೆನಾಡಿನಲ್ಲಿ ಭೂ ಮಾಲೀಕರು ದೌರ್ಜನ್ಯ ನಡೆಸಿದ್ದಾರೆಂದು ಶ್ರೀ ಕೋಣಂದೂರು ಲಿಂಗಪ್ಪ (ಸಮಾಜವಾದಿ) ಅವರು ಇಂದು ವಿಧಾನಸಭೆಯಲ್ಲಿ ಆಪಾದಿಸಿದರು.
ಪೊಲೀಸರು ಭೂ ಮಾಲೀಕರಿಗೆ ಸಹಾಯಕರಾಗಿ ಹೆಂಗಸರು, ಮಕ್ಕಳನ್ನು ಬಂಧಿಸಿದ್ದಾರೆಂದು ಅವರು ಹೇಳಿ ಅದನ್ನು ಸರ್ಕಾರದ ಗಮನಕ್ಕೆ ತಂದರು.
ಶ್ರೀ ಹುಚ್ಚಮಾಸ್ತಿಗೌಡ: ವಿವರಗಳನ್ನು ಕಳುಹಿಸಿಕೊಟ್ಟರೆ ಅಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವೆ.
ಶ್ರೀ ಜಯಪ್ರಕಾಶ್ ನಾರಾಯಣ್: ಉತ್ತರ ಕನ್ನಡ ಜಿಲ್ಲೆಯಲ್ಲೂ ಅದೇ ಪರಿಸ್ಥಿತಿ, ಒಂದು ಸರ್ಕ್ಯುಲರ್ ಹೊರಡಿಸಿ.
ಸಚಿವರು: ಸರ್ಕ್ಯುಲರ್ ಕಳುಹಿಸಿದೆ. ಜಿಲ್ಲಾಧಿಕಾರಿಗಳೇ ಖುದ್ದು ಪರಿಶೀಲನೆ ಮಾಡಿ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿ ಮೇಲೆ ಕ್ರಮ ತೆಗೆದುಕೊಂಡು ಗೇಣಿದಾರರು ಪುನಃ ತಮ್ಮ ಜಮೀನಿಗೆ ಹಿಂದಿರುಗುವಂತೆ ಮಾಡಲು ತಿಳಿಸಲಾಗಿದೆ.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಇಂದು ಇದರ ಜೊತೆಗೆ ಇನ್ನೂ ಹಲವು ಅಹವಾಲುಗಳು ಬಂದವು.
ಶ್ರೀ ಮಂಜುನಾಥ್: ಇನಾಂ ರದ್ದಿಯಾತಿ ಕಾಯ್ದೆ ಜಾರಿಗೆ ಬಂದ ಮೇಲೆ ನಮ್ಮ ತಾಲೂಕಿನಲ್ಲಿ ರೈತರಿಗೆ ಕಿರುಕುಳ ಜಾಸ್ತಿಯಾಗಿದೆ.