ರಾಜ್ಯದ 13 ಲೋಕಸಭಾ ಕ್ಷೇತ್ರಗಳಲ್ಲಿ ಶೇ 50ರಿಂದ 60ರಷ್ಟು ಮತದಾನ
ಬೆಂಗಳೂರು, ಮಾರ್ಚ್ 4– ರಾಜ್ಯದ ಹದಿಮೂರು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದು ಶೇಕಡ 50ರಿಂದ 60ರಷ್ಟು ಮತದಾರರು ಮತ ಚಲಾಯಿಸಿರುವುದಾಗಿ ವರದಿಗಳು ಬಂದಿವೆ.
ಮತದಾನ ಎಲ್ಲ ಕಡೆಯೂ ಶಾಂತ ರೀತಿಯಿಂದ ನಡೆಯಿತೆಂದು ರಾಜ್ಯದ ಚುನಾವಣಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದಲ್ಲಿ ಪ್ರಚಾರದ ಬಿಸಿ ಏರಿಕೆ
ಬೆಂಗಳೂರು, ಮಾರ್ಚ್ 4– ಬಹಿರಂಗ ಪ್ರಚಾರ ನಿಲ್ಲಲು ಇನ್ನು ಒಂದು ದಿನವಿರುವ ಮುನ್ನ ಬೆಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರದ ಬಿಸಿ ಏರಿತು.
ಧ್ವನಿವರ್ಧಕ ಯಂತ್ರಗಳ ಮೂಲಕ ಮತದಾರರಿಗೆ ಮನವಿ, ಅಭ್ಯರ್ಥಿಗಳ ಪರ ಮೆರವಣಿಗೆಗಳು ನಡೆದವು.
ಮಧ್ಯಾಹ್ನ ಆಡಳಿತ ಕಾಂಗ್ರೆಸ್ ಪರವಾಗಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಆಡಳಿತ ಕಾಂಗ್ರೆಸ್ಸಿನ ಚುನಾವಣೆ ಸಂಕೇತವಾದ ಹಸು–ಕರುವಿನ ಭಾರಿ ಆಕೃತಿಯನ್ನು ಲಾರಿಯಲ್ಲಿಟ್ಟು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಸಂಜೆ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಭಾರಿ ಬಹಿರಂಗ ಸಭೆಯನ್ನುದ್ದೇಶಿಸಿ ಭಾರತೀಯ ಜನಸಂಘದ ಅಧ್ಯಕ್ಷ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಭಾಷಣ ಮಾಡಿ, ಜನಸಂಘದ ಅಭ್ಯರ್ಥಿ ಶ್ರೀ ಗೋಪಾಲಕೃಷ್ಣ ಅಡಿಗ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದರು.