ಬೆಂಗಳೂರು, ಜೂನ್ 14– ಜಗತ್ತಿನಲ್ಲಿ ಸಣ್ಣ ವಿಚಾರಕ್ಕೂ ಯುವಜನರು ಅಶಿಸ್ತಿನಿಂದ ವರ್ತಿಸುವುದಕ್ಕೆ ಶಾಲಾ ಕಾಲೇಜುಗಳಲ್ಲಿ ಗುರು–ಶಿಷ್ಯ ಸಂಪರ್ಕ ಸರಿಯಾಗಿ ಇಲ್ಲದೆ ಅವರಿಗೆ ಸೂಕ್ತ ಮಾರ್ಗದರ್ಶನ ದೊರಕದಿರುವುದೇ ಕಾರಣವೆಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಇಲ್ಲಿ ನುಡಿದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಮಂದಿರದಲ್ಲಿ ಪ್ರಥಮ ಏಷ್ಯನ್ ಶಿಕ್ಷಕ ಬೋಧಕರ ಸಮ್ಮೇಳನವನ್ನು ಉದ್ಘಾ ಟಿಸಿದ ಅವರು ವಿಜ್ಞಾನದ ಲೇಪ ಹೊಂದಿ ಮಾನವತೆ ಭಾವನೆ ಮತ್ತು ಪ್ರಜಾಸತ್ತಾತ್ಮಕ ಧ್ಯೇಯಗಳನ್ನು ಮಕ್ಕಳಲ್ಲಿ ರೂಪಿಸುವ ಶಿಕ್ಷಣ ಕ್ರಮದ ಅಗತ್ಯ ಒತ್ತಿಹೇಳಿದರು. ಮಕ್ಕಳಿಗೆ ಮಾರ್ಗದರ್ಶನ ನೀಡುವ ಹೊಣೆ ಗುರುವಿನ ಮೇಲಿದೆಯೆಂದ ಅವರು ಹಿಂದೆ ಭಾರತದಲ್ಲಿದ್ದ ಗುರುಕುಲ ಪದ್ಧತಿಯನ್ನು ಸ್ಮರಿಸಿದರು.
ಹೇಮಾವತಿ ಜಲಾಶಯ: ಪರಮಾವಧಿ ಪ್ರಮಾಣದ ನೀರು ಸಂಗ್ರಹಕ್ಕೆ ನಿರ್ಧಾರ
ಬೆಂಗಳೂರು, ಜೂನ್ 14– ನಿರ್ಮಾಣವಾಗುತ್ತಿರುವ ಹೇಮಾವತಿ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯವನ್ನು 34 ಸಹಸ್ರ ದಶಲಕ್ಷ ಘನ ಅಡಿಗಳಷ್ಟಕ್ಕೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕೆಲವು ಕೋಟಿ ರೂಪಾಯಿ ಹೆಚ್ಚು ಖರ್ಚಿನಿಂದ ಪರಮಾವಧಿ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಲು ಜಲಾಶಯದ ಸಾಮರ್ಥ್ಯ ಹೆಚ್ಚಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆಯೆಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ತಿಳಿಸಿದರು.