ಮುಂಬಯಿ, ಜ. 23– 1971ನೇ ಸಾಲಿನ ಅತ್ಯುತ್ತಮ ಕನ್ನಡ ಚಲನಚಿತ್ರ ‘ಸಂಸ್ಕಾರ’ ಇಂದು ರಾಷ್ಟ್ರಪತಿ ಚಿನ್ನದ ಪದಕವನ್ನು ಸ್ವೀಕರಿಸಿತು. ಇದರ ನಿರ್ಮಾಪಕ ನಿರ್ದೇಶಕರು ಶ್ರೀ ಟಿ.ಪಟ್ಟಾಭಿ ರಾಮರೆಡ್ಡಿ ಅವರು. ಈ ಚಿತ್ರವನ್ನು ಇಂಗ್ಲಿಷ್ ಭಾಷೆಗೂ ಅಳವಡಿಸಲಾಗಿದೆ.
ರಾಜ್ಯಗಳಿಗೆ ಹೆಚ್ಚಿನ ಅಧಿಕಾರಕ್ಕಾಗಿ ಕೇಂದ್ರಕ್ಕೆ ಸೋಷಲಿಸ್ಟ್ರ ಒತ್ತಾಯ
ಬೆಂಗಳೂರು, ಜ. 23– ಅತಿ ಕೇಂದ್ರೀಕರಣ ವನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿರುವ ಸೋಷಲಿಸ್ಟ್ ಪಕ್ಷ, ‘ಭಾರತದ ಭದ್ರತೆ, ಸಮಗ್ರತೆ, ರಾಷ್ಟ್ರೀಯತೆ ಮತ್ತು ಆರ್ಥಿಕ ವಿಕಾಸಗಳಿಗೆ ಧಕ್ಕೆ ಬಾರದ ರೀತಿ ಯಲ್ಲಿ ಕರ್ನಾಟಕ ಸ್ವಾಯತ್ತವಾಗಬೇಕು’ ಎಂದು ಪ್ರತಿಪಾದಿಸಿದೆ.
ಕರ್ನಾಟಕ ಸೋಷಲಿಸ್ಟ್ ಪಕ್ಷ ಅಖಿಲ ಭಾರತ ಪಕ್ಷದ ಚುನಾವಣೆ ಘೋಷಣೆಗೆ ಪೂರಕವಾಗಿ ಹೊರಡಿಸಿರುವ ಚುನಾವಣೆ ಘೋಷಣೆಯಲ್ಲಿ ರಾಜ್ಯದ ಹಲವು ವಿಶಿಷ್ಟವಾದ ಸಮಸ್ಯೆಗಳನ್ನು ಕುರಿತು ಕೆಲವು ಪರಿಹಾರ ಕ್ರಮಗಳನ್ನು ಸೂಚಿಸಿದೆ.