ಮೈಸೂರು, ಮೇ 6– ಇಷ್ಟು ವರ್ಷ ‘ಕರ್ಣಾಟಕ, ಕರ್ಣಾಟಕ’ ಎಂದು ಕೂಗಿದ್ದಕ್ಕೆ ಈಗ ಖಾತರಿಯಾಯಿತು, ರಾಜ್ಯದ ಹೆಸರು ಬದಲಾಗುವುದು ಎಂದು– ಇದು ರಾಷ್ಟ್ರಕವಿ ಕುವೆಂಪು ಅವರ ಸಂತೋಷದ ನುಡಿ.
‘ಕರ್ಣಾಟಕ, ಕರ್ನಾಟಕ’– ಎರಡೂ ಒಂದೇ. ಯಾರು ಹೇಗೆ ಬೇಕಾದರೂ ಕರೆಯಲಿ ಎಂದ ಅವರು, ರಾಜ್ಯದ ಹೆಸರು ಬದಲಾಯಿಸಲು ತೀರ್ಮಾನ ಕೈಗೊಂಡ ಸಚಿವ ಸಂಪುಟವನ್ನು ಅಭಿನಂದಿಸಿದರು.
‘ಕರ್ಣಾಟಕ’ ಹೆಸರಿಗೆ ಸರ್ವರೂ ಬೆಂಬಲ ನೀಡಿ, ‘ಕರ್ಣಾಟಕ ಜಯಹೇ’ ಸಾರ್ಥಕ ಗೊಳಿಸಲಿ ಎಂದು ಅವರು ಆಶಿಸಿದರು.
ತಿತ್ವಾಲ್ ವಿಭಾಗದ ಕೈಯಾನ್ ಪ್ರದೇಶದಲ್ಲಿ ಕದನ ವಿರಾಮಕ್ಕೆ ಆಜ್ಞೆ
ನವದೆಹಲಿ, ಮೇ 6– ಕಾಶ್ಮೀರದ ತಿತ್ವಾಲ್ ವಿಭಾಗದ ಕೈಯಾನ್ ಪ್ರದೇಶದಲ್ಲಿ ಕದನ ವಿರಾಮಕ್ಕೆ ಆಜ್ಞೆ ಮಾಡಲಾಗಿದೆ. ಈ ದಿನ ಬೆಳಿಗ್ಗೆಯೂ ಈ ಪ್ರದೇಶದಲ್ಲಿ ಹೋರಾಟ ಮುಂದುವರಿದಿತ್ತು. ತತ್ಕ್ಷಣದಿಂದ ಹೋರಾಟವನ್ನು ನಿಲ್ಲಿಸಬೇಕೆಂದು ಭಾರತ ಮತ್ತು ಪಾಕ್ ಸೇನಾ ಪ್ರಧಾನ ಕಚೇರಿಗಳು ಇಂದು ರಾತ್ರಿ ಆಜ್ಞೆ ಮಾಡಿದವು.