ಸಂಸತ್ ಸಮಿತಿ ತನಿಖೆ ಇಲ್ಲ: ವಿರೋಧ ಪಕ್ಷಗಳ ತೀಕ್ಷ್ಣಟೀಕೆ, ಸಭಾತ್ಯಾಗ
ನವದೆಹಲಿ, ಮೇ 30– ದೆಹಲಿ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಶಾಖೆಗೆ 60 ಲಕ್ಷ ರೂ. ವಂಚನೆ ಮಾಡಿದ ನಗರವಾಲಾ ಪ್ರಕರಣದ ತನಿಖೆಗೆ ಸರ್ವ ಪಕ್ಷಗಳ ಸಂಸತ್ ಸಮಿತಿ ನೇಮಿಸಬೇಕೆಂಬ ತಮ್ಮ ಒತ್ತಾಯವನ್ನು ಸರ್ಕಾರ ತಳ್ಳಿಹಾಕಿದ್ದರಿಂದ ಇಡೀ ವಿರೋಧ ಪಕ್ಷದ ಸದಸ್ಯರು ಇಂದು ಲೋಕಸಭೆಯಲ್ಲಿ ಸಭಾತ್ಯಾಗ ಮಾಡಿದರು.
ಈ ವಿವಾದದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅರ್ಥ ಸಚಿವ ವೈ.ಬಿ.ಚವಾಣ್, ತನಿಖೆಗಾಗಿ ಸಂಸತ್ ಸಮಿತಿ ರಚನೆ ಇಲ್ಲಾ... ಇಲ್ಲಾ ಎಂದು ಹೇಳಿದರು.
ನಗರವಾಲಾ ಅವರು ರಹಸ್ಯ ಸೇವಾ ವ್ಯವಸ್ಥೆಯೊಂದರ ಹರಿಕಾರರಾಗಿದ್ದರೆಂದು ಮಾರ್ಕ್ಸಿಸ್ಟ್ ಸದಸ್ಯ ಜೋತಿರ್ಮಯಿ ಬಸು ಅವರು ಆಪಾದಿಸಿದರು.
ಐವತ್ತೇ ಹುದ್ದೆಗೆ ಸಹಸ್ರಾರು ಅರ್ಜಿ
ನವದೆಹಲಿ, ಮೇ 30– ರಿಸರ್ವ್ ಬ್ಯಾಂಕಿನ ದೆಹಲಿ ಕಚೇರಿಯಲ್ಲಿ 50 ಮಂದಿ ಗುಮಾಸ್ತರ ಕೆಲಸಕ್ಕೆ ಸುಮಾರು ಮಂದಿ ಪದವೀಧರರು ಅರ್ಜಿ ಹಾಕಿದ್ದಾರೆ.
ರಾಜ್ಯಸಭೆಯಲ್ಲಿ ಈ ವಿಷಯವನ್ನು ತಿಳಿಸಿದ ಹಣಕಾಸು ಸಚಿವ ಚವಾಣರು ‘ಸುಶಿಕ್ಷಿತರಲ್ಲಿ ಇಷ್ಟು ಬೃಹತ್ ಪ್ರಮಾಣದಲ್ಲಿರುವ ನಿರುದ್ಯೋಗ ಸಮಸ್ಯೆ’ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.