ಬೆಂಗಳೂರು, ಜೂನ್.3– ಆಗಾಗ ದೇಶದ ಹಲವೆಡೆಗಳಲ್ಲಿ ವಿವಿಧ ರೂಪಗಳಲ್ಲಿ ತಲೆಹಾಕುತ್ತಿರುವ ಕೋಮ ಗಲಭೆಗಳನ್ನು ಹತ್ತಿಕ್ಕುವಲ್ಲಿ ಪೊಲೀಸ್ ಮತ್ತು ನ್ಯಾಯ ಇಲಾಖೆಗಳು ಬಿಗಿಯಿಂದ ವರ್ತಿಸಬೇಕಾದ ಅಗತ್ಯವನ್ನು ಕೇಂದ್ರವು ರಾಜ್ಯ ಸರ್ಕಾರಗಳಿಗೆ ಮನಗಾಣಿಸಿದೆ.
ಈ ಸಂಬಂಧದಲ್ಲಿ ನಗರದಲ್ಲಿ ಇಂದು ಮುಕ್ತಾಯವಾದ ದಕ್ಷಿಣದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಐ.ಜಿ.ಪಿ.ಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಗೋವಿಂದ ನಾರಾಯಣ್ ಅವರು, ಆಡಳಿತ ಯಂತ್ರವು ಗಲಭೆಯ ಮುನ್ಸೂಚನೆಗಳಿಗಾಗಿ ಸದಾ ಜಾಗೃತವಾಗಿರಬೇಕು ಎಂದು ಕರೆ ನೀಡಿದರು.
ಕೋಮುವಾರು ಸಂಘಗಳ ಕವಾಯತು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರ
ನವದೆಹಲಿ, ಜೂನ್.3– ಹಿಂಸಾಚಾರ ಎಸಗುವ ಉದ್ದೇಶಗಳಿಗಾಗಿ ಶಿಕ್ಷಣ ನೀಡುವ, ಕೋಮು, ಭಾಷೆ ಅಥವಾ ಪ್ರಾದೇಶಿಕ ಭಾವನೆಗಳನ್ನು ಕೆರಳಿಸುವುದಕ್ಕಾಗಿ ಪ್ರಚಾರದಲ್ಲಿ ತೊಡಗುವ ಸಂಸ್ಥೆಗಳನ್ನು ಕಾನೂನುಬಾಹಿರ ಎಂದು ಘೋಷಿಸಬಹುದಾದ ವಿಧೇಯಕಕ್ಕೆ ಸಂಸತ್ತು ಅನುಮೋದನೆ ನೀಡಿದೆ.
ಕ್ರಿಮಿನಲ್ ಶಾಸನ ತಿದ್ದುಪಡಿ ವಿಧೇಯಕ ಎಂದು ಕರೆಯಲಾಗಿರುವ ಅದನ್ನು ಈಗಾಗಲೇ ಲೋಕಸಭೆ ಅಂಗೀಕರಿಸಿದ್ದು, ರಾಜ್ಯಸಭೆ ಇಂದು ಅದಕ್ಕೆ ಒಪ್ಪಿದೆ ಕೊಟ್ಟಿದೆ.